ಹೊಸ ಟ್ವಿಸ್ಟ್​ ಪಡೆದುಕೊಂಡ ಸೀತಾರಾಮ ಸೀರಿಯಲ್: ಸಿಹಿ ಬಿಟ್ಟು ಕೊಡ್ತಾಳಾ ಸೀತಾ!

ಸೆಪ್ಟೆಂಬರ್ 18, 2024 - 18:01
 0  9
ಹೊಸ ಟ್ವಿಸ್ಟ್​ ಪಡೆದುಕೊಂಡ ಸೀತಾರಾಮ ಸೀರಿಯಲ್: ಸಿಹಿ ಬಿಟ್ಟು ಕೊಡ್ತಾಳಾ ಸೀತಾ!

ಕನ್ನಡಿಗರ ಮೆಚ್ಚಿನ ಧಾರಾವಾಹಿಗಳ ಸಾಲಿನಲ್ಲಿ ಸೀತಾರಾಮ ಕೂಡ ಒಂದಾಗಿದೆ. ರಾಮ-ಅಶೋಕನ ಸ್ನೇಹ, ಸಿಹಿಯ ಮುದ್ದು ಮಾತು, ಬಿಂದಾಸ್​ ಪ್ರಿಯಾ ತರ್ಲೆ, ಸೀತಾ-ರಾಮನ ಪ್ರೇಮ ಕಹಾನಿ ವೀಕ್ಷಕರ ಮನಸ್ಸು ಗೆದ್ದಿದೆ.

ಇನ್ನೂ ಸೀತಾರಾಮ ಸೀರಿಯಲ್ ದಿನದಿಂದ ದಿನಕ್ಕೆ ಟ್ವಿಸ್ಟ್ ಸಿಗುತ್ತಿದ್ದು, ಇದೀಗ ಸಿಹಿಯ ನಿಜವಾದ ಅಪ್ಪ ಅಮ್ಮನ ವಿಚಾರ ಬಹಿರಂಗೊಂಡಿದೆ. ಸಿಹಿಯ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿರುವ ಸೀತಾ ಮಗಳನ್ನು ಬಿಟ್ಟು ಕೊಡಲು ತಯಾರಿಲ್ಲ. ಸೌಂದರ್ಯ ಹಾಳಾಗುತ್ತೋ ಎಂದು ಬಾಡಿಗೆ ತಾಯ್ತನ ಮೊರೆ ಹೋದ ಶಾಲಿನಿ ಮತ್ತೊಂದೆಡೆ, ಮಗು ಆಗದೇ ಸಂಕಷ್ಟದಲ್ಲಿರುವ ಸಾಧನ ಇನ್ನೊಂದೆಡೆ. 

ಎಸ್, ಸೀತಾರಾಮ ಸೀರಿಯಲ್​ ನೋಡುಗರಿಗೆ ಇದಾಗಲೇ ತಿಳಿದಿರುವಂತೆ, ಸೀತಾ ಸಿಹಿಯನ್ನು ಬಾಡಿಗೆ ತಾಯ್ತನದ ಮೂಲಕ ಹೆತ್ತಿದ್ದಾಳೆ. ಈಗ ಸಿಹಿಯ ಅಪ್ಪ-ಅಮ್ಮ ಡಾ.ಮೇಘಶ್ಯಾಮ್  ಮತ್ತು ಶಾಲಿನಿ ಎನ್ನುವ ಸತ್ಯ ಬಹಿರಂಗವಾಗಿದೆ. ಸಿಹಿ ಎಲ್ಲಿ ಮೂಲ ಅಪ್ಪ-ಅಮ್ಮನ ಜೊತೆ ಹೋಗುತ್ತಾಳೆಯೋ ಎನ್ನುವ ಸಂಕಟದಲ್ಲಿದ್ದಾಳೆ ಸೀತಾ. ನಾಲ್ಕೈದು ವರ್ಷ ಸಾಕಿ ಬೆಳೆಸಿದ ಕಂದ ಬೇರೊಬ್ಬರ ಪಾಲಾಗುವುದನ್ನು ಆಕೆ ಸಹಿಸಳು. ತನ್ನ ಕರುಳ ಬಳ್ಳಿಯನ್ನು ಮತ್ತೊಬ್ಬರಿಗೆ ಒಪ್ಪಿಸಲು ಈ ಅಮ್ಮ ಸಹಿಸಳು. ಕಾನೂನಿನ ಪ್ರಕಾರ ಈಕೆ ತಾಯಿಯಲ್ಲ, ಆದರೆ ಜನ್ಮ ಕೊಟ್ಟ ಮಗುವನ್ನು ಅನಿವಾರ್ಯ ಕಾರಣಗಳಿಂದಾಗಿ ತಾನೇ ಸಾಕು-ಸಲಹಬೇಕಾದ ಸ್ಥಿತಿ ಬಂದಾಗ, ಆ ಮಗುವಿಗಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡಿದ ತಾಯಿ ಸೀತಾ. ಇಂಥ ಪರಿಸ್ಥಿತಿಯಲ್ಲಿ ಈಗ ಏಕಾಏಕಿ ಬಂದು ಮಗು ನಿನ್ನದಲ್ಲ ಎಂದುಬಿಟ್ಟರೆ, ಆ ಒಡಲಿಗೆ ಅದ್ಯಾವ ಪರಿಯ ಸಂಕಟವಾಗುತ್ತದೆ ಎನ್ನುವುದು ತಾಯಿಯಾದವಳು ಮಾತ್ರ ಅರ್ಥ ಮಾಡಿಕೊಳ್ಳಬಲ್ಲಳು.

ಇದು ಸೀತಾ ಕ್ಯಾರೆಕ್ಟರ್​. ಮಕ್ಕಳಿಗಾಗಿ ಯಾವ ಹಂತಕ್ಕಾದರೂ ಹೋಗಲು ಸೈ, ಮಗುವೇ ಪ್ರಪಂಚ, ಅಮ್ಮನಾಗುವುದೇ ಭಾಗ್ಯ ಎಂದುಕೊಳ್ಳುವಂಥ ಸೀತಾ ಕ್ಯಾರೆಕ್ಟರ್​ನ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎನ್ನುವುದು ಹೇಳಬೇಕಾಗಿಲ್ಲ. ಇನ್ನೊಂದು ಕ್ಯಾರೆಕ್ಟರ್​ ಸಾಧನಾದ್ದು. ಈಕೆಗೆ ಮಕ್ಕಳಿಲ್ಲ. ಮಕ್ಕಳಿಗಾಗಿ ಹಂಬಲಿಸುತ್ತಿದ್ದಾಳೆ. ಆದರೆ ಆ ದೇವರು ಈಕೆಯ ಮೇಲೆ ಕೃಪೆ ತೋರಲಿಲ್ಲ. ಸಾಧನಾಳಂಥ ಹೆಣ್ಣುಮಕ್ಕಳು ಅದೆಷ್ಟೋ ಮಂದಿ ಇದ್ದಾರೆ. ಕಾರಣ ಏನೇ ಇರಬಹುದು, ದೋಷ ಗಂಡನದ್ದೋ, ಹೆಂಡತಿಯದ್ದೋ ಬೇರೆಯ ವಿಷಯ.  ಆದರೆ ತನ್ನ ಗರ್ಭದಿಂದ ಮಗು ಬಂದು ಆ ಮಗು ತನ್ನನ್ನು ಅಮ್ಮಾ ಎಂದು ಕರೆಯಬೇಕು ಎಂದು ಬಯಸುವ ಸಾಧನಾಳಂತೆ ಕಣ್ಣೀರು ಹಾಕುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದಕ್ಕೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಐವಿಎಫ್​ ಸೆಂಟರ್​ಗಳೇ ಸಾಕ್ಷಿಯಾಗಿದೆ. 

ಅದೇ ಇನ್ನೊಂದು ಕ್ಯಾರೆಕ್ಟರ್​ ಶಾಲಿನಿಯದ್ದು. ಈಕೆ ಸೀರಿಯಲ್​ನಲ್ಲಿ ಸೀತಾಳ ಜೈವಿಕ ತಾಯಿ. ಕಾನೂನುಬದ್ಧ ತಾಯಿ. ಆದರೆ ತಾಯಿಯೆನ್ನುವ ಮಮಕಾರ ಎಳ್ಳಷ್ಟೂ ಇಲ್ಲ. ಈಗ ಸಾಧನಾ ಬಂದು ನೀವ್ಯಾಕೆ ಬಾಡಿಗೆ ತಾಯಿಯ ಮೊರೆ ಹೋಗಿದ್ದೀರಿ ಎನ್ನುವ ಪ್ರಶ್ನೆಗೆ ಆಕೆ, ತಾಯಿಯಾದರೆ ಸೌಂದರ್ಯ ಹಾಳಾಗುತ್ತದೆ, ಅದೆಲ್ಲಾ ನನಗೆ ಹಿಡಿಸದು. ಒಂದು ಮಗುವಿಗಾಗಿ ಹೆಣ್ಣು ಇಷ್ಟೆಲ್ಲಾ ಕಷ್ಟಪಡಬೇಕಾ ಅದಕ್ಕಾಗಿಯೇ ಬಾಡಿಗೆ ತಾಯ್ತನದ ಮೊರೆ ಹೋಗಿದ್ದು ಎನ್ನುತ್ತಾಳೆ. ಆಗ ಸಾಧನಾ ತನಗೆ ಮಗುವಾಗದೇ ಇರುವ ನೋವನ್ನು ತೋಡಿಕೊಂಡರೆ, ಸೀತಾ ತಾಯ್ತನದ ಸುಖವನ್ನು ಹೇಳುತ್ತಾಳೆ. ಸೌಂದರ್ಯ ಹಾಳಾಗುತ್ತದೆ ಎನ್ನುವುದು ಸುಳ್ಳು. ಆದರೆ ಹೆಣ್ಣು ಮಗುವಾದ ಮೇಲೆ ಇನ್ನೂ ಹೆಚ್ಚು ಸುಂದರಿಯಾಗುತ್ತಾಳೆ ಎಂದೆಲ್ಲಾ ಹೇಳುತ್ತಾಳೆ. ಆದರೆ ಇದ್ಯಾವುದನ್ನೂ ಕೇಳುವ ಸ್ಥಿತಿಯಲ್ಲಿ ಇಲ್ಲ ಶಾಲಿನಿ. ಈ ಮೂವರು ಮಹಿಳೆಯರು ಇಂದಿನ ಸಮಾಜದ ಪ್ರತಿರೂಪಗಳು!

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow