ಜೀವಂತ ಗಂಡು ಮಗುವನ್ನ ಮಣ್ಣಿನಲ್ಲಿ ಹೂತು ಹಾಕಿದ ಪಾಪಿಗಳು..! ಕಂದಮ್ಮ ಬದುಕಿದ್ದೇ ಪವಾಡ

ಬೆಂಗಳೂರು: ಕೆಟ್ಟ ಮಕ್ಕಳು ಇರುತ್ತಾರೆಯೇ ಹೊರತು ಕೆಟ್ಟ ತಾಯಿ ಇರಲ್ಲ ಎಂಬ ಮಾತಿದೆ. ತಾಯಿ ಯಾವಾಗಲೂ ಮಕ್ಕಳಿಗೆ ಒಳ್ಳೆಯದನ್ನು ಬಯಸುವ ಜೀವ. ಆದ್ರೆ ಇಂತಹ ಮಾತುಗಳಿಗೆ ಅಪವಾದ ಎಂಬಂತೆ ಕೆಲ ಪ್ರಕರಣಗಳು ನಡೆಯುತ್ತಿರುತ್ತವೆ. ಅದೇ ರೀತಿ ನಿರ್ಜನ ಪ್ರದೇಶದಲ್ಲಿ ಹುಟ್ಟಿದ ಒಂದೇ ದಿನಕ್ಕೆ ಮಗುವನ್ನು ಜೀವಂತವಾಗಿ ಮಣ್ಣಲ್ಲಿ ಹೂತಿಟ್ಟು ಪಾಪಿಗಳು ಪರಾರಿಯಾದ ಅಮಾನವೀಯ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ನೆರಿಗಾದ ಕತ್ರಿಗುಪ್ಪೆ ದಿನ್ನೆ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿರ್ಜನ ಪ್ರದೇಶದ ತೋಪಿನಲ್ಲಿ ಕಟುಕರು ಮಗುವನ್ನ ಹೂತು ಹಾಕಿದ್ದಾರೆ. ಇವತ್ತು ಬೆಳಗ್ಗೆ ಮಗುವಿನ ಚೀರಾಟ, ಕಿರುಚಾಟ ಕಂಡ ಸ್ಥಳೀಯರು ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ H.K ಆಶಾ ನೇತೃತ್ವದಲ್ಲಿ ಮಗುವನ್ನು ರಕ್ಷಣೆ ಮಾಡಲಾಗಿದೆ. ಮಗುವಿಗೆ ಸಣ್ಣಪುಣ್ಣ ಗಾಯಗಳಾಗಿದ್ದು, ದೊಮ್ಮಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಇದೀಗ ಮಗು ಚೇತರಿಸಿಕೊಳ್ಳುತ್ತಿದೆ. ಸದ್ಯ ಪ್ರಕರಣವು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳೀಯರು ದೂರು ದಾಖಲಿಸಿದ್ದಾರೆ.
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






