ಕಾಂತಾರ ನೋಡಿ ಎಲ್ಲೆ ಮೀರಿದ ಅಭಿಮಾನಿಗಳ ಹುಚ್ಚಾಟ: ಬೇಸರದಿಂದ ರಿಷಬ್ʼಗೆ ತುಳುಕೂಟ ಪತ್ರ
ಮಂಗಳೂರು:- ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಕಾಂತಾರ: ಚಾಪ್ಟರ್ 1 ಸಿನಿಮಾ ನೋಡಿದ ಕೆಲವರು ಹುಚ್ಚರಂತೆ ಆಡಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿನಿಮಾ ಬಿಡುಗಡೆ ಆಗಿ ಕೆಲವು ದಿನಗಳಾಗಿದ್ದು ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಗುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ.
ಈ ಹಿಂದೆ 2022 ರಲ್ಲಿ ‘ಕಾಂತಾರ’ ಸಿನಿಮಾ ಬಿಡುಗಡೆ ಆದಾಗ ಆರ್ಕೆಸ್ಟ್ರಾಗಳಲ್ಲಿ, ಖಾಸಗಿ ಕಾರ್ಯಕ್ರಮಗಳಲ್ಲಿ, ಟಿವಿ ಶೋಗಳಲ್ಲಿ ದೈವದ ಅನುಕರಣೆ ಮಾಡಲಾಗುತ್ತಿತ್ತು. ಇದೀಗ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆದಾಗಲೂ ಮತ್ತೆ ದೈವದ ಅನುಕರಣೆ ಮಾಡುತ್ತಿರುವ ಘಟನೆಗಳು ವರದಿ ಆಗುತ್ತಿವೆ. ಇದನ್ನು ತುಳುಕೂಟ ವಿರೋಧಿಸಿದ್ದು, ರಿಷಬ್ ಶೆಟ್ಟಿಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದೆ
ರಿಷಬ್ ಶೆಟ್ಟಿ ಅವರೇ ನೀವು ದೈವಗಳಲ್ಲಿ ಅಪಾರ ನಂಬಿಕೆ ಇರುವವರು ಎಂದು ಹಲವು ಬಾರಿ ಹೇಳಿಕೊಂಡಿದ್ದೀರಿ. ನೀವು ದೈವದ ಬಗ್ಗೆ ಸಿನಿಮಾ ಮಾಡಿದ್ದೀರಿ ಅದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ನಿಮ್ಮ ಸಿನಿಮಾ ನೋಡುವ ಅಭಿಮಾನಿಗಳಿಗೆ ದೈವದ ಬಗ್ಗೆ ಜಾಗೃತಿ ಮೂಡಿಸಿ. ‘ಕಾಂತಾರ’ ಬಂದಾಗಿನಿಂದಲೂ ದೈವದ ಅನುಕರಣೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬ ದೈವದ ವೇಷ ಧರಿಸಿ ಚಿತ್ರಮಂದಿರಕ್ಕೆ ಬಂದ ವಿಡಿಯೋ ವೈರಲ್ ಆಗಿತ್ತು. ಸಿನಿಮಾ ನೋಡುವಾಗಲೇ ಕೆಲ ಪ್ರೇಕ್ಷಕರು ದೈವ ಬಂದವರಂತೆ ವರ್ತಿಸಿದ್ದಾರೆ. ಇನ್ನು ಕೆಲವರು ಚಿತ್ರಮಂದಿರದಿಂದ ಹೊರಬಂದಾಗ ಕೂಗಾಡಿದ ವಿಡಿಯೋಗಳು ವೈರಲ್ ಆಗಿವೆ’
ದೈವಾರಾದನೆ ನಮ್ಮ ನಂಬಿಕೆ. ಕೂಡಲೇ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಜಾಗೃತಿ ಮೂಡಿಸಿ ಜೊತೆಗೆ ಸಿನಿಮಾ ಪ್ರದರ್ಶನಕ್ಕೆ ಮುಂಚೆ ಡಿಸ್ಕ್ಲೇಮರ್ ಹಾಕಿ’ ಎಂದು ತುಳುಕೂಟ ಆಗ್ರಹಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?