ಅನನ್ಯಾ ಭಟ್ ಕಥೆ ಸುಳ್ಳು, ಫೋಟೋ ನಕಲಿ: ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಸುಜಾತ್ ಭಟ್
ಧರ್ಮಸ್ಥಳ ಬುರುಡೆ ಪ್ರಕರಣದ ನಡುವೆ, ಅನನ್ಯಾ ಭಟ್ ನಾಪತ್ತೆ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ನಾಪತ್ತೆ ದೂರು ನೀಡಿದ್ದ ವೃದ್ಧೆ ಸುಜಾತಾ ಭಟ್ ತಾನು ನೀಡಿದ್ದ ಹೇಳಿಕೆ ಸುಳ್ಳು ಎಂದು ಬಹಿರಂಗಪಡಿಸಿದ್ದಾರೆ.
ಸುಜಾತಾ ಭಟ್ ಅವರ ಹೇಳಿಕೆಯಿಂದಾಗಿ ಅನನ್ಯಾ ಭಟ್ ಎಂಬ ಹೆಸರಿನಲ್ಲಿ ನಾಪತ್ತೆ ಕೇಸ್ ದಾಖಲಾಗಿದ್ದು, ಎಸ್ಐಟಿ ತನಿಖೆಗೆ ಕೂಡ ಹೆಗಲೇರಿತ್ತು. ಆದರೆ ಇದೀಗ ಸುಜಾತಾ ಭಟ್ ಸಂದರ್ಶನದಲ್ಲಿ, “ಅನನ್ಯಾ ಅನ್ನೋ ಮಗಳೇ ಇಲ್ಲ, ಗಿರೀಶ್ ಮಟ್ಟೆಣ್ಣನವರ್ ಮತ್ತು ಜಯಂತ್ ಹೇಳಿದ ಹಾಗೆ ನಾನು ಮಾತಾಡಿದ್ದೆ. ಆಸ್ತಿ ಸಿಗದೆ ಹೋದ ಕಾರಣಕ್ಕೆ ಸುಳ್ಳು ಹೇಳಬೇಕಾದ ಪರಿಸ್ಥಿತಿ ಬಂದಿತ್ತು” ಎಂದು ಸ್ಪಷ್ಟಪಡಿಸಿದ್ದಾರೆ.
ತಾತನ ಆಸ್ತಿಯನ್ನು ಕುಟುಂಬಸ್ಥರು ಧರ್ಮಸ್ಥಳಕ್ಕೆ ದಾನವಾಗಿ ನೀಡಿರುವುದು ತಮಗೆ ನೋವಾಗಿದೆಯೆಂದು ಸುಜಾತಾ ಭಟ್ ಹೇಳಿದ್ದಾರೆ. “ನನ್ನ ಪಾಲು ಸಿಗಲಿಲ್ಲ, ನನನ್ನು ಮನೆಯಿಂದ ಹೊರಹಾಕಿದರು, ‘ಮಗಲೇ ಇಲ್ಲ’ ಎಂದು ಸಹಿ ಹಾಕಿದರು. ಇದು ನನಗೆ ದೊಡ್ಡ ನೋವು ತಂದಿತು” ಎಂದು ಕಣ್ಣೀರಿಟ್ಟಿದ್ದಾರೆ.
ಅನನ್ಯಾ ಭಟ್ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದ್ದ ಫೋಟೋ ಕೂಡ ಸುಳ್ಳೇ ಎಂದು ಅವರು ಒಪ್ಪಿಕೊಂಡಿದ್ದಾರೆ. “ಧರ್ಮಸ್ಥಳದ ಜನರ ಭಾವನೆ ಜೊತೆ ಆಟವಾಡುವ ಉದ್ದೇಶ ನನ್ನದು ಅಲ್ಲ. ಆದರೆ ಕೆಲವರು ನನ್ನಿಂದ ಹಾಗೆ ಮಾಡಿಸಿದರು” ಎಂದು ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?