ರಂಜಾನ್ ಉಪವಾಸಕ್ಕೆ 1 ಗಂಟೆ ರಿಲೀಫ್ ಕೊಟ್ರೆ, ಹಿಂದೂಗಳು ಸುಮ್ಮನೆ ಕೂರಲ್ಲ: ಪ್ರಮೋದ್ ಮುತಾಲಿಕ್!

ಬೆಂಗಳೂರು:: ರಂಜಾನ್ ವೇಳೆ ನೌಕರರಿಗೆ 1 ಗಂಟೆ ರಿಲೀಫ್ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎ.ಹುಸೇನ್ ಮನವಿ ಮಾಡಿರುವ ವಿಚಾರ ಕುರಿತು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಮುತಾಲಿಕ್, ಹಿಂದೂಗಳ ಸಂಪ್ರದಾಯದಲ್ಲಿ ನಿರಂತರ ಒಂದೊಂದು ಆಚರಣೆ ಇರುತ್ತೆ. ಹಿಂದೂ ನೌಕರರು ಎಲ್ಲಾ ಆಚರಣೆಗೆ ಅವಕಾಶ ಕೊಡಿ ಅಂತ ಮನವಿ ಮಾಡೋದಕ್ಕೆ ಶುರು ಮಾಡಿದ್ರೆ ಸರ್ಕಾರಿ ಕಚೇರಿಗಳೇ ಖಾಲಿ ಖಾಲಿಯಾಗಿರುತ್ತೆ. ಅಂಬೇಡ್ಕರ್ ಅವರು ಬರೆದಿರೋ ಸಂವಿಧಾನದಲ್ಲಿ ಎಲ್ಲ ಧರ್ಮದ ಆಚರಣೆಗೆ ಸಮಾನ ಅವಕಾಶವಿದೆ. ಭಾರತ ದೇಶ ಜಾತ್ಯತೀತ ರಾಷ್ಟ್ರ, ಒಂದು ಧರ್ಮದ ಸರ್ಕಾರಿ ನೌಕರರಿಗೆ ಈ ರೀತಿಯ ಅವಕಾಶ ಮಾಡಿಕೊಡೋದು ತಪ್ಪು ಮತ್ತು ಖಂಡನೀಯ. ಆದ್ರೆ ಕಾಂಗ್ರೆಸ್ ವೋಟ್ಬ್ಯಾಂಕ್ಗಾಗಿ ತುಷ್ಟೀಕರಣ ರಾಜಕೀಯ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಒಂದು ಧರ್ಮದ ಆಚರಣೆಗೆ ಅವಕಾಶ ಮಾಡಿಕೊಡೋದು ತಪ್ಪು, ಒಂದು ವೇಳೆ ನಮ್ಮ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ರೆ ಹಿಂದೂಗಳು ಕೂಡ ಶಿವರಾತ್ರಿ, ಏಕಾದಶಿ ಸೇರಿದಂತೆ ಅನೇಕ ಹಬ್ಬಗಳಲ್ಲಿ ಉಪವಾಸ ಮಾಡ್ತಾರೆ, ಅದಕ್ಕೂ ಅವಕಾಶ ನೀಡ್ತಾರಾ? ಇವತ್ತು ರಂಜಾನ್ ಉಪವಾಸಕ್ಕೆ 1 ಗಂಟೆ ಮನವಿ ಮಾಡ್ತಾರೆ, ನಾಳೆ ಶುಕ್ರವಾರದ ನಮಾಜ್ಗೂ ಅವಕಾಶ ಕೊಡಿ ಅಂತ ಕೇಳ್ತಾರೆ. ಇದಕ್ಕೆಲ್ಲ ಸರ್ಕಾರ ಅನುಮತಿ ನೀಡಬಾರದು ನೀಡಿದ್ರೇ ಹಿಂದೂಗಳು ಇದನ್ನ ವಿರೋಧಿಸಿ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






