ಬಸ್ ನಿಲ್ದಾಣ, ಸಿಗ್ನಲ್ ಆಯ್ತು ಈಗ ಮೆಟ್ರೋದಲ್ಲಿ ಎಂಟ್ರಿ: ಮೆಟ್ರೋ ರೈಲಿನಲ್ಲಿ ಭಿಕ್ಷಾಟನೆ ಮಾಡಿದ ವಿಶೇಷ ಚೇತನ ವ್ಯಕ್ತಿ

ಬೆಂಗಳೂರು: ಬೆಂಗಳೂರಿನ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಟ್ರಾಫಿಕ್ ಸಿಗ್ನಲ್ ಸೇರಿದಂತೆ ಜನಸಂದಣಿ ಇರುವ ಪ್ರದೇಶಗಳಲ್ಲಿ ಭಿಕ್ಷುಕರ ಹಾವಳಿ ಹೆಚ್ಚಾಗಿದೆ. ಇದೀಗ ನಮ್ಮ ಮೆಟ್ರೋಗೂ ಭಿಕ್ಷಾಟನೆ ಕಾಲಿಟ್ಟಿದೆ. ಇದೀಗ ವ್ಯಕ್ತಿಯೊಬ್ಬ ನಮ್ಮ ಮೆಟ್ರೋ ಒಳಗೂ ಭಿಕ್ಷಾಟನೆ ಮಾಡಿ ಪ್ರಯಾಣಿಕರಿಗೆ ಶಾಕ್ ನೀಡಿದ್ದಾನೆ ಎಂದು ವರದಿಯಾಗಿದೆ.
ನಮ್ಮ ಮೆಟ್ರೋದಲ್ಲಿ ಭಿಕ್ಷಾಟನೆಗೆ ಅವಕಾಶ ಇಲ್ಲ. ಆದರೂ ವ್ಯಕ್ತಿಯೊಬ್ಬ ಪ್ರಯಾಣಿಕರ ಸೋಗಿನಲ್ಲಿ ಬಂದು ಅಲ್ಲಿದ್ದವರ ಬಳಿ ಭಿಕ್ಷಾಟನೆ ಮಾಡಿದ್ದು, ಪ್ರಯಾಣಿಕರೆಲ್ಲ ಗಾಬರಿಯಿಂದ ಆತನನ್ನು ನೋಡಿದ್ದಾರೆ. ಮೆಟ್ರೋದಲ್ಲಿ ಯಾವಾಗಿನಿಂದ ಭಿಕ್ಷೆ ಬೇಡಲು ಅವಕಾಶ ಕೊಡಲಾಗಿದೆ ಎಂದು ತಲೆಕೆಡಿಸಿಕೊಂಡಿದ್ದಾರೆ. ಇನ್ನು ಈ ವಿಡಿಯೋ ಅನ್ನು ಪ್ರಯಾಣಿಕರೊಬ್ಬರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಘಟನೆ ನಡೆದಿರುವುದು ಚಲ್ಲಘಟ್ಟದಿಂದ ವೈಟ್ಫೀಲ್ಡ್ ಮಾರ್ಗದ ಮೆಟ್ರೋದಲ್ಲಿ ಎಂದು ಹೇಳಲಾಗುತ್ತಿದೆ. ಇನ್ನು ವಿಶೇಷ ಚೇತನ ವ್ಯಕ್ತಿ ಆಗಿರುವ ಅವರು, ತಮ್ಮ ದೈಹಿಕ ಸ್ಥಿತಿಯನ್ನು ಎಲ್ಲರಿಗೂ ತೋರಿಸಿ ಭಿಕ್ಷೆ ಕೇಳಿದ್ದಾರೆ. ಮೆಟ್ರೋದಲ್ಲೂ ಭಿಕ್ಷಾಟನೆ ಕಂಡು ಪ್ರಯಾಣಿಕರು ಆತಂಕದಿಂದ ನೋಡಿದ್ದಾರೆ. ಅಲ್ಲದೆ ಆ ವ್ಯಕ್ತಿ ಮೊದಲಿಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮೆಟ್ರೋ ಟಿಕೆಟ್ ಪಡೆದುಕೊಂಡು ಬಳಿಕ ಭಿಕ್ಷಾಟನೆ ಮಾಡಿರುವುದು ಪ್ರಯಾಣಿಕರಿಗೆ ಅಚ್ಚರಿ ತರಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?






