ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ʼಟಾಕ್ಸಿಕ್ʼ ನಡುವೆ ʼರಾಮಾಯಣʼ ಶೂಟ್ʼನಲ್ಲಿ ಭಾಗಿಯಾದ ರಾಕಿಂಗ್ ಸ್ಟಾರ್

ನಿತೇಶ್ ತಿವಾರಿ ಅವರ 'ರಾಮಾಯಣ' ಬಾಲಿವುಡ್ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ರಾಮ ಮತ್ತು ಸೀತೆಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ 'ರಾವಣ' ಪಾತ್ರಕ್ಕೆ ನಟ ಯಶ್ ಅವರನ್ನು ಆಯ್ಕೆ ಮಾಡಲಾಗಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಕೆಜಿಎಫ್ ಖ್ಯಾತಿಯ ನಟ 'ಯಶ್' ಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದಾರೆ.
ಈ ಚಿತ್ರದಲ್ಲಿ ಯಶ್ ರಾವಣನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರನ್ನು ಈ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಾಯಿ ಪಲ್ಲವಿ ಮತ್ತು ರಣಬೀರ್ ಕಪೂರ್ ಈಗಾಗಲೇ ಮುಂಬೈನಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು ಯಶ್ ಅವರು ಇಷ್ಟು ದಿನ ‘ಟಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಅದರ ನಡುವೆ ಬಿಡುವು ಮಾಡಿಕೊಂಡು ಮುಂಬೈಗೆ ತೆರಳಿದ್ದಾರೆ. ಅಲ್ಲಿ ಫೆಬ್ರವರಿ 21ರಿಂದಲೇ ‘ರಾಮಾಯಣ’ ಸಿನಿಮಾದ ಚಿತ್ರೀಕರಣದಲ್ಲಿ ಅವರು ಭಾಗಿ ಆಗಿದ್ದಾರೆ. 2 ದಿನಗಳ ಕಾಲ ಕಾಸ್ಟ್ಯೂಮ್ ಟೆಸ್ಟ್ ಮಾಡಲಾಗಿದೆ. ಬಳಿಕ ಯುದ್ಧದ ದೃಶ್ಯಗಳ ಚಿತ್ರೀಕರಣ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಬಾಲಿವುಡ್ನ ‘ರಾಮಾಯಣ’ ಸಿನಿಮಾಗೆ ನಿತೇಶ್ ತಿವಾರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ರಣಬೀರ್ ಕಪೂರ್ ಅವರು ರಾಮನ ಪಾತ್ರ ಮಾಡುತ್ತಿದ್ದಾರೆ. ನಟಿ ಸಾಯಿ ಪಲ್ಲವಿ ಅವರಿಗೆ ಸೀತೆಯ ಪಾತ್ರ ನೀಡಲಾಗಿದೆ. ಬಹುತಾರಾಗಣದ ಈ ಸಿನಿಮಾದ ಮೇಲೆ ಬಹಳ ನಿರೀಕ್ಷೆ ಇದೆ. ವರದಿಗಳ ಪ್ರಕಾರ ರಣಬೀರ್ ಕಪೂರ್ ಅವರು ಈಗಾಗಲೇ ತಮ್ಮ ಪಾತ್ರಕ್ಕೆ ಶೇಕಡ 90ರಷ್ಟು ಚಿತ್ರೀಕರಣವನ್ನು ಮುಗಿಸಿದ್ದಾರೆ.
ಈ ಸಿನಿಮಾದ ನಿರ್ಮಾಣದಲ್ಲೂ ಯಶ್ ಅವರು ಪಾಲುದಾರಿಕೆ ಹೊಂದಿದ್ದಾರೆ. ಹಾಗಾಗಿ ಅವರಿಗೆ ಈ ಪ್ರಾಜೆಕ್ಟ್ ತುಂಬ ಮಹತ್ವದ್ದಾಗಿದೆ. ಮುಂಬೈನ ಅಕ್ಸಾ ಬೀಚ್ನಲ್ಲಿ ಯುದ್ಧದ ದೃಶ್ಯಗಳ ಶೂಟಿಂಗ್ ಮಾಡಲಾಗುತ್ತಿದ್ದು, ಅದರಲ್ಲಿ ಯಶ್ ಪಾಲ್ಗೊಂಡಿದ್ದಾರೆ. ಯುದ್ಧದ ದೃಶ್ಯ ಆಗಿದ್ದರೂ ಕೂಡ ಇದರಲ್ಲಿ ರಣಬೀರ್ ಕಪೂರ್ ಅವರು ಭಾಗಿಯಾಗಿಲ್ಲ ಎನ್ನಲಾಗಿದೆ. ಮುಂದಿನ ದೃಶ್ಯಗಳನ್ನು ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗುವುದು ಎಂದು ವರದಿಯಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






