ಕಾಂಗ್ರೆಸ್ ಶಾಸಕರಿಗೆ BJP 50 ಕೋಟಿ ಅಲ್ಲ, 100 ಕೋಟಿ ಆಫರ್! ಗಣಿಗ ರವಿಕುಮಾರ್ ಗಂಭೀರ ಆರೋಪ

ಮಂಡ್ಯ: ಸಿದ್ದರಾಮಯ್ಯ ಸರ್ಕಾರ ಕಿತ್ತು ಹಾಕಬೇಕೆಂದು ಒಬ್ಬೊಬ್ಬ ಎಂಎಲ್ಎಗೆ 50 ಕೋಟಿ ರೂಪಾಯಿ ಆಫರ್ ಮಾಡಿದ್ದಾರೆ ಎಂಬ ಸಿಎಂ ಹೇಳಿಕೆ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ದಂಗು ಬಡಿಸುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿಯಿಂದ 50 ಕೋಟಿ ಅಲ್ಲ, 100 ಕೋಟಿ ರೂಪಾಯಿ ಆಫರ್ ಬಂದಿದೆ. ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡುತ್ತೇವೆ ಶಾಸಕ ರವಿಕುಮಾರ್ ಗೌಡ ಗಣಿಗ ಹೊಸ ಬಾಂಬ್ ಸಿಡಿಸಿದ್ದಾರೆ.
ಹಣದ ಆಫರ್ ಕೊಟ್ಟಿದ್ದು ಯಾರು ಎಂಬುದು ಮಾತನಾಡಿದವರಿಗೂ ಗೊತ್ತು, ಮಾತನಾಡಿಸಿದವರಿಗೂ ಗೊತ್ತು. ನಮ್ಮತ್ರ ದಾಖಲೆಗಳಿವೆ. ಸೂಕ್ತ ಸಮಯದಲ್ಲಿ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡುತ್ತೇವೆ. ಬಿಜೆಪಿಯವರಿಗೆ ಹಿಂದಿನ ಸರ್ಕಾರದಲ್ಲಿ ಮಾಡಿದ್ದ ಹಗರಣಗಳ ಕಂಟಕ ಸುತ್ತಿಕೊಂಡಿದೆ. ಅದರಿಂದ ಬಚಾವಾಗಲು, ಆ ಅಕ್ರಮದ ದುಡ್ಡನ್ನೇ ಮುಂದಿಟ್ಟುಕೊಂಡು ಸರ್ಕಾರ ಬೀಳಿಸಲು ಯತ್ನಿಸುತ್ತಿದ್ದಾರೆ. ಅದರ ಜತೆಗೆ ಕೇಂದ್ರ ಸರ್ಕಾರದ ಬೆಂಬಲ ಇದೆ. ಇದೀಗ ಜೆಡಿಎಸ್ ಕೂಡ ಜತೆಗೂಡಿದೆ ಎಂದು ಗಣಿಗ ಟೀಕಿಸಿದ್ದಾರೆ.
ನಮ್ಮ ಬಳಿ ಆಪರೇಷನ್ ಕಮಲಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳಿವೆ. ಕಿತ್ತೂರು ಶಾಸಕ ಬಾಬು, ಚಿಕ್ಕಮಗಳೂರು ಶಾಸಕ ತಮ್ಮಣ್ಣರನ್ನ ಯಾಕೆ ಸಂಪರ್ಕಿಸಿದ್ದರು? ಯಾವ್ಯಾವ ಹೋಟೆಲ್, ಏರ್ಪೋರ್ಟ್, ಗೆಸ್ಟ್ ಹೌಸ್ನಲ್ಲಿ ಸಂಪರ್ಕಿಸಿದ್ದಾರೆ ಮಾಹಿತಿ ಇದೆ. ಈ ಬಗ್ಗೆ ಆಡಿಯೋ, ವಿಡಿಯೋ, ಸಿಡಿ, ಪೆನ್ಡ್ರೈವ್ ಸೇರಿದಂತೆ ಮುಂದುವರಿದು ಐ ಕ್ಲೌಡ್ ಕೂಡ ಇದೆ. ನಮ್ಮ ಶಾಸಕರನ್ನ ಎಲ್ಲೆಲ್ಲಿ ಸಂಪರ್ಕಿಸಿದ್ರು, ಏನೇನು ಆಫರ್ ಮಾಡಿದ್ರು ದಾಖಲೆ ಇದೆ. ಶೀಘ್ರದಲ್ಲೇ ಮಾಧ್ಯಮಗಳ ಮೂಲಕ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






