Doctor Death Case: ಇಂಜೆಕ್ಷನ್ ನೀಡಿ ವೈದ್ಯೆಯ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: ಅಕ್ರಮ ಸಂಬಂಧದ ಕರಾಳ ನೆರಳು?
ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ವೈದ್ಯೆ ಕೃತಿಕಾ ರೆಡ್ಡಿ ಪ್ರಕರಣವು ಕ್ಷಣಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿದೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತೀವ್ರ ವಿಚಾರಣೆ ನಡೆಸ್ತಿದ್ದಾರೆ. ಈ ಕೊಲೆಗೆ ಡಾ. ಕೃತಿಕಾ ಅನಾರೋಗ್ಯ ಮುಚ್ಚಿಟ್ಟು ಮದುವೆ ಮಾಡಿದ್ದು ಕಾರಣ ಎನ್ನಲಾಗಿತ್ತು. ಆದರೆ ಈಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಕೊಲೆಗೆ ನಿಖರ ಕಾರಣ ಏನು ಅನ್ನೋದು ಇನ್ನಷ್ಟೇ ತಿಳಿದುಬರಬೇಕಿದೆ. ಕೆಲವು ವರದಿಗಳ ಪ್ರಕಾರ ಆಕೆಗೆ ಅನಾರೋಗ್ಯದ ಸಮಸ್ಯೆ ಇತ್ತು ಅದರಿಂದ ಬೇಸತ್ತಿದ್ದ ಮಹೇಂದ್ರ ರೆಡ್ಡಿ ಈ ಕೃತ್ಯ ಮಾಡಿದ್ದಾನೆ ಎನ್ನಲಾಗಿದೆ. ಇನ್ನೂ ಕೆಲವಡೆ ಆಸ್ಪತ್ರೆ ಕಟ್ಟಬೇಕು ಎನ್ನುವ ಕನಸಿನಲ್ಲಿದ್ದ ಮಹೇಂದ್ರ ರೆಡ್ಡಿಗೆ ಕೃತಿಕಾ ರೆಡ್ಡಿಯ ಕುಟುಂಬದಿಂದ ಯಾವುದೇ ಸಹಾಯ ಸಿಗದ ಕಾರಣಕ್ಕೆ ಈ ಕೃತ್ಯ ಮಾಡಿದ್ದಾನೆ ಎನ್ನಲಾಗಿದೆ.
ಅದಲ್ಲದೆ ಮಹೇಂದ್ರ ರೆಡ್ಡಿಗೆ ಬೇರೆ ಯುವತಿಯೊಂದಿಗೆ ಅಕ್ರಮ ಸಂಬಂಧ ಇರುವ ಶಂಕೆ ಕೂಡ ವ್ಯಕ್ತವಾಗಿದೆ. ಅಕ್ರಮ ಸಂಬಂಧದಿಂದಲೇ ಮಗಳನ್ನ ಕೊಲೆ ಮಾಡಿರುವುದಾಗಿ ವೈದ್ಯ ಪತಿ ವಿರುದ್ಧ ಕೃತಿಕಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಅಕ್ರಮ ಸಂಬಂಧ ಇರೋದು ದೃಢವಾದಂತೆ ಕಾಣ್ತಿದೆ. ಆದ್ರೆ ಇದೇ ಕಾರಣಕ್ಕೆ ಕೊಲೆ ಮಾಡಿದ್ದಾನೆಯೇ ಅನ್ನೋದು ಇನ್ನೂ ನಿಗೂಢ. ಹೀಗಾಗಿ ಹಲವು ಆಯಾಮಗಳಲ್ಲಿ ಮಾರತ್ ಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗಂಡನಿಂದಲೇ ಕೊಲೆಯಾದ ವೈದ್ಯೆ ಕೃತಿಕಾ ರೆಡ್ಡಿ ಆಗರ್ಭ ಶ್ರೀಮಂತೆ. ಕುಟುಂಬದಲ್ಲಿ ಹಣಕಾಸಿಗೆ ಯಾವುದೇ ತೊಂದರೆ ಇರಲಿಲ್ಲ. ತಂದೆ ಮುನಿರೆಡ್ಡಿ ನೂರಾರು ಕೋಟಿ ಆಸ್ತಿ ಒಡೆಯನಾಗಿದ್ದಾರೆ. ಮುನ್ನೇಕೊಳಲುವಿನಲ್ಲಿ ಮುನಿರೆಡ್ಡಿ ಜಮೀನ್ದಾರರಾಗಿದ್ದು, ತಿಂಗಳಿಗೆ ಹತ್ತಾರು ಲಕ್ಷ ಬಾಡಿಗೆಯೇ ಬರುತ್ತೆ. ಹೀಗಾಗಿ ಮಗಳನ್ನ ಅದ್ಧೂರಿಯಾಗಿಯೇ ಮದ್ವೆ ಮಾಡಿಕೊಟ್ಟಿದ್ದರು. ಇತ್ತ ಕೊಲೆಗಡುಕ ಡಾಕ್ಟರ್ ಮಹೇಂದ್ರ ರೆಡ್ಡಿ ಕುಟುಂಬ ಕೂಡ ಕಡಿಮೆ ಏನಿರಲಿಲ್ಲ. ಆದ್ರೂ ಮಹೇಂದ್ರ ಕ್ಲಿನಿಕ್ ಆರಂಭಿಸಲು ಮುನಿರೆಡ್ಡಿಯೇ ಹಣಕಾಸಿನ ನೆರವು ನೀಡಿದ್ರು ಎಂದು ತಿಳಿದುಬಂದಿದೆ.
ಸದ್ಯ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿರುವ ಪೊಲೀಸರು, ಕ್ಲಿನಿಕ್ ಓಪನ್ ವಿಚಾರ ಹಾಗೂ ಅಕ್ರಮ ಸಂಬಂಧದ ಹಿನ್ನೆಲೆ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಎರಡು ವಿಷ್ಯಗಳಲ್ಲಿ ಕೊಲೆ ಮಾಡಿರಬಹುದು ಎಂದು ಕೃತಿಕಾ ರೆಡ್ಡಿ ತಂದೆ ಕೂಡ ಅನುಮಾನ ವ್ಯಕ್ತಪಡಿಸಿದ್ರು.
ನಿಮ್ಮ ಪ್ರತಿಕ್ರಿಯೆ ಏನು?