ಇದೆಂಥಾ ದುರ್ವಿಧಿ... ರೌಂಡ್ಸ್ ವೇಳೆಯಲ್ಲಿಯೇ ಹೃದಯಾಘಾತಕ್ಕೆ ಬಲಿಯಾದ ಹಾರ್ಟ್ ಸರ್ಜನ್..!
ಚೆನ್ನೈ, ಆ.30: ಹೃದಯಾಘಾತದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ವಿಶೇಷವಾಗಿ ಯುವ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಸಾವಿಗೀಡಾಗುವವರ ಸಂಖ್ಯೆ ಆತಂಕಕಾರಿ ಮಟ್ಟಕ್ಕೆ ಏರಿದೆ. ಅನಾರೋಗ್ಯಕರ ಆಹಾರ ಪದ್ಧತಿ, ಅಸ್ತವ್ಯಸ್ತ ಜೀವನ ಶೈಲಿ ಮತ್ತು ನಿಯಮಿತ ಆರೋಗ್ಯ ತಪಾಸಣೆಗಳ ಕೊರತೆ ಇದಕ್ಕೆ ಕಾರಣವೆಂದು ವೈದ್ಯರು ಹೇಳುತ್ತಾರೆ. ಆದರೆ ಅಚ್ಚರಿಯ ಸಂಗತಿಯೇನೆಂದರೆ, ಹೃದಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಹೃದಯ ಶಸ್ತ್ರಚಿಕಿತ್ಸಕರೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಚೆನ್ನೈನ ಸವಿತಾ ವೈದ್ಯಕೀಯ ಕಾಲೇಜುಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 39 ವರ್ಷದ ಹೃದಯ ಶಸ್ತ್ರಚಿಕಿತ್ಸಕ ಡಾ. ಗ್ರಾಡ್ಲಿನ್ ರಾಯ್ ಆಸ್ಪತ್ರೆಯ ರೌಂಡ್ಸ್ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹಠಾತ್ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದರು. ಈ ಆಘಾತಕಾರಿ ಸುದ್ದಿ ವೈದ್ಯ ಸಮುದಾಯವನ್ನು ಬೆಚ್ಚಿ ಬೀಳಿಸಿದೆ.
ಡಾ. ರಾಯ್ ಅವರನ್ನು ಬದುಕಿಸಲು ಸಹೋದ್ಯೋಗಿಗಳು ಎಲ್ಲಾ ಪ್ರಯತ್ನಗಳನ್ನು ಮಾಡಿದರು. ಸಿಪಿಆರ್, ತುರ್ತು ಆಂಜಿಯೋಪ್ಲಾಸ್ಟಿ, ಸ್ಟೆಂಟಿಂಗ್, ಇಂಟ್ರಾ-ಅಯೋರ್ಟಿಕ್ ಬಲೂನ್ ಪಂಪ್ ಮತ್ತು ಇಸಿಎಂಒ ಸೇರಿದಂತೆ ಎಲ್ಲಾ ಆಧುನಿಕ ಚಿಕಿತ್ಸೆಗಳನ್ನು ನೀಡಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಈ ವಿಚಾರವನ್ನು ಹೈದರಾಬಾದ್ನ ನರವಿಜ್ಞಾನಿ ಡಾ. ಸುಧೀರ್ ಕುಮಾರ್ ತಮ್ಮ ಎಕ್ಸ್ (Twitter) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?