ಮತ್ತೊಂದು ಅಮಾನವೀಯ ಘಟನೆ: ಕರುವಿನ ಬಾಲ ಕತ್ತರಿಸಿದ ಕ್ರೂರ ಪಾಪಿಗಳು..!

ನಮ್ಮ ರಾಜ್ಯದಲ್ಲಿ ಮೂಕ ಪ್ರಾಣಿಗಳ ಮೇಲೆ ಕಿಡಿಗೇಡಿಗಳ ದೌರ್ಜನ್ಯಕ್ಕೆ ಅಂತ್ಯ ಇಲ್ಲದಂತಾಗಿದೆ. ರಸ್ತೆಯ ಸಮೀಪದಲ್ಲಿ ಮಲಗಿರುವ ಹಸು- ನಾಯಿಗಳ ಮೇಲೆ ವಾಹನ ಚಲಾಯಿಸುವ ಅನೇಕ ಘಟನೆಗಳು ನಡೆಯುತ್ತಿದ್ದು, ಈ ಮಧ್ಯೆ ಬೆಂಗಳೂರಿನಲ್ಲಿ ನಡೆದ ಹಾಲು ತುಂಬಿದ ಮೂರು ಹಸುಗಳ ಕೆಚ್ಚಲಿಗೆ ಚಾಕು ಹಾಕಿದ ಘಟನೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.
ಇದೀಗ ಉಡುಪಿ ಜಿಲ್ಲೆಯಲ್ಲಿ ಕರುವಿನ ಬಾಲ ಕತ್ತರಿಸಿದ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಸೇಲ್ಸ್ಮ್ಯಾನ್ ಸೋಗಿನಲ್ಲಿ ಬಂದು ಕರುವಿನ ಬಾಲ ಕತ್ತರಿಸಿದ್ದಾನೆ.
ಗುಂಡ್ಮಿಯಲ್ಲಿ ಮಯ್ಯ ಕುಟುಂಬದ ಮನೆಯೊಂದಕ್ಕೆ ಸೇಲ್ಸ್ ಮ್ಯಾನ್ ಸೋಗಿನಲ್ಲಿ ಬಂದಿದ್ದ ದುರುಳ, ಮನೆಯವರನ್ನು ಕರೆದು ವಸ್ತುಗಳನ್ನು ತೋರಿಸಿದ್ದಾನೆ. ವಸ್ತುಗಳ ಖರೀದಿಗೆ ನಿರಾಕರಿಸಿ ಮಹಿಳೆ ಮನೆ ಬಾಗಿಲು ಹಾಕಿದ್ದಾರೆ. ಆ ಬಳಿಕ ಮನೆ ಬಳಿಯೇ ಇದ್ದ 2 ವರ್ಷದ ಕರುವಿನ ಬಾಲ ಕತ್ತರಿಸಿ ದುಷ್ಕರ್ಮಿ ಪರಾರಿಯಾಗಿದ್ದಾನೆ. ಘಟನೆಯನ್ನು ಹಿಂದೂ ಸಂಘಟನೆಗಳು ಖಂಡಿಸಿದ್ದು, ಆಕ್ರೋಶ ವ್ಯಕ್ತಪಡಿಸಿವೆ. ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿಮ್ಮ ಪ್ರತಿಕ್ರಿಯೆ ಏನು?






