ʻಮಿಸ್ ಯು ಚಿನ್ನʼ ಅಂತ ಪೋಸ್ಟ್: ಅಪ್ರಾಪ್ತೆಯ ವೇಲ್ʼನಿಂದ ನೇಣು ಬಿಗಿದು ಯುವಕ ಆತ್ಮಹತ್ಯೆ!
ಚಿಕ್ಕಬಳ್ಳಾಪುರ: ಯುವಕನೊಬ್ಬ ತನ್ನ ಅಪ್ರಾಪ್ತೆ ಪ್ರೇಯಸಿಯ ವೇಲ್ನಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಬಾಲಕುಂಟಹಳ್ಳಿ ಗ್ರಾಮದ ಬಳಿ ನಡೆದಿದೆ.
ಮೃತನನ್ನು ಬಾಲಕುಂಟಹಳ್ಳಿಯ ನಿವಾಸಿ ಚಿರುತ್ ಕುಮಾರ್ (18) ಎಂದು ಗುರುತಿಸಲಾಗಿದೆ. ಆತ ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದನು. ಶನಿವಾರ ಬೆಳಿಗ್ಗೆ ಜಕ್ಕಲಮಡುಗು ಜಲಾಶಯದ ಬಳಿ ಹೊಂಗೆ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸಾಯುವ ಮೊದಲು ಚಿರುತ್ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ “ಮಿಸ್ ಯು ಚಿನ್ನ” ಎಂದು ಬರೆದು, ಅಪ್ರಾಪ್ತೆಯೊಂದಿಗೆ ತೆಗೆದ ಚಿತ್ರವನ್ನು ಪೋಸ್ಟ್ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತನ ಮೊಬೈಲ್ನಲ್ಲಿ ಆತ್ಮಹತ್ಯೆಗೆ ಮುನ್ನದ ಕೆಲವು ಸುಳಿವುಗಳು ಪತ್ತೆಯಾಗಿದ್ದು, ಕಳೆದ ಕೆಲವು ತಿಂಗಳಲ್ಲಿ ಚಿರುತ್ ಇಬ್ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಯುವುದಾಗಿ ಪೋಸ್ಟ್ ಮಾಡಿದ್ದನೆಂಬ ಮಾಹಿತಿ ಹೊರಬಂದಿದೆ. ಆಗ ಸ್ನೇಹಿತರು ಆತನಿಗೆ ಸಮಾಧಾನ ಹೇಳಿ ಮನೆಗೆ ಕರೆದುಕೊಂಡು ಬಂದಿದ್ದರು.
ಈ ಬಾರಿ ಆತ ನಿಜಕ್ಕೂ ಜೀವಬಿಟ್ಟಿದ್ದು, ಪೋಷಕರು ಮತ್ತು ಬಂಧುಗಳು ತೀವ್ರ ಶೋಕದಲ್ಲಿ ಮುಳುಗಿದ್ದಾರೆ. ಘಟನೆಯ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?