ಜಿಮ್ಸ್ʼನಲ್ಲಿ ಆಕ್ಸಿಜನ್ʼಗಾಗಿ ರೋಗಿಗಳ ನರಳಾಟ: ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಕಲಬುರಗಿ: ಜಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಶನಿವಾರ ಸಂಜೆ ವಿದ್ಯುತ್ ಕೈ ಕೊಟ್ಟಿದ್ದರಿಂದ ಐಸಿಯುನಲ್ಲಿದ್ದ ರೋಗಿಗಳು ಪರದಾಡುವಂತ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಈಗ ವೈರಲ್ ಆಗಿದೆ. ವಿದ್ಯುತ್ ಕೈ ಕೊಟ್ಟ ಬಳಿಕ ಬ್ಯಾಟರಿ ಮೂಲಕ ಆಕ್ಸಿಜನ್ ಪೂರೈಕೆ ಮಾಡಲು ಮುಂದಾಗಿದ್ದರು. ಆದರೆ, ಬ್ಯಾಟರಿಗಳು ಬ್ಯಾಕ್ ಅಪ್ ಬಾರದ ಹಿನ್ನಲೆಯಲ್ಲಿ ಆಫ್ ಆಗಿತ್ತು.
ಬಳಿಕ ವೈದ್ಯಕೀಯ ಸಿಬ್ಬಂದಿ ಹ್ಯಾಂಡ್ ಪಂಪ್ ಮೂಲಕ ಆಕ್ಸಿಜನ್ ಪೂರೈಕೆ ಮಾಡಿದ್ದಾರೆ. ವಿದ್ಯುತ್ ಕೈ ಕೊಟ್ಟಾಗ ಬ್ಯಾಟರಿ ಬ್ಯಾಕಪ್ ಇಲ್ಲದೆ ಆಕ್ಸಿಜನ್ ಕೊರತೆಯಿಂದ ರೋಗಿಗಳು ಪರದಾಡಿದ್ದರಿಂದ ರೋಗಿಗಳ ಕುಟುಂಬಸ್ಥರು ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ದ ಕಿಡಿ ಕಾರಿದ್ದಾರೆ.
ಇನ್ನು ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಹ್ಯಾಂಡ್ ಪಂಪ್ ಮೂಲಕ ಆಕ್ಸಿಜನ್ ಪೂರೈಕೆ ಮಾಡುವ ವಿಡಿಯೋವನ್ನು ವೈರಲ್ ಮಾಡಿದ್ದರ ಹಿಂದೆ ಖಾಸಗಿ ಆಸ್ಪತ್ರೆಗಳ ಕೈವಾಡ ಇರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರಿ ಆಸ್ಪತ್ರೆಯ ದಕ್ಷತೆಯನ್ನು ಅವರಿಗೆ (ಖಾಸಗಿ ಆಸ್ಪತ್ರೆಗಳು) ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ವಿಡಿಯೋ ವೈರಲ್ ಮಾಡಿದ್ದಾರೆ. ವೈರಲ್ ವಿಡಿಯೋದಲ್ಲಿ ಖಾಸಗಿ ಆಸ್ಪತ್ರೆ ಲೋಗೊ ಇದೆ ಎಂದು ಅವರು ದೂರಿದ್ದಾರೆ.
ಮೊನ್ನೆ ಐಸಿಯೂ ವಾರ್ಡ್ನಲ್ಲಿ ವಿದ್ಯುತ್ ಸಮಸ್ಯೆ ಆಗಿತ್ತು. ತಕ್ಷಣವೇ ವಿದ್ಯುತ್ ಬಂದಿದೆ. ಹೀಗಾಗಿ ಯಾವುದೇ ತೊಂದರೆಯಾಗಿಲ್ಲ. ತಾಂತ್ರಿಕ ದೋಷದಿಂದ ವಿದ್ಯುತ್ ಟ್ರಿಪ್ ಆಗಿತ್ತು. ಆದರೆ ಅಕ್ಸಿಜನ್ ಕೊರತೆಯಿರಲಿಲ್ಲ. ವಿದ್ಯುತ್ ಸಮಸ್ಯೆ ಬಗ್ಗೆ ಜೆಸ್ಕಾಂ ಎಂಡಿ ಜೊತೆ ಮಾತನಾಡಿದ್ದೇನೆ. ಜಿಮ್ಸ್ಗೆ ಪ್ರತ್ಯೆಕ ಎಇಇ ನೇಮಕ ಮಾಡುವಂತೆ ಸೂಚನೆ ನೀಡಿದ್ದೇನೆ. ವಿದ್ಯುತ್ ಸಮಸ್ಯೆ ಬಗೆಹರಿಸಲು ನಮಗೆ ಖಾಯಂ ಎಇಇ ಅವಶ್ಯಕತೆಯಿದೆ ಎಂದು ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






