ಮುಂಬೈ ದಾಳಿಯ ಮಾಸ್ಟರ್ ಮೈಂಡ್ ರಾಣಾಗೆ ಭಾರಿ ಭದ್ರತೆ: ದಿನದ 24 ಗಂಟೆಯೂ ನಿಗಾ - ನೆಲದ ಮೇಲೆಯೇ ಬಾತ್ ರೂಂ!

ಮುಂಬೈ: 26/11 ದಾಳಿಯ ಮಾಸ್ಟರ್ ಮೈಂಡ್ ಮತ್ತು ಭಯೋತ್ಪಾದಕ ತಹವ್ವೂರ್ ರಾಣಾನನ್ನು ಭಾರತಕ್ಕೆ ಕರೆತರಲಾಗಿದೆ. ಆತನನ್ನು 18 ದಿನಗಳ ಕಸ್ಟಡಿಗೆ ಕಳುಹಿಸಲಾಗಿದೆ. ಈ ಸಮಯದಲ್ಲಿ ರಾಣಾನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತದೆ. ಭಾರತ ಬಹಳ ದಿನಗಳಿಂದ ತಹವ್ವೂರ್ ರಾಣಾನನ್ನು ಹಸ್ತಾಂತರಿಸುವಂತೆ ಒತ್ತಾಯಿಸುತ್ತಿತ್ತು. ಸದ್ಯ ಇದೀಗ ಭಾರತಕ್ಕೆ ಕೊನೆಗೂ ಯಶಸ್ಸು ಸಿಕ್ಕಿದೆ.
ಇನ್ನೂ ರಾಣಾನನ್ನ ಸುರಕ್ಷಿತವಾಗಿಡಲು 14*14 ಅಡಿಯ ಸೆಲ್ ವ್ಯವಸ್ಥೆ ಮಾಡಲಾಗಿದೆ. ಈ ಸೆಲ್ ಸಿಜಿಒ ಕಾಂಪ್ಲೆಕ್ಸ್ನಲ್ಲಿರುವ (CGO Complex) ಎನ್ಐಎ (NIA) ಕಚೇರಿಯ ಗ್ರೌಂಡ್ಫ್ಲೋರ್ನಲ್ಲಿ ಇದೆ. ಜೊತೆಗೆ ರಾತ್ರಿ ವೇಳೆಯೂ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ದೆಹಲಿ ಪೊಲೀಸರು ಹಾಗೂ ಅರೆಸೇನಾ ಪಡೆ ಸಿಬ್ಬಂದಿಯನ್ನ ಹೊರಾಂಗಣದಲ್ಲಿ ನಿಯೋಜಿಸಲಾಗಿದೆ.
ರಾಣಾ ಕೊಠಡಿ ಪ್ರವೇಶಿಸಲು ಮೂರ್ನಾಲ್ಕು ಹಂತಗಳಲ್ಲಿ ಡಿಜಿಟಲ್ ಸುರಕ್ಷತಾ ಪದರಗಳ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆಯೂ ನಿಗಾ ವಹಿಸಲು ಇಂಚಿಂಚಿಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 12 ಅಧಿಕಾರಿಗಳ ಸ್ಪೆಷಲ್ ಟೀಂಗೆ ಹೊರತುಪಡಿಸಿ ಉಳಿದವರು ಯಾರಿಗೂ ಇಲ್ಲಿ ಪ್ರವೇಸಿಸಲು ಅವಕಾಶ ಇಲ್ಲ ಎಂದು ಎನ್ಐಎ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ನೆಲದ ಮೇಲೆಯೇ ಬಾತ್ ರೂಂ
ಇನ್ನೂ ರಾಣಾಗೆ ವ್ಯವಸ್ಥೆ ಮಾಡಲಾದ ಈ ಸೆಲ್ (Speical Cell) ಒಂದು ಭದ್ರಕೋಟೆಯಂತಿದೆ. ನೆಲದ ಮೇಲೆಯೇ ಮಲಗಲು ರಾಣಾಗೆ ಒಂದು ಹಾಸಿಗೆ ಹಾಗೂ ಸ್ನಾನ ಗೃಹದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಊಟ, ಕುಡಿಯುವ ನೀರು, ವೈದ್ಯಕೀಯ ತಪಾಸಣೆ ಎಲ್ಲದಕ್ಕೂ ಆ 14*14 ಅಡಿಯ ಸೆಲ್ನಲ್ಲೇ ವ್ಯವಸ್ಥೆ ಮಾಡಲಾಗಿದೆ.
2008ರ ಮುಂಬೈ ದಾಳಿಯ ಉಗ್ರ ತಹವ್ವೂರ್ ರಾಣಾನನ್ನ ಗುರುವಾರ ವಿಶೇಷ ವಿಮಾನದ ಮೂಲಕ ಅಮೆರಿಕದಿಂದ ಭಾರತಕ್ಕೆ ಕರೆತರಲಾಯಿತು. ದೆಹಲಿಯ ಪಾಲಂ ಏರ್ಪೋರ್ಟ್ಗೆ ಬಂದಿಳಿಯುತ್ತಿದ್ದಂತೆ ರಾಣಾನನ್ನ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಪಟಿಯಾಲ ಕೋರ್ಟ್ಗೆ ಹಾಜರುಪಡಿಸಿ ಆತನನ್ನ 18 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿತು.
ನಿಮ್ಮ ಪ್ರತಿಕ್ರಿಯೆ ಏನು?






