ಪಾಕ್ ಮಣಿಸಿದ ಭಾರತ: ಗೆಲುವಿಗೆ ವಿರಾಟ್ ಅಲ್ಲ, ಈತ ಕಾರಣ ಎಂದ ರೋಹಿತ್!

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ್ ವಿರುದ್ಧದ ಹೈವೋಲ್ಟೇಜ್ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಜಯದ ಶ್ರೇಯಸ್ಸನ್ನು ಮೂವರು ಆಟಗಾರರಿಗೆ ಸಲ್ಲಿಸಿದ್ದಾರೆ.
ಟೂರ್ನಿಯಲ್ಲಿ ನಾವು ಅದ್ಭುತ ಆರಂಭವನ್ನು ಪಡೆದುಕೊಂಡಿದ್ದೇವೆ. ಅದರಲ್ಲೂ ಪಾಕಿಸ್ತಾನ್ ವಿರುದ್ಧ ನಮ್ಮ ಬೌಲರ್ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಮಧ್ಯಮ ಓವರ್ಗಳ ವೇಳೆ ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಅತ್ಯುತ್ತಮ ದಾಳಿ ಸಂಘಟಿಸಿದ್ದಾರೆ. ಹೀಗಾಗಿ ಈ ಗೆಲುವಿನ ಶ್ರೇಯಸ್ಸು ಅವರಿಗೆ ಸಲ್ಲಬೇಕು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಅಲ್ಲದೆ ಮೊಹಮ್ಮದ್ ಶಮಿ, ಹರ್ಷಿತ್ ರಾಣಾ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ಆರಂಭದಲ್ಲಿ ಉತ್ತಮ ದಾಳಿ ಸಂಘಟಿಸುವಲ್ಲಿ ಸಫಲರಾಗಿದ್ದರು. ಹೀಗಾಗಿ ಅವರ ಪ್ರದರ್ಶನವನ್ನು ನಾನು ಇಲ್ಲಿ ಮರೆಯುವಂತಿಲ್ಲ. ಹೀಗಾಗಿ ಈ ಪಂದ್ಯದ ಗೆಲುವಿನ ಶ್ರೇಯಸ್ಸು ಎಲ್ಲಾ ಬೌಲರ್ಗಳಿಗೆ ನೀಡುತ್ತೇನೆ ಎಂದು ಟೀಮ್ ಇಂಡಿಯಾ ನಾಯಕ ಹೇಳಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿಯ ಭರ್ಜರಿ ಶತಕದ ಬಗ್ಗೆ ಮಾತನಾಡಿದ ಹಿಟ್ಮ್ಯಾನ್, ಅವರು ನಿಜವಾಗಿಯೂ ತಮ್ಮ ದೇಶಕ್ಕಾಗಿ ಆಡುವುದನ್ನು ಇಷ್ಟಪಡುತ್ತಾರೆ. ತಂಡಕ್ಕಾಗಿ ಸಂಪೂರ್ಣ ತೊಡಗಿಸಿಕೊಳ್ಳಲು, ಪಂದ್ಯ ಗೆದ್ದು ಕೊಡಲು ಬಯಸುತ್ತಾರೆ. ಕಳೆದ ಕೆಲವು ವರ್ಷಗಳಿಂದ ಅದನ್ನೇ ಮಾಡುತ್ತಿರುವುದು ನಾವು ನೋಡಿದ್ದೇವೆ. ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತವರಿಗೆ, ಅವರ ಪ್ರದರ್ಶನ ಅಚ್ಚರಿಯೇನಲ್ಲ. ಇಂತಹ ಹಲವು ಪ್ರದರ್ಶನ ವಿರಾಟ್ ಕೊಹ್ಲಿಯಿಂದ ಮೂಡಿಬಂದಿದೆ ಎಂದು ರೋಹಿತ್ ಶರ್ಮಾ ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?






