ಕುಡಿದ ಮತ್ತಲ್ಲಿ ಗಣೇಶನ ಮೂರ್ತಿ ವಿರೂಪಗೊಳಿಸಿದ ಭೂಪ!
ಬೆಂಗಳೂರು:ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ ವಿಗ್ರಹವನ್ನು ಹಾನಿಗೊಳಿಸಿದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗರ್ವೇಭಾವಿಪಾಳ್ಯದ ಖಾಸಗಿ ಬಿಲ್ಡಿಂಗ್ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾದ ಸುಮಾರು 2 ಅಡಿ ಎತ್ತರದ ಕಲ್ಲಿನ ಗಣೇಶ ವಿಗ್ರಹದ ಎಡ ಕಿವಿ ಮತ್ತು ಎಡ ಕೈ ಭಾಗಗಳು ಹಾನಿಗೊಳಗಾದವು. ಈ ಘಟನೆ ಆಗಸ್ಟ್ 24ರಂದು ಬೆಳಿಗ್ಗೆ ಸ್ಥಳೀಯರು ಗಮನಿಸಿದ ಬಳಿಕ, ವಿಗ್ರಹವನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆಂದು ಅನುಮಾನಿಸಿ ದೂರು ನೀಡಲಾಯಿತು.
ಪೊಲೀಸರ ತನಿಖೆಯಲ್ಲಿ ಆರೋಪಿ ಶಿವು, ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಬಿಲ್ಡಿಂಗ್ ಬಳಿ ಬಂದು, ದೇವರಿಗೆ ಕೈಮುಗಿಯಲು ಹೋಗುವಾಗ ಆಯತಪ್ಪಿ ಬಿದ್ದು ವಿಗ್ರಹಕ್ಕೆ ಹಾನಿ ಮಾಡಿದ ಸಂಗತಿ ಬೆಳಕಿಗೆ ಬಂದಿದೆ. ಬೊಮ್ಮನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?