ಜನಾಕ್ರೋಶ ಬೆನ್ನಲ್ಲೇ ಮೆಟ್ರೋ ಪ್ರಯಾಣದರ ಇಳಿಕೆ..! BMRCL ನಿರ್ದೇಶಕ ಹೇಳಿದ್ದೇನು..?

ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ. ದರ ಹೆಚ್ಚಳದಿಂದ ಬೇಸರಗೊಂಡ ಬೆಂಗಳೂರಿನ ಜನ ಮೆಟ್ರೋದಲ್ಲಿ ಪ್ರಯಾಣಿಸುವುದನ್ನೇ ಕಡಿಮೆ ಮಾಡಿದ್ದಾರೆ. ಅನಿವಾರ್ಯ ಇದ್ದವರು ಮಾತ್ರ ದುಪ್ಪಟ್ಟು ಹಣ ನೀಡಿ ಪ್ರಯಾಣಿಸುತ್ತಿದ್ದಾರೆ.
ಸಾರ್ವಜನಿಕರ ತೀವ್ರ ಆಕ್ರೋಶ ಬೆನ್ನಲ್ಲೇ ಮೆಟ್ರೋ ದರ ಇಳಿಕೆ ಸಂಬಂಧ ಸ್ವಲ್ಪ ಬದಲಾವಣೆ ಮಾಡಲಾಗುತ್ತದೆ. ಶೀಘ್ರದಲ್ಲೇ ಪರಿಷ್ಕೃತ ದರ ಪ್ರಕಟಿಸಲಾಗುವುದು ಎಂದು ಬಿಎಂಆರ್ಸಿಎಲ್ ಎಂಡಿ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲೆಲ್ಲಿ 90%, 100% ಜಂಪ್ ಆಗಿದೆಯೋ ಎಲ್ಲೆಲ್ಲಿ ಬದಲಾವಣೆ ಮಾಡುತ್ತೇವೆ. ಸ್ವಲ್ಪ ರಿಲೀಫ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ನಿನ್ನೆ ರಾತ್ರಿಯಿಂದ ಈ ಬಗ್ಗೆ ಸಭೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದ್ದಲ್ಲಿ ಬೆಂಗಳೂರಿನಲ್ಲಿ ವಿಪರೀತ ದರ ಏರಿಕೆಯಾಗಿತ್ತು. ಮೆಟ್ರೋ ದರ ಇಳಿಕೆ ಮಾಡುವಂತೆ ಪಬ್ಲಿಕ್ ಟಿವಿ ನಿರಂತರವಾಗಿ ಅಭಿಯಾನ ನಡೆಸುತ್ತಿತ್ತು. ಸಾರ್ವಜನಿಕರಿಂದಲೂ ಬಿಎಂಆರ್ಸಿಎಲ್ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿತ್ತು. ವಿರೋಧ ಜಾಸ್ತಿ ಆಗುತ್ತಿದ್ದಂತೆ ಎಚ್ಚೆತ್ತ ಬಿಎಂಆರ್ಸಿಎಲ್ ದರವನ್ನು ಇಳಿಸಲು ಮುಂದಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






