ಬಿಗ್ ಬಾಸ್ ಕಪ್ ಗೆಲ್ತಾರಾ ರಜತ್!? ಪ್ಲಸ್ ಆ್ಯಂಡ್ ಲೆಸ್ ಪಾಯಿಂಟ್ ಇಲ್ಲಿದೆ ನೋಡಿ!

ಬಿಗ್ ಬಾಸ್ ಕನ್ನಡ ಸೀಜನ್ 11 ಕೊನೆಯ ವಾರಕ್ಕೆ ಕಾಲಿಟ್ಟಿದೆ. ಮೂರು ತಿಂಗಳ ಪಯಣವನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್ ಬಾಸ್ ಸ್ಪರ್ಧಿಗಳು ಈಗ ಫಿನಾಲೆ ವಾರಕ್ಕೆ ಕಾಲಿಟ್ಟಿರುವ ಖುಷಿಯಲ್ಲಿದ್ದಾರೆ. ರಜತ್, ತ್ರಿವಿಕ್ರಮ್, ಉಗ್ರಂ ಮಂಜು, ಹನುಮಂತ, ಮೋಕ್ಷಿತಾ ಪೈ ಹಾಗೂ ಭವ್ಯ ಗೌಡ ಬಿಗ್ ಬಾಸ್ ಕನ್ನಡ ಸೀಜನ್ 11ರ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ.
ಈ ಎಲ್ಲಾ ಫಿನಾಲೆ ಸ್ಪರ್ಧಿಗಳ ಪೈಕಿ ರಜತ್ ಬಿಗ್ ಬಾಸ್ ಪಯಣವನ್ನು ಮೆಚ್ಚಲೇ ಬೇಕು. ಯಾಕೆಂದರೆ ಅರ್ಥ ಸೀಜನ್ ಅಂದರೆ ಐವತ್ತು ದಿನಗಳು ಕಳೆದ ಬಳಿಕ ಬಿಗ್ ಬಾಸ್ ಮನೆಗೆ ಕಾಲಿಟ್ಟ ರಜತ್ ಉಳಿದ ಎಲ್ಲಾ ಸ್ಪರ್ಧಿಗಳಿಗೂ ಟಕ್ಕರ್ ಕೊಟ್ಟು ಫಿನಾಲೆ ವಾರ ತಲುಪಿದರು. ಬಿಗ್ ಬಾಸ್ ಮನೆಗೆ ಬಂದ ದಿನದಿಂದಲೂ ಅಗ್ರೇಸಿವ್ ಆಗಿ ಆಟ ಆಡುತ್ತಿದ್ದ ರಜತ್ ಆಟಗಳ ಮಧ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಪ್ರತಿಯೊಂದು ವಿಚಾರಕ್ಕೂ ಮನೆಯ ಇತರ ಸ್ಪರ್ಧಿಗಳ ಜೊತೆ ಕಿರಿಕ್ ತೆಗೆಯುತ್ತಿದ್ದರು. ಮೊದಮೊದಲು ಪ್ರೇಕ್ಷಕರ ಕೋಪಕ್ಕೆ ಕಾರಣರಾಗುತ್ತಿದ್ದ ರಜತ್ ಈಗ ಬಹುತೇಕರ ಮೆಚ್ಚಿನ ಸ್ಪರ್ಧಿಯಾಗಿದ್ದಾರೆ. ತಮಾಷೆ ಹಾಗೂ ಕೆಲವು ಸ್ಪರ್ಧಿಗಳ ಬಗ್ಗೆ ರಜತ್ ತೋರಿಸುವ ಕಾಳಜಿ, ಸರಿಯಾದ ಸಮಯದಲ್ಲಿ ವಾದ, ಟಾಸ್ಕ್ಗಳಲ್ಲಿಯೂ ಉತ್ತಮವಾಗಿ ಆಡುತ್ತಾ ರಜತ್ ಫಿನಾಲೆ ತಲುಪಿದ್ದಾರೆ.
ಸುದೀಪ್ ಈಗಾಗಲೇ ಹೇಳಿರುವಂತೆ ರಜತ್ ಪಕ್ಕಾ ಬಿಗ್ಬಾಸ್ ಆಟಗಾರ. ಈ ಆಟವನ್ನು ಹೇಗೆ ಆಡಬೇಕು ಎಂಬುದು ಅವರಿಗೆ ಗೊತ್ತು. ಎಲ್ಲವನ್ನೂ ಚೆನ್ನಾಗಿ ಅಭ್ಯಾಸ ಮಾಡಿಕೊಂಡೇ ಬಿಗ್ಬಾಸ್ ಮನೆಗೆ ಅವರು ಕಾಲಿಟ್ಟಿದ್ದಾರೆ. ಅದನ್ನು ಈಗಾಗಲೇ ಹಲವು ಬಾರಿ ಹೇಳಿದ್ದಾರೆ. ಬುದ್ಧಿವಂತಿಕೆಯನ್ನೂ ಸಹ ಅವರು ಬಳಸುತ್ತಾರೆ.
ಬಿಗ್ಬಾಸ್ ಮನೆಯಲ್ಲಿ ಯಾರೊಂದಿಗೂ ಸಹ ಅಟ್ಯಾಚ್ಮೆಂಟ್ ಬೆಳೆಸಿಕೊಂಡಿಲ್ಲ. ರಜತ್ ಮೊದಲಿನಿಂದಲೂ ಹೇಳುತ್ತಿರುವುದು ಒಂದೇ ಮಾತು, ನಾನು ನನಗಾಗಿ ಆಡುತ್ತೇನೆ, ನಾನು ಗೆಲ್ಲಲು ಮಾತ್ರ ಆಡುತ್ತೇನೆ, ಬೇರೆಯರನ್ನು ಗೆಲ್ಲಿಸಲು ಅಲ್ಲ ಎಂದು. ಅದಕ್ಕೆ ತಕ್ಕಂತೆ ಅವರು ಆಡುತ್ತಾ ಬಂದಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಒಳ್ಳೆಯ ಎಂಟರ್ಟೈನ್ಮೆಂಟ್ ಅನ್ನು ಸಹ ರಜತ್ ನೀಡುತ್ತಾ ಬಂದಿದ್ದಾರೆ. ಆಗಾಗ್ಗೆ ಸಹ ಸ್ಪರ್ಧಿಗಳ ಕಾಲೆಳೆಯುತ್ತಿರುತ್ತಾರೆ. ಸಣ್ಣ-ಪುಟ್ಟ ಡೈಲಾಗ್ಗಳನ್ನು ಹೊಡೆದುಕೊಂಡು ತಮಾಷೆ ಮಾಡುತ್ತಿರುತ್ತಾರೆ. ಒಟ್ಟಾರೆಯಾಗಿ ಸಾಧಾರಣ ಮಟ್ಟದ ಎಂಟರ್ಟೈನ್ಮೆಂಟ್ ಸಹ ಕೊಡುತ್ತಾರೆ. ಇದು ಅವರ ಗೆಲುವಿಗೆ ಕಾರಣ ಆಗಬಹುದು.
ಇನ್ನು ನೆಗೆಟಿವ್ ವಿಷಯ ನೋಡುವುದಾದರೆ, ರಜತ್ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದವರು. ಶೋ ಪ್ರಾರಂಭವಾಗಿ 50 ದಿನಗಳ ಬಳಿಕ ರಜತ್, ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಇತರೆ ಸ್ಪರ್ಧಿಗಳಷ್ಟು ಶ್ರಮ ಅವರು ಹಾಕಿಲ್ಲ ಎಂಬುದು ಇಲ್ಲಿ ಗಮನಿಸಬೇಕಾಗುತ್ತದೆ. ಇದು ಅವರ ಸೋಲಿಗೆ ಕಾರಣ ಆದರೂ ಆಗಬಹುದು.
ಅತಿಯಾದ ಅಗ್ರೆಶನ್. ರಜತ್ ಅಗ್ರೆಸ್ಸಿವ್ ಆಟಗಾರ. ಅದರಲ್ಲೂ ತಮಗಿಂತಲೂ ದುರ್ಬಲರ ಮೇಲೆಯೇ ಅವರು ಅಗ್ರೆಶನ್ ತೋರುವುದು ಹೆಚ್ಚು. ಹನುಮಂತನ ಬಗ್ಗೆ ವಿನಾಕಾರಣ ಒಂದಿಲ್ಲೊಂದು ವಿಷಯಗಳನ್ನು ಹೇಳುತ್ತಲೇ ಇರುತ್ತಾರೆ. ಧನರಾಜ್ ಮೇಲೆ ಕೈ ಮಾಡಲು ಸಹ ಮುಂದಾಗಿದ್ದರು. ಇದು ಪ್ರೇಕ್ಷಕರಲ್ಲಿ ಋಣಾತ್ಮಕ ಅಭಿಪ್ರಾಯ ಮೂಡಿಸಲೂ ಬಹುದು.
ಮಾತಿನ ಮೇಲೆ ನಿಗಾ ಇಲ್ಲದೇ ಇರುವುದು ಸಹ ರಜತ್ರ ಋಣಾತ್ಮಕ ಅಂಶಗಳಲ್ಲಿ ಒಂದು. ರಜತ್ಗೆ ಅವರ ನಾಲಗೆ ಮೇಲೆ ಹತೋಟಿ ಇಲ್ಲ ಎಂಬುದು ಈಗಾಗಲೇ ಶೋನಲ್ಲಿ ಕೆಲವು ಬಾರಿ ಪ್ರೂವ್ ಆಗಿದ್ದಾಗಿದೆ. ತೀರ ಕೆಟ್ಟ ಪದಗಳನ್ನು ರಜತ್, ಸಹ ಸ್ಪರ್ಧಿಗಳ ಮೇಲೆ ಬಳಸಿದ್ದು ಇದೆ. ಇದು ಫ್ಯಾಮಿಲಿ ಪ್ರೇಕ್ಷಕರಿಗೆ ಹಿಡಿಸದೇ ಇರಬಹುದು
ನಿಮ್ಮ ಪ್ರತಿಕ್ರಿಯೆ ಏನು?






