ಮೈಸೂರಿನಲ್ಲಿ ದಾರುಣ ಘಟನೆ: ಬಾಲಕನನ್ನು ರಕ್ಷಿಸಲು ಹೋದ ಇಬ್ಬರು ಸಹೋದರರು ನೀರು ಪಾಲು
ಮೈಸೂರು ಜಿಲ್ಲೆಯ ಬಡಗಲಹುಂಡಿ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋದ ಇಬ್ಬರು ಸಹೋದರರು ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.
ಬಡಗಲಹುಂಡಿ ಗ್ರಾಮದ ರಮೇಶ್ ಅವರ ಮಗ ನವವಿವಾಹಿತ ನಂದನ್ (25) ಹಾಗೂ ರಮೇಶ್ ಅವರ ಸಹೋದರನ ಪುತ್ರ ರಾಕೇಶ್ (20) ಮೃತರಾಗಿದ್ದಾರೆ. ಇಬ್ಬರೂ ಅಣ್ಣತಮ್ಮಂದಿರ ಮಕ್ಕಳಾಗಿದ್ದು, ಸಂಬಂಧದಲ್ಲಿ ಸಹೋದರರಾಗಿದ್ದಾರೆ.
ಮಂಜು ಎಂಬ ಬಾಲಕ ವರಣ ಉಪನಾಲೆಗೆ ಈಜಲು ಹೋಗಿದ್ದಾಗ ನೀರಿನಲ್ಲಿ ಮುಳುಗತೊಡಗಿದ. ಆ ಸಮಯದಲ್ಲಿ ಗೊಬ್ಬರ ತೆಗೆದುಕೊಂಡು ನಾಲೆಯ ಮೇಲ್ಭಾಗದಲ್ಲಿ ಹೋಗುತ್ತಿದ್ದ ನಂದನ್ ಮತ್ತು ರಾಕೇಶ್, ಮಂಜುವನ್ನು ರಕ್ಷಿಸಲು ನೀರಿಗೆ ಹಾರಿದರು. ಆದರೆ ದುರದೃಷ್ಟವಶಾತ್ ಇಬ್ಬರೂ ನೀರಿನ ತೀವ್ರ ವೇಗದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡರು.
ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರ ಶವಗಳನ್ನು ಹೊರತೆಗೆದಿದ್ದಾರೆ. ಈ ದಾರುಣ ಘಟನೆಯಿಂದ ಬಡಗಲಹುಂಡಿ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?