ಬೆಂಗಳೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ! ಕಾಮುಕರು ಅರೆಸ್ಟ್

ಬೆಂಗಳೂರು: ಮಹಿಳಾ ಸಬಲೀಕರಣ, ಮಹಿಳಾ ಅಭಿವೃದ್ಧಿ ಎಂದು ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷಗಳು ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿವೆ. ಆದರೆ ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಇದೀಗ ಕೆಆರ್ ಮಾರ್ಕೆಟ್ನ ಗೋಡೌನ್ ಸ್ಟ್ರೀಟ್ನಲ್ಲಿ ಇಬ್ಬರು ದುಷ್ಕರ್ಮಿಗಳು ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗಣೇಶ್, ಶರವಣ ಬಂಧಿತ ಆರೋಪಿಗಳಾಗಿದ್ದು, ಅಷ್ಟೇ ಅಲ್ಲದೆ, ಮಹಿಳೆಯ ಬಳಿ ಇದ್ದ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದರು.
ಏನಿದು ಪ್ರಕರಣ?
ಕಳೆದ ಭಾನುವಾರ ಮಧ್ಯರಾತ್ರಿ 11.30ರ ವೇಳೆಗೆ ತಮಿಳುನಾಡಿನಿಂದ ಬಂದ ಮಹಿಳೆ ಯಲಹಂಕಕ್ಕೆ ತೆರಳಲು ಕೆ.ಆರ್ ಮಾರ್ಕೆಟ್ ಬಳಿ ಬಸ್ ಗಾಗಿ ಕಾಯುತ್ತಿರುವಾಗ ಘಟನೆ ನಡೆದಿದೆ.
ಯಲಹಂಕ ಕಡೆಗೆ ಬಸ್ ಬರದ ಕಾರಣ ಬಸ್ ಎಲ್ಲಿ ಬರುತ್ತೆ ಅಂತಾ ದುಷ್ಕರ್ಮಿಗಳನ್ನ ವಿಚಾರಿಸಿದ್ದಾರೆ. ಬಸ್ ಬರುವ ಜಾಗ ತೋರಿಸತ್ತೇವೆ ಅಂತಾ ಬಸ್ ನಿಲ್ದಾಣದ ಸಮೀಪದಲ್ಲೇ ಇರುವ ಗೋಡೌನ್ ಸ್ಟ್ರೀಟ್ಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರ ಮಾಡಿ ಮಹಿಳೆಯ ಮೇಲಿದ್ದ ಆಭರಣಗಳನ್ನ ದೋಚಿ ಪರಾರಿಯಾಗಿದ್ದಾರೆ.
ಸಂತ್ರಸ್ತ ಮಹಿಳೆ ಬೆಂಗಳೂರಿನ ಕೇಂದ್ರ ವಿಭಾಗದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಎರಡು ವಿಶೇಷ ತಂಡಗಳನ್ನ ರಚಿಸಿ ಕಾಮುಕರಿಗೆ ಹೆಡೆಮುರಿ ಕಟ್ಟಲು ಬಲೆ ಬೀಸಿದ್ದರು. ಇಂದು ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ನಿಮ್ಮ ಪ್ರತಿಕ್ರಿಯೆ ಏನು?






