ಮೇಘ ಸ್ಫೋಟಕ್ಕೆ ಓರ್ವ ವೃದ್ಧೆ ಬಲಿ: ಉಡುಪಿಯಲ್ಲಿ ಸಂಭವಿಸಿದ ದುರಂತ!

ಉಡುಪಿ:- ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದಲ್ಲಿ ಮೇಘಸ್ಫೋಟಕ್ಕೆ ಓರ್ವ ವೃದ್ಧೆ ಸಾವನ್ನಪ್ಪಿದ ಘಟನೆ ಜರುಗಿದೆ. ಭಾರಿ ಮಳೆಯಿಂದಾಗಿ ಉಡುಪಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ನಿನ್ನೆ ಸುರಿದ ಭಾರಿ ಮಳೆಯಲ್ಲಿ ಚಂದ್ರಾ ಗೌಡ್ತಿ(85) ಎಂಬ ವೃದ್ಧೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮೃತ ವೃದ್ಧೆ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ನಿವಾಸಿ. ನಿನ್ನೆ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇಂದು ಮುಂಜಾನೆ ಬಲ್ಲಾಡಿ ಪರಿಸದರದ ಗದ್ದೆ ಬಳಿ ವೃದ್ಧೆ ಶವ ಪತ್ತೆಯಾಗಿದೆ.
ನಿನ್ನೆ ಮೇಘಸ್ಫೋಟದಿಂದಾಗಿ ಏಕಾಏಕಿ ಭಾರಿ ಮಳೆ ಆಗಿತ್ತು. ಆಗುಂಬೆ ಘಾಟಿ ಪ್ರದೇಶದ ಸೇರಿ ಸುತ್ತಮುತ್ತ ನಿನ್ನೆ ಮಧ್ಯಾಹ್ನ 3 ಗಂಟೆಯಿಂದ 5ರವರೆಗೆ ನಿರಂತರ ಮಳೆಯಾಗಿತ್ತು. ಭಾರಿ ಮಳೆಯಿಂದಾಗಿ ಕಬ್ಬಿನಾಲೆ ಗುಡ್ಡದಿಂದ ಭಾರಿ ನೀರು ಹರಿದಿತ್ತು. ಸಂಜೆಯ ಬಳಿಕ ಮಳೆ ಕಡಿಮೆಯಾಗಿದೆ. ಸದ್ಯ ಈಗ ಮೋಡ ಕವಿದ ವಾತಾವರಣವಿದೆ.
ಇನ್ನು ಬಲ್ಲಾಡಿಯ ಈಶ್ವರನಗರ ಸಮೀಪದ ಬಮ್ಮಗುಂಡಿ ಹೊಳೆ ಉಕ್ಕಿ ಹರಿದು ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಭಾರೀ ಆವಾಂತರ ಸೃಷ್ಟಿಯಾಗಿದೆ. ಮೇಘಸ್ಫೋಟದಿಂದ ಉಂಟಾದ ಪ್ರವಾಹದಿಂದ ಮನೆಗಳು, ಕಾರು ಬೈಕ್ ಗಳು ಕೊಚ್ಚಿಕೊಂಡು ಹೋಗಿವೆ. ಮುದ್ರಾಡಿಯ ಹೊಸ ಕಂಬ್ಲ, ಕಾಂತರಬೈಲು, ಕೆಲಕಿಲ ಎಂಬಲ್ಲಿನ ಸುಮಾರು ಎಂಟು ಮನೆಗಳಿಗೆ ಪ್ರವಾಹದ ನೀರು ನುಗ್ಗಿದೆ. ನೆರೆಯಿಂದಾಗಿ ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಸಂಪೂರ್ಣ ಬಂದ್ ಆಗಿದ್ದು ಸ್ಥಳೀಯರು ಬದಲಿ ರಸ್ತೆಯ ಮೂಲಕ ಸಂಚರಿಸುತ್ತಿದ್ದಾರೆ
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






