RCB ಸೇರಲು ಬಯಸಿದ್ರಾ ಡೆಲ್ಲಿ ಕ್ಯಾಪ್ಟನ್: ಟ್ವೀಟ್ ಮಾಡಿ ಪಂತ್ ಕೊಟ್ಟ ಸ್ಪಷ್ಟನೆ ಏನು!?

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಷಬ್ ಪಂತ್ ಅವರು ತನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಗರಂ ಆಗಿದ್ದಾರೆ. ಸತ್ಯ ಗೊತ್ತಿಲ್ಲದೆ ಏಕೆ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತೀರಿ ಎಂದು ಪಂತ್, ನೆಟ್ಟಿಗರ ವಿರುದ್ಧ ಖಾರವಾಗಿ ಮಾತನಾಡಿದ್ದಾರೆ.
ವಾಸ್ತವವಾಗಿ ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಪಂತ್ಗೆ ಸಂಬಂಧಿಸಿದ ಪೋಸ್ಟ್ವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಈ ಪೋಸ್ಟ್ನಲ್ಲಿ, ರಿಷಬ್ ಪಂತ್ ಆರ್ಸಿಬಿ ಸೇರಲು ಉತ್ಸುಕರಾಗಿದ್ದು, ಅವರ ಮ್ಯಾನೇಜರ್ ಮೂಲಕ ಆರ್ಸಿಬಿ ಮಾಲೀಕರನ್ನು ಸಂಪರ್ಕಿಸಿದ್ದಾರೆ. ಅಲ್ಲದೆ ಪಂತ್, ಆರ್ಸಿಬಿ ತಂಡದ ನಾಯಕರಾಗಲು ಬಯಸಿದ್ದರು. ಆದರೆ ಆರ್ಸಿಬಿ ಮ್ಯಾನೇಜ್ಮೆಂಟ್ ಪಂತ್ ಅವರ ಬೇಡಿಕೆಗೆ ಸಮ್ಮತಿಸಲಿಲ್ಲ. ಅಲ್ಲದೆ ಪಂತ್ ಆರ್ಸಿಬಿಗೆ ಬರುವುದು ವಿರಾಟ್ ಕೊಹ್ಲಿಗೆ ಇಷ್ಟವಿಲ್ಲ ಎಂದು ಬರೆಯಲಾಗಿತ್ತು. ಆದರೆ ಈ ಸುದ್ದಿಯನ್ನು ಆಧಾರರಹಿತ ಎಂದು ಕರೆದಿರುವ ಪಂತ್, ಸುಳ್ಳ ಸುದ್ದಿಯನ್ನು ಹಬ್ಬಿಸದಂತೆ ಸಲಹೆ ನೀಡಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ರಿಷಬ್ ಪಂತ್, ‘ಸುಳ್ಳು ಸುದ್ದಿ. ಸಾಮಾಜಿಕ ಜಾಲತಾಣಗಳಲ್ಲಿ ಯಾಕೆ ಇಂತಹ ಸುಳ್ಳು ಸುದ್ದಿ ಹಬ್ಬಿಸುತ್ತೀರಿ? ಇದು ಸಂಪೂರ್ಣವಾಗಿ ತಪ್ಪು. ಅನಗತ್ಯವಾಗಿ ಸುಳ್ಳು ವಾತಾವರಣ ಸೃಷ್ಟಿಸಬೇಡಿ. ಇದು ಸಂಭವಿಸುತ್ತಿರುವುದು ಇದೇ ಮೊದಲಲ್ಲ ಅಥವಾ ಕೊನೆಯ ಬಾರಿಯೂ ಅಲ್ಲ ಆದರೆ ಬರೆಯುವ ಮೊದಲು ದಯವಿಟ್ಟು ನಿಮ್ಮ ಆಪಾದಿತ ಮೂಲಗಳನ್ನು ಪರಿಶೀಲಿಸಿ. ದಿನೇ ದಿನೇ ಈ ರೀತಿಯ ಕೆಲಸಗಳು ಹೆಚ್ಚಾಗುತ್ತಿವೆ. ಈ ರೀತಿಯಾಗಿ ಸುಳ್ಳು ಸುದ್ದಿ ಹಬ್ಬಿಸುವವರಿಗೆ ಈ ಹೇಳಿಕೆ ಅನ್ವಯವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






