Dharmasthala Case: ಅನನ್ಯ ಭಟ್ ನಾಪತ್ತೆ ಕೇಸ್ʼನಲ್ಲಿ ರೋಚಕ ಟ್ವಿಸ್ಟ್: ಕೇಸ್ ವಾಪಸ್ ಪಡೆಯಲು ಸುಜಾತಾ ಭಟ್ ತೀರ್ಮಾನ!
ಧರ್ಮಸ್ಥಳದಲ್ಲಿ ತಾನು ನೂರಾರು ಶವಗಳನ್ನು ಹೂತಿದ್ದೇನೆ ಎಂದು ಅನಾಮಿಕ ಕೊಟ್ಟ ದೂರಿನ ಆಧಾರದ ಮೇಲೆ ತನಿಖೆಗಾಗಿ ಎಸ್ಐಟಿ ರಚನೆಯಾಗಿ ಬಿರುಸಿನಿಂದ ತನಿಖೆ ನಡೆಸಿದೆ. ಒಂದು ಸ್ಥಳದಲ್ಲಿ ಅಸ್ಥಿಪಂಜರ ಸಿಕ್ಕರೇ, ಮತ್ತೊಂದು ಸ್ಥಳದಲ್ಲಿ ಮೂಳೆಗಳು ಸಿಕ್ಕಿವೆ. ಉಳಿದ ಸ್ಥಳಗಳಲ್ಲಿ ಯಾವುದೇ ಅಸ್ಥಿಪಂಜರ ಸಿಕ್ಕಿಲ್ಲ. ಈಗ ಎಸ್ಐಟಿ ಭೂಮಿ ಅಗೆಯುವ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.
ಮತ್ತೊಂದೆಡೆ ಸುಜಾತ ಭಟ್ ಎಂಬ ವೃದ್ದ ಮಹಿಳೆಯೂ ಪ್ರತ್ಯಕ್ಷರಾಗಿ 2003 ರಲ್ಲಿ ಧರ್ಮಸ್ಥಳದಲ್ಲಿ ತಮ್ಮ ಮಗಳು ಅನನ್ಯ ಭಟ್ ನಾಪತ್ತೆಯಾಗಿದ್ದಾರೆ. ಆಕೆಯನ್ನು ಯಾರೋ ಕೊಲೆ ಮಾಡಿ ಹೂತಿರಬಹುದು. ಆಕೆಯ ಅಸ್ಥಿಪಂಜರ ಸಿಕ್ಕರೇ, ಅದಕ್ಕೆ ತಾನು ಹಿಂದೂ ಧರ್ಮದ ವಿಧಿವಿಧಾನಗಳ ಪ್ರಕಾರ, ಶ್ರದ್ದಾ ಮಾಡುತ್ತೇನೆ, ಈ ಬಗ್ಗೆ ತನಿಖೆ ನಡೆಸಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಜುಲೈ 20 ರಂದು ಲಿಖಿತ ದೂರು ನೀಡಿದ್ದಾರೆ.
ಅನನ್ಯಾ ಭಟ್ ಪ್ರಕರಣವನ್ನು ಎಸ್ಐಟಿ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಪ್ರಕರಣದ ವಿವರ ನೀಡುವಂತೆ ಸುಜಾತಾ ಭಟ್ಗೆ ನೋಟಿಸ್ ನೀಡಿದೆ. ಆದರೆ ಎಸ್ಐಟಿ ನೋಟಿಸ್ಗೆ ಉತ್ತರಿಸದ ಸುಜಾತಾ ಭಟ್, ಅವರದ್ದೇ ಎನ್ನಲಾದ ಆಡಿಯೋ ಹರಿಬಿಟ್ಟು ಕೇಸ್ ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ. ಆದರೆ ಕೇಸ್ ಹಿಂಪಡೆಯುವ ಬಗ್ಗೆ ಎಸ್ಐಟಿಗೆ ಹೇಳಿಲ್ಲವೆಂದು ಟಿವಿ9ಗೆ ಎಸ್ಐಟಿ ಮೂಲಗಳಿಂದ ತಿಳಿದುಬಂದಿದೆ.
ಈಗಾಗಲೇ ಕೇಸ್ ಬಗ್ಗೆ ಒಂದು ಹಂತದ ಮಾಹಿತಿ ಪಡೆದಿರುವ ಎಸ್ಐಟಿ, ಸುಜಾತಾ ಭಟ್ ಹಿನ್ನೆಲೆ, ಕುಟುಂಬದ ಮಾಹಿತಿ, 2003ರಲ್ಲಿ ಅನನ್ಯಾ ಭಟ್ ಕಾಣೆಯಾಗಿದ್ದ ಬಗ್ಗೆ ಸಲ್ಲಿಸಿದ್ದ ದೂರು, ಇದೇ ಜುಲೈ 15ಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಸಲ್ಲಿಸಿದ್ದ ದೂರು ಎಲ್ಲದರ ಮಾಹಿತಿ ಪಡೆದುಕೊಂಡಿದೆ.
ಇನ್ನು ಮಗಳು ಅನನ್ಯಾ ಭಟ್ ನಾಪತ್ತೆ ವಿಚಾರವಾಗಿ ಸುಜಾತಾ ಭಟ್ ಹೋರಾಟಗಾರರಿಗೂ ಯಾಮಾರಿಸಿದರಾ ಎಂಬ ಅನುಮಾನುಗಳು ಸಹ ಮೂಡಿವೆ. ದೂರಿನಲ್ಲಿ ಹೇಳಿರುವುದನ್ನೇ ಹೋರಾಟಗಾರರಿಗೂ ಸುಜಾತಾ ಹೇಳಿದ್ದು, ಸತ್ಯ ಎಂದು ನಾಯಕರು ನಂಬಿದ್ದರು. ಅಷ್ಟೇ ಅಲ್ಲದೆ ಕೆಲ ದಿನಗಳ ಕಾಲ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿಯೇ ಸುಜಾತಾ ತಂಗಿದ್ದರು.
ಸುಜಾತಾ ಅವರಿಗೆ ಮಗಳು ಇದ್ದಳು ಎಂಬ ಬಗ್ಗೆ ದಾಖಲೆ ತೆಗೆಯಲು ಹೋರಾಟಗಾರರು ಮುಂದಾಗಿದ್ದರು. ಆದರೆ ದಾಖಲೆ ತೆಗೆಯಲು ಹಿಂದೇಟು ಅವರು ಹಾಕಿದ್ದರು. ಅದಾದ ಬಳಿಕ ಒಂದೊಂದಾಗಿ ಅಸಲಿಯತ್ತು ಬಹಿರಂಗಗೊಳ್ಳುತ್ತಿದ್ದಂತೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಿಂದ ಸುಜಾತಾ ಭಟ್ಗೆ ಗೇಟ್ ಪಾಸ್ ನೀಡಿದ್ದಾಗಿ ಟಿವಿ9ಗೆ ಹೋರಾಟಗಾರರ ತಂಡದ ಮೂಲಗಳಿಂದ ಮಾಹಿತಿ ನೀಡಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?