ಜನರಿಗಾಗಿ ಕೆಲಸ ಮಾಡುವವರು ಎಂದಿಗೂ ಇತರರನ್ನು ನಿಂದಿಸುವುದಿಲ್ಲ: ಮೋದಿ ವಿರುದ್ಧ ಕೇಜ್ರಿವಾಲ್ ಕಿಡಿ

ನವದೆಹಲಿ: ಜನರಿಗಾಗಿ ಕೆಲಸ ಮಾಡುವವರು ಎಂದಿಗೂ ಇತರರನ್ನು ನಿಂದಿಸುವುದಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜೆಜೆ ಕ್ಲಸ್ಟರ್ಗಳ ನಿವಾಸಿಗಳಿಗೆ 1,675 ಫ್ಲಾಟ್ಗಳು ಮತ್ತು ಎರಡು ನಗರ ಪುನರಾಭಿವೃದ್ಧಿ ಯೋಜನೆಗಳು ಸೇರಿದಂತೆ 4,500 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಇಂದು ಚಾಲನೆ ನೀಡಿದ್ದಾರೆ. ಈ ವೇಳೆ ಮೋದಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಜನರಿಗಾಗಿ ಕೆಲಸ ಮಾಡುವವರು ಎಂದಿಗೂ ಇತರರನ್ನು ನಿಂದಿಸುವುದಿಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಇಂದು ದೆಹಲಿಗೆ ಬಂದು 43 ನಿಮಿಷಗಳ ಭಾಷಣ ಮಾಡಿದರು. ಅದರಲ್ಲಿ 39 ನಿಮಿಷಗಳ ಕಾಲ ದೆಹಲಿಯಲ್ಲಿ ಪ್ರಚಂಡ ಬಹುಮತದಿಂದ ರಚಿಸಲಾದ ಸರ್ಕಾರವನ್ನು ನಿಂದಿಸಿದರು ಎಂದಿದ್ದಾರೆ.
ದೆಹಲಿ ಸರ್ಕಾರ 10 ವರ್ಷಗಳಲ್ಲಿ ಮಾಡಿರುವ ಕೆಲಸಗಳನ್ನು ಲೆಕ್ಕ ಹಾಕಲು 2ರಿಂದ 3 ಗಂಟೆ ಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಆದರೆ ಬಿಜೆಪಿಯವರು ಇಂದು ಪ್ರಧಾನಿ ಹೇಳುವಂತಹ ಯಾವ ಕೆಲಸವನ್ನೂ ಮಾಡಿಲ್ಲ ಎಂದಿದ್ದಾರೆ. ಕೆಲಸ ಮಾಡುವವನನ್ನು ಬೈಯಬಾರದು, ಮಾಡದವನನ್ನು ಬೈಯಬೇಕು. ಪ್ರಧಾನಿಯವರು 2020ರಲ್ಲಿ ನಿರ್ಣಯದ ಪತ್ರವನ್ನು ನೀಡಿದ್ದರು. ಆದರೆ, ಇದುವರೆಗೆ 5 ವರ್ಷಗಳಲ್ಲಿ ಕೇವಲ 4700 ಮನೆಗಳನ್ನು ಮಾತ್ರ ನಿರ್ಮಿಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






