ತೆಲುಗಿನಲ್ಲಿದ್ದ ಆರ್ಭಟ ಕನ್ನಡದಲ್ಲೇನಾಯ್ತು! ಬಿಗ್ ಮನೆಗೆ ಕಣ್ಣೀರಿನ ವಿದಾಯ ಹೇಳಿದ ಶೋಭಾ ಶೆಟ್ಟಿ!

ಶೋಭಾ ಶೆಟ್ಟಿ. ಖಡಕ್ ಮಾತು. ನೇರ ನುಡಿ, ಗ್ಲಾಮರ್ ಲುಕ್ ಇದರಿಂದಲೇ ತೆಲುಗು ಬಿಗ್ ಬಾಸ್ ನಲ್ಲಿ ಸಖತ್ ಸದ್ದು ಮಾಡಿದರು.
ತೆಲುಗಿನಲ್ಲಿ ಸಿಕ್ಕ ಅವಕಾಶದಂತೆ ಕನ್ನಡ ಬಿಗ್ ಬಾಸ್ ಸೀಸನ್ 11 ರಲ್ಲೂ ಅವಕಾಶ ಸಿಕ್ಕಿತ್ತು. ಆದರೆ ಯಾಕೋ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ಶೋಭಾ ತೆಲುಗಿನಷ್ಟು ಆರ್ಭಟ ತೋರಲಿಲ್ಲ. ಮೊದಲ ವಾರ ಸಖತ್ ಆ್ಯಕ್ವೀವ್ ಆಗಿದ್ದ ಶೋಭಾ, ಕಾಲಕ್ರಮೇಣ ಡಲ್ ಆದರು. ಅಲ್ಲದೇ ಈ ವಾರ ನಾಮಿನೇಟ್ ನಿಂದ ಸೇವ್ ಆದ್ರೂ ಕೂಡ ಅವರು ಬಿಗ್ ಮನೆಯಿಂದ ಹೊರ ನಡೆಯಲು ನಿರ್ಧರಿಸಿದರು.
ಮುಖವಾಡ ಕಳಚಿ ಬಿಡ್ತೀನಿ ಅಂತ ಅಬ್ಬರಿಸುತ್ತಲೇ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ ಭಾನುವಾರದ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಬಳಿ ಹೇಳಿಕೊಂಡತೆ ಮನೆಯಿಂದ ಹೊರಬಂದಿದ್ದಾರೆ.
ತೆಲುಗು ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದ ನಟಿ ಶೋಭಾ ಶೆಟ್ಟಿ ಅವರು ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಕಾಲಿಟ್ಟಾಗ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡ ಇವರು ಶೋನಲ್ಲಿ ತಮ್ಮ ಹವಾ ತೋರಿಸಲು ಆರಂಭದಲ್ಲೇ ಪ್ರಯತ್ನಿಸಿದರು. ಇವರ ಆವಾಜ್ಗೆ ಹನುಮಂತ ಗಪ್ಚುಪ್ ಆಗಿದ್ದನ್ನು ನಾವು ಗಮನಿಸಬಹುದು. ಇಷ್ಟೊಂದು ಸ್ಟ್ರಾಂಗ್ ಎನಿಸಿಕೊಂಡಿದ್ದ ಶೋಭಾ ಇದೀಗ ಶೋನಿಂದ ಹೊರನಡೆದಿದ್ದಾರೆ.
ಬಿಗ್ ಬಾಸ್ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ಶೋಭಾ ಶೆಟ್ಟಿ ಅವರು ಮೊದ ಮೊದಲು ಜೋರಾಗಿ ಆರ್ಭಟಿಸಿದರು.
ಶೋಭಾ ಶೆಟ್ಟಿಗೆ ಬಿಗ್ ಬಾಸ್ ಹೊಸದೇನಲ್ಲ. ತೆಲುಗು ಬಿಗ್ ಬಾಸ್ ನಲ್ಲಿ ಸ್ಪರ್ಧಿ ಆಗಿದ್ದ ಶೋಭಾ ತಮ್ಮ ನೇರ ನುಡಿಗಳಿಂದ ಸಖತ್ ಮಿಂಚಿದ್ದರು. ಅಲ್ಲದೇ ಒಳ್ಳೆಯ ಹೆಸರು ಮಾಡಿದರು. ಆದರೆ ಕನ್ನಡ ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದ ಅವರು, ಆರಂಭದಲ್ಲಿ ಅಬ್ಬರಿಸಿದ್ದರಾದರೂ ಯಾಕೋ 2ನೇ ವಾರಕ್ಕೆ ಫುಲ್ ಡಲ್ ಆದರು.
ಅಲ್ಲದೇ ಈ ವಾರ ನಾಮಿನೇಟ್ ಕೂಡ ಆಗಿದ್ದರು. ಇದರಿಂದ ಶೋಭಾ ಅವರು, ನನ್ನನ್ನು ಜನತೆ ಸೇವ್ ಮಾಡಲ್ಲ ಮನೆಯಿಂದ ಹೋಗುತ್ತೇನೆ ಎಂದು ಭಾವಿಸಿದರು. ಆದರೆ ಭಾನುವಾರ ನಡೆದಿದ್ದೇ ಬೇರೆ.
ಜನರಿಂದ ಅತಿ ಹೆಚ್ಚು ವೋಟು ಪಡೆದಿದ್ದ ಶೋಭಾ ಅವರಿಗೆ ಕಿಚ್ಚ ಸುದೀಪ್ ಯುವರ್ ಸೇಫ್ ಅಂತ ಘೋಷಿಸಿದರು. ಈ ವೇಳೆ ದೊಡ್ಡ ಡ್ರಾಮವೇ ನಡೆದು ಹೋಯ್ತು.
ಜನರು ಹಾಕಿದ ವೋಟ್ನಿಂದ ಸೇವ್ ಆಗಿದ್ದ ಶೋಭಾ ಶೆಟ್ಟಿ ಅವರು ಅಳಲು ಆರಂಭಿಸಿದ್ದರು. ತಾವು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ಧರಿಸಿರುವುದಾಗಿ ತಿಳಿಸಿದರು. ಆದರೆ ಅವರಿಗೆ ಸುದೀಪ್ ಸಮಾಧಾನ ಮಾಡಿ, ಬುದ್ಧಿಮಾತು ಹೇಳಿದ ಬಳಿಕ ಮನಸ್ಸು ಬದಲಾಯಿಸಿದರು. ಆದರೆ ಕೊನೆಯಲ್ಲಿ ಇನ್ನೊಂದು ಡ್ರಾಮಾ ಆರಂಭಿಸಿದರು. ತಾವು ಹೊರಗೆ ಹೋಗಲೇಬೇಕು ಎಂದು ಶೋಭಾ ಶೆಟ್ಟಿ ಹಠ ಹಿಡಿದರು. ಆಗ ಸುದೀಪ್ ಕೋಪ ನೆತ್ತಿಗೇರಿತು.
ಭಾನುವಾರದ ಎಪಿಸೋಡ್ ಮುಗಿಯುವಾಗ ಸುದೀಪ್ ಅವರು ಗರಂ ಆಗಿ ಮಾತನಾಡಿದ್ದರು. ‘ನೀವು ಈ ಮನೆಯಿಂದ ಕೂಡಲೇ ಹೊರಗೆ ಹೋಗಿ’ ಎಂದು ಶೋಭಾಗೆ ಸುದೀಪ್ ಆಜ್ಞೆ ಮಾಡಿದ್ದರು. ಆದರೆ ಶೋಭಾ ಎಲಿಮಿನೇಟ್ ಆದರೋ ಇಲ್ಲವೋ ಎಂಬುದು ಖಚಿತವಾಗಿರಲಿಲ್ಲ. ಸೋಮವಾರದ ಸಂಚಿಕೆಯಲ್ಲಿ ಆ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಶೋಭಾ ಅವರು ಮುಖ್ಯ ದ್ವಾರದ ಬಳಿ ಬಂತು ನಿಂತುಕೊಂಡು ‘ಈಗ ಹೋಗಬೇಕು ಅಂತ ಅನಿಸುತ್ತಿಲ್ಲ’ ಎಂದು ಮತ್ತೆ ಹೊಸ ಡ್ರಾಮಾ ಶುರು ಮಾಡಲು ಮುಂದಾದರೂ ಕೂಡ ಬಿಗ್ ಬಾಸ್ ಮನಸ್ಸು ಕರಗಲಿಲ್ಲ. ಕಡೆಗೂ ಮುಖ್ಯದ್ವಾರ ಓಪನ್ ಆಯಿತು. ಶೋಭಾ ಹೊರಗೆ ಹೋಗಲೇಬೇಕಾಯಿತು.
ತೆಲುಗು ಬಿಗ್ ಬಾಸ್ ಶೋನಲ್ಲಿ ಶೋಭಾ ಶೆಟ್ಟಿ ಅವರು ಸಖತ್ ಸೌಂಡು ಮಾಡಿದ್ದರು. ತೆಲುಗು ಕಿರುತೆರೆಯಲ್ಲಿ ಅವರಿಗೆ ಸಿಕ್ಕಾಪಟ್ಟೆ ಹೆಸರು ಇದೆ. ಆದರೆ ಕನ್ನಡದಲ್ಲಿ ಅವರ ಆಟ ನಡೆಯಲೇ ಇಲ್ಲ. ಅನಾರೋಗ್ಯದ ಕಾರಣವನ್ನು ನೀಡಿ, ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರುವಂತಾಯಿತು.
ನಿಮ್ಮ ಪ್ರತಿಕ್ರಿಯೆ ಏನು?






