ಪ್ರಧಾನಿ ಮೋದಿ ಅಂಗಳಕ್ಕೂ ತಲುಪಿದ ಮುಡಾ ಹಗರಣ: 296 ಪುಟಗಳ ದಾಖಲೆ ಸಮೇತ ದೂರು

ಬೆಂಗಳೂರು: ಮೈಸೂರಿನ ಮೂಡಾ ಹಗರಣ ಇದೀಗ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು ವಿಪಕ್ಷಗಳ ಬಾಯಿಗೂ ಎಲೆ ಅಡಿಕೆಯಾಗಿಬಿಟ್ಟಿದೆ. ಇದರಿಂದ ಕರ್ನಾಟಕ ರಾಜಕೀಯದಲ್ಲಿ, ಅದರಲ್ಲೂ ಕಾಂಗ್ರೆಸ್ ಪಾಳಯದಲ್ಲಿ ಕ್ಷಣಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದೆ. ಏನಾಗುತ್ತದೆಯೋ ಏನೋ ಎಂಬ ಆತಂಕ ಕವಿದಿದೆ. ಇದರ ಬೆನ್ನಲ್ಲೇ ಮುಡಾ ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ವಕೀಲರೊಬ್ಬರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ವಕೀಲ ರವಿಕುಮಾರ್ ಎಂಬವರು ಈ ವರ್ಷ ಜು.19ರಂದು ಪ್ರಧಾನ ಮಂತ್ರಿಗಳಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ. 296 ಪುಟಗಳ ದಾಖಲೆ ಸಮೇತ ಪತ್ರ ರವಾನಿಸಲಾಗಿದೆ. ಈಗಾಗಲೇ ಪ್ರಧಾನಿಗಳ ಕಚೇರಿಗೆ ಪತ್ರ ತಲುಪಿದೆ. ಮುಡಾ ಮಾಜಿ ಆಯುಕ್ತರಾದ ದಿನೇಶ್ ಮತ್ತು ಡಿ.ಬಿ.ನಟೇಶ್ ಇಬ್ಬರೇ ಸರ್ಕಾರಕ್ಕೆ 100 ಕೋಟಿ ರೂ.ಗೂ ಅಧಿಕ ಆರ್ಥಿಕ ನಷ್ಟ ಮಾಡಿದ್ದಾರೆ.
ಅಲ್ಲದೇ ಸೇಲ್ ಡೀಡ್ ಮತ್ತು ಸೆಟ್ಲ್ಮೆಂಟ್ ಡೀಡ್ ಹೆಸರಿನಲ್ಲಿ ದೊಡ್ಡ ಭ್ರಷ್ಟಾಚಾರವಾಗಿದೆ ಎಂದು ಪತ್ರದಲ್ಲಿ ದಾಖಲಿಸಲಾಗಿದೆ. ದಿನೇಶ್ ಕುಮಾರ್ ಮತ್ತು ನಟೇಶ್ ಬೇನಾಮಿ ವಹಿವಾಟು ನಡೆಸಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






