ದೇವರಿಗೆ ತೆಂಗಿನಕಾಯಿ ಅರ್ಪಿಸುವುದೇಕೆ ಗೊತ್ತಾ? ಭಕ್ತರು ನೀವು ತಿಳಿಯಲೇಬೇಕು!

ಜನವರಿ 3, 2025 - 07:00
 0  8
ದೇವರಿಗೆ ತೆಂಗಿನಕಾಯಿ ಅರ್ಪಿಸುವುದೇಕೆ ಗೊತ್ತಾ? ಭಕ್ತರು ನೀವು ತಿಳಿಯಲೇಬೇಕು!

ತೆಂಗಿನಕಾಯಿ ಇಲ್ಲದೆ ಹಿಂದೂ ಧರ್ಮದಲ್ಲಿ ಯಾವುದೇ ದೇವತಾ ಕಾರ್ಯಗಳೂ ಪೂರ್ಣವಾಗುವುದಿಲ್ಲ. ಉತ್ತರ ಭಾರತದ ದೇವಸ್ಥಾನಗಳು ಅಥವಾ ಧಾರ್ಮಿಕ ಕಾರ್ಯಗಳಲ್ಲಿ ತೆಂಗಿನ ಕಾಯಿ ಬಳಕೆ ಅಷ್ಟಾಗಿ ಇಲ್ಲವಾದರೂ ದಕ್ಷಿಣ ಭಾರತದಲ್ಲಿ ಇದರ ಬಳಕೆ ವ್ಯಾಪಕವಾಗಿದೆ. ದೇವಸ್ಥಾನಕ್ಕೆ ಹೋದವರು ಸಾಮಾನ್ಯವಾಗಿ ಹಣ್ಣು-ಕಾಯಿ ಮಾಡಿಸದೆ ಬರುವುದಿಲ್ಲ. ಹಣ್ಣು-ಕಾಯಿ ಮಾಡಿಸುವುದು ಅಂದರೆ ದೇವರಿಗೆ ತೆಂಗಿನಕಾಯಿ ಹಾಗೂ ಹಣ್ಣಿನ ನೈವೇದ್ಯ ಮಾಡಿ ಅದರ ಪ್ರಸಾದ ಸ್ವೀಕರಿಸುವುದು. ಹಾಗೆಯೇ, ಶುಭಕಾರ್ಯಗಳಲ್ಲಿ ಕಲಶ ಸ್ಥಾಪಿಸುವಾಗಲೂ ಕಲಶದ ಮೇಲೆ ತೆಂಗಿನ ಕಾಯಿ ಇಟ್ಟೇ ಇಡುತ್ತಾರೆ. 

ಹಿಂದೂ ಧಾರ್ಮಿಕ ಪದ್ಧತಿ, ಸಂಪ್ರದಾಯದ ಬಹುಮುಖ್ಯ ಭಾಗ ತೆಂಗಿನಕಾಯಿ ಎಂದರೂ ತಪ್ಪಲ್ಲ. ತೆಂಗಿನಕಾಯಿಗೆ ಇಂತಹ ಮಹತ್ವದ ಸ್ಥಾನ ಇರುವ ಕಾರಣಗಳ ಬಗ್ಗೆ ನಾವು ನೋಡೋಣ.

ತೆಂಗಿನಮರವನ್ನು ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ. ಜನರ ಬದುಕಿನ ಬಹುಮುಖ್ಯ ವೃಕ್ಷಗಳಲ್ಲಿ ಇದು ಕೂಡಾ ಒಂದು. ಹಿಂದೂ ಧರ್ಮದಲ್ಲಿ ತೆಂಗು, ಎಳನೀರು, ತೆಂಗಿನ ಹೂವು ಸೇರಿದಂತೆ ತೆಂಗಿನ ಎಲ್ಲಾ ಭಾಗಕ್ಕೂ ಬಲು ಮಹತ್ವವಿದೆ. ಪೂಜಾ ಕೈಂಕರ್ಯದ ಸಂದರ್ಭದಲ್ಲಿ ತೆಂಗಿನಕಾಯಿ, ಎಳನೀರು ಬೇಕೇಬೇಕು. ಕೆಲವು ಭಾಗಗಳಲ್ಲಿ ಮಂಗಳಕಾರ್ಯಗಳಲ್ಲಿ ತೆಂಗಿನ ಹೂವನ್ನೂ ಬಳಸಲಾಗುತ್ತದೆ. ಅಂದರೆ, ವಿವಿಧ ಧಾರ್ಮಿಕ ಆಚರಣೆಗಳಲ್ಲಿ ತೆಂಗಿನಕಾಯಿ ಅಗತ್ಯವಾಗಿ ಬೇಕೇಬೇಕು. ಇದೇ ಕಾರಣದಿಂದ ತೆಂಗಿನಮರವನ್ನು ಅತ್ಯಂತ ಪವಿತ್ರ ಮತ್ತು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. 

ತೆಂಗಿನಕಾಯಿ ಇಲ್ಲದೆ ಯಾವುದೇ ಪೂಜೆ ಮತ್ತು ಧಾರ್ಮಿಕ ಕೈಂಕರ್ಯಗಳು ಅಪೂರ್ಣ ಎಂದೇ ಅರ್ಥ. ಶಾಸ್ತ್ರದ ಪ್ರಕಾರ ಪೂಜೆ ಸೇರಿದಂತೆ ಯಾವುದೇ ಧಾರ್ಮಿಕ ಕಾರ್ಯಗಳ ಸಂದರ್ಭದಲ್ಲಿ ತೆಂಗಿನಕಾಯಿಯನ್ನು ಬಳಸುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ, ನೆಮ್ಮದಿ ಸಿಗುತ್ತದೆ ಎಂಬುದು ನಂಬಿಕೆ. ದೇವತಾಕಾರ್ಯದಲ್ಲಿ ತೆಂಗಿನಕಾಯಿಯನ್ನು ಅರ್ಪಿಸುವುದರಿಂದ ಮನಸ್ಸು ಏಕಾಗ್ರತೆ ಹೊಂದಿ ಪ್ರತಿಯೊಂದು ಕೆಲಸವೂ ಸಾಂಗವಾಗಿ ನೆರವೇರುತ್ತದೆ ಎಂಬ ನಂಬಿಕೆ ಕೂಡಾ ಇದೆ.

ಪುರಾಣಗಳ ಪ್ರಕಾರ ವಿಷ್ಣು ದೇವರು ದೇವಿ ಲಕ್ಷ್ಮಿಯೊಂದಿಗೆ ಭೂಮಿಗೆ ಬಂದಾಗ ಮನುಕುಲದ ಕಲ್ಯಾಣಕ್ಕಾಗಿ ತನ್ನೊಂದಿಗೆ ಕಲ್ಪವೃಕ್ಷ ಎಂದರೆ ತೆಂಗಿನಮರ ಮತ್ತು ಕಾಮಧೇನುವನ್ನು ತಂದರಂತೆ. ವಿಷ್ಣು ಮತ್ತು ದೇವಿ ಲಕ್ಷ್ಮಿಗೆ ತೆಂಗಿನಕಾಯಿ ಬಲು ಪ್ರಿಯ ಎಂಬ ನಂಬಿಕೆ ಕೂಡಾ ಇದೆ. ಅದೂ ಅಲ್ಲದೆ, ತೆಂಗಿನಕಾಯಿಯನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಂಕೇತ ಎಂದೂ ಪರಿಗಣಿಸಲಾಗುತ್ತದೆ. ಇದರಿಂದ ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ಬಲು ಮಹತ್ವದ ಮತ್ತು ಪವಿತ್ರ ಸ್ಥಾನವೇ ಇದೆ.

ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸಲಾಗುತ್ತದೆ. ದೇವಸ್ಥಾನ, ಪೂಜಾ ಕಾರ್ಯ ಅಥವಾ ಯಾವುದೇ ಮಂಗಳಕಾರ್ಯಗಳ ಸಂದರ್ಭದಲ್ಲಿ ತೆಂಗಿನಕಾಯಿಯನ್ನು ಒಡೆಯಲಾಗುತ್ತದೆ. ಈ ತೆಂಗಿನಕಾಯಿ ಒಡೆಯುವ ಪದ್ಧತಿಯ ಪ್ರತಿಯೊಂದು ಹೆಜ್ಜೆಗೂ ಅದರದ್ದೇ ಆದ ಮಹತ್ವದ ಮತ್ತು ಆಳವಾದ ಅರ್ಥವಿದೆ. ಮೊದಲು ತೆಂಗಿನಕಾಯಿಯ ಸಿಪ್ಪೆಯನ್ನು ತೆಗೆಯಲಾಗುತ್ತದೆ. ಅಂದರೆ, ಇದು ನಾವು ತ್ಯಜಿಸಬೇಕಾದ ಆಂತರಿಕ ಮತ್ತು ಭೌತಿಕ ಆಸೆಗಳ ಸಂಕೇತ. ಹೀಗೆ ಸಿಪ್ಪೆ ಸುಲಿದ ತೆಂಗಿನಕಾಯಿಯನ್ನು ದೇವರೆದು ಅಥವಾ ನೆಲಕ್ಕೆ ಬಡಿದು ಒಡೆಯಲಾಗುತ್ತದೆ. ಇದು ನಮ್ಮ ಅಹಂಕಾರದ ಸಂಕೇತ. ಅಂದರೆ, ದೇವರೇ ಎಲ್ಲಾ ನಾವು ಬರೀ ಶೂನ್ಯ ಎಂಬರ್ಥ ಇಲ್ಲಿನದ್ದು. ದೇವರರಿಗೆ ಸಂಪೂರ್ಣ ಶರಣಾಗುವ ಸಂಕೇತವಿದು. ತೆಂಗಿನಕಾಯಿ ಒಡೆದ ನಂತರ ತೆಂಗಿನ ನೀರು ಅದರಿಂದ ಹರಿಯುತ್ತದೆ. ಇದು ನಮ್ಮೊಳಗಿನ ಎಲ್ಲಾ ನಕಾರಾತ್ಮಕತೆಯ ಸಂಕೇತ. ಅಂದರೆ, ನಮ್ಮ ಮನಸ್ಸು, ಆಂತರ್ಯದಲ್ಲಿರುವ ಎಲ್ಲಾ ನಕಾರಾತ್ಮಕತೆಯನ್ನು ತೊಡೆದು ಸ್ವಚ್ಚವಾದ ಜೀವನ ನಡೆಸಬೇಕು ಎಂಬುದನ್ನೂ ಇದು ಸಂಕೇತಿಸುತ್ತದೆ. ತೆಂಗಿನಕಾಯಿಯ ಮೃದುವಾದ ಒಳಭಾಗವು ಶಾಂತಿಯನ್ನು ಸಂಕೇತಿಸುತ್ತದೆ. ದೇವರ ಪೂಜೆಯ ಬಳಿಕ ಈ ಒಡೆದ ತೆಂಗಿನಕಾಯಿಯನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.

ಮನೆಯ ದೇವರ ಕೋಣೆ ಅಥವಾ ದೇವಸ್ಥಾನಗಳಲ್ಲಿ ಪೂಜಾ ಕಾರ್ಯಗಳಲ್ಲಿ ತೆಂಗಿನಕಾಯಿಯ ಬಳಕೆಯಾಗುತ್ತದೆ. ಮೊದಲೇ ಹೇಳಿದಂತೆ ತೆಂಗಿನಕಾಯಿಯಲ್ಲಿ ಮೂರು ಮೂರ್ತಿಗಳು ನೆಲೆಸಿದ್ದಾರೆ ನಂಬಿಕೆ ಇದೆ. ಅದೂ ಅಲ್ಲದೆ, ದೇವರ ಮುಂದೆ ತೆಂಗಿನಕಾಯಿ ಇಟ್ಟು ಪೂಜಿಸುವುದರಿಂದ ದೇವಿ ಲಕ್ಷ್ಮಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಹಾಗೂ ಯಾವುದೇ ಕಾರ್ಯಗಳು ವಿಘ್ನವಿಲ್ಲದೆ ಪೂರ್ಣಗೊಳ್ಳುತ್ತದೆ ಎಂಬುದು ನಂಬಿಕೆ. ಜತೆಗೆ, ಕಳಶದಲ್ಲಿಯೂ ತೆಂಗಿನಕಾಯಿಯನ್ನು ಇಡಲಾಗುತ್ತದೆ. ಹೀಗೆ ಕಳಶದಲ್ಲಿ ತೆಂಗಿನಕಾಯಿ ಇರಿಸಿದಾಗ ಅದು ಗಣೇಶನ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಮೊದಲ ಪೂಜೆ ಸಲ್ಲಿಕೆಯಾಗಬೇಕಾದದ್ದು ಗಣಪತಿಗೆ. ಹೀಗಾಗಿ, ಪೂಜೆ ಸಲ್ಲಿಕೆಯಾಗಬೇಕಾದದ್ದು ಗಣಪತಿಗೆ. ಹೀಗಾಗಿ, ಗಣಪತಿಯ ಆರಾಧನೆಯಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಎಂಬುದು ನಮ್ಮಲ್ಲಿರುವ ಶ್ರದ್ಧಾ ಭಕ್ತಿಯ ನಂಬಿಕೆ. ಇದೇ ಕಾರಣದಿಂದ ಕಳಶದ ಮೇಲೆ ತೆಂಗಿನಕಾಯಿಯನ್ನು ಇಡಲಾಗುತ್ತದೆ.

ತೆಂಗಿನಕಾಯಿಯಲ್ಲಿ ವಿವಿಧ ದೇವರ ಸಾನಿಥ್ಯ ಇರುವ ನಂಬಿಕೆ ಕೂಡಾ ಇದೆ. ಏಕಾಕ್ಷಿ ತೆಂಗಿನಕಾಯಿಯನ್ನು ದೇವಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ಇನ್ನು ತೆಂಗಿನಕಾಯಿಯಲ್ಲಿರುವ ಮೂರು ಕಣ್ಣಿಗಳು ಶಿವ ದೇವರ ತ್ರಿನೇತ್ರಗಳನ್ನು ಸಂಕೇತಿಸುತ್ತದೆ. ಇನ್ನೊಂದು ನಂಬಿಕೆಯ ಪ್ರಕಾರ ತೆಂಗಿನಕಾಯಿಯ ಒಳಗೆ ಇರುವ ಬಿಳಿ ಪದರ ಪಾರ್ವತಿ ದೇವಿಯ ಸಂಕೇತ. ತೆಂಗಿನಕಾಯಿಯೊಳಗಿರುವ ನೀರು ಗಂಗೆಯನ್ನು ಸೂಚಿಸುತ್ತದರೆ, ಕಂದು ಬಣ್ಣದ ಚಿಪ್ಪು ಕಾರ್ತಿಕೇಯನನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆ ಕೂಡಾ ಇದೆ. ಈ ಕಾರಣದಿಂದಲೂ ತೆಂಗಿನಕಾಯಿಗೆ ಬಲು ಪ್ರಾಮುಖ್ಯತೆ ಇದೆ.

ತೆಂಗಿನ ಕಾಯಿಯನ್ನು ಮನುಷ್ಯನ ತಲೆಗೆ ಹೋಲಿಸಲಾಗುತ್ತದೆ. ಅಂದರೆ, ತೆಂಗಿನ ನಾರು ಮನುಷ್ಯನ ಕೂದಲು, ಚಿಪ್ಪು ತಲೆಬುರುಡೆ, ನೀರು ರಕ್ತ, ಬಿಳಿಯ ಪದರ ಮೆದುಳನ್ನು ಪ್ರತಿನಿಧಿಸುತ್ತದೆ. ಹೀಗಾಗಿ, ಭಕ್ತರು ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸಿದರೆ ತಮ್ಮನ್ನೇ ದೇವರಿಗೆ ಅರ್ಪಿಸಿದಂತೆ. ಹೀಗೆ ತಮ್ಮ ಆತ್ಮವನ್ನು ಸಂಪೂರ್ಣ ದೇವರಿಗೆ ಅರ್ಪಿಸಿ ಭಕ್ತರು ಪರಮಶಕ್ತಿಗೆ ನಮಿಸುತ್ತಾರೆ. ಅದೂ ಅಲ್ಲದೆ, ತೆಂಗಿನಕಾಯಿಯನ್ನು ಇನ್ನೊಂದು ರೀತಿಯಲ್ಲೂ ವಿಶ್ಲೇಷಿಸಲಾಗುತ್ತದೆ.

ತೆಂಗಿನ ಚಿಪ್ಪು ಅಹಂಕಾರವನ್ನು ಪ್ರತಿನಿಧಿಸಿದರೆ, ಮೃದುವಾದ ತಿರುಳಿನ ಭಾಗ ಮಾನವನ ಹೃದಯವನ್ನೂ, ನೀರು ಶುದ್ಧತೆಯನ್ನು ಸಂಕೇತಿಸುತ್ತದೆ. ಹೀಗಾಗಿ, ಎಲ್ಲರೂ ತಮ್ಮೆಲ್ಲಾ ಅಹಂಕಾರವನ್ನು, ಕೆಟ್ಟ ಆಲೋಚನೆಗಳನ್ನು ತೊರೆದು ಪರಿಶುದ್ಧವಾಗಿ ಇರಬೇಕು ಎಂಬುದನ್ನು ಇದು ನೆನಪಿಸುತ್ತದೆ. ಅಜ್ಞಾನವನ್ನು ದೂರ ಮಾಡಿ ಪರಮ ಶಕ್ತಿಯಾದ ದೇವರ ಆಶೀರ್ವಾದವನ್ನು ಪಡೆಯಲು ಇದು ಪ್ರೇರೇಪಿಸುತ್ತದೆ ಎಂಬ ನಂಬಿಕೆ ಕೂಡಾ ನಮ್ಮದು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow