ವೈಭವದ ಮಹಾಕುಂಭಮೇಳಕ್ಕೆ ಇಂದು ಅದ್ಧೂರಿ ತೆರೆ: 1 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ!

144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 50 ಕೋಟಿಗೂ ಹೆಚ್ಚು ಭಕ್ತರು ಜಗತ್ತಿನ ಮೂಲೆ ಮೂಲೆಯಿಂದ ಬಂದು ಗಂಗೆಯಲ್ಲಿ ಮಿಂದೆದಿದ್ದಾರೆ. ಹೌದು 144 ವರ್ಷಗಳಿಗೊಮ್ಮೆ ಜಗತ್ತಿನಲ್ಲಿ ನಡೆಯೋ ಅದ್ಭುತ. ನೂರಾರು ಕೋಟಿ ಭಕ್ತರ ಸಂಗಮ.
ತ್ರೀವೇಣಿ ಸಂಗಮದ ಗಂಗೆಯಲ್ಲಿ ಪುಣ್ಯಸ್ನಾನ. ಲಕ್ಷ ಲಕ್ಷ ನಾಗಸಾಧುಗಳ ಶಕ್ತಿ ದರ್ಶನ. ಈ ಶತಮಾನದಲ್ಲಿ ನಡೆದ ಈ ಎಲ್ಲಾ ವೈಭವಕ್ಕೆ ವಿರಾಮ ಬಿಳೋ ಕಾಲ ಬಂದಿದೆ. ಕಳೆದ 22ದಿನಗಳಿಂದ ಪ್ರಯಾಗ್ರಾಜ್ನಲ್ಲಿ ಈ ಎಲ್ಲಾ ವೈಭವ ಇದೀಗ ಮುಗಿಯುವ ಹಂತಕ್ಕೆ ಬಂದು ನಿಂತಿದೆ.
ಮಹಾಶಿವರಾತ್ರಿ, ಅಂದರೆ ಇಂದು ಬುಧವಾರ ನಡೆಯುವ 2025 ರ ಮಹಾ ಕುಂಭಮೇಳದ ಕೊನೆಯ ಅಮೃತ ಸ್ನಾನದಲ್ಲಿ 1 ಕೋಟಿಗಿಂತ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಕುಂಭಮೇಳದ ಕೊನೆಯ ದಿನದಂದು ಬರುವ ಭಕ್ತರ ದೊಡ್ಡ ಸಂಖ್ಯೆಯನ್ನು ನಿಭಾಯಿಸಲು ಉತ್ತರ ಪ್ರದೇಶ ಸರ್ಕಾರ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಿದೆ.
ಜನವರಿ 13 ರಂದು ಕುಂಭಮೇಳ ಆರಂಭವಾದಾಗಿನಿಂದ ಈವರೆಗೂ ಗಂಗೆ, ಯಮುನೆ ಮತ್ತು ಸರಸ್ವತಿ ನದಿಗಳು ಸೇರುವ ತ್ರಿವೇಣಿ ಸಂಗಮದಲ್ಲಿ ಸುಮಾರು 64 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಇಲ್ಲಿಯವರೆಗೆ ಜನವರಿ 13, 14, 29, ಫೆಬ್ರವರಿ 3 ಮತ್ತು 12 ರಂದು ಒಟ್ಟು ಐದು ಅಮೃತ ಸ್ನಾನಗಳು ನಡೆದಿವೆ. ನಾಳೆ ಕೊನೆಯ ಅಮೃತ ಸ್ನಾನ. ಇತಿಹಾಸದಲ್ಲೇ ಅತಿ ದೊಡ್ಡ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಯಾಗ್ರಾಜ್ಗೆ ಭಕ್ತರು ಹರಿದು ಬರುತ್ತಿದ್ದಾರೆ. ರೈಲುಗಳು, ವಿಮಾನಗಳು ಮತ್ತು ರಸ್ತೆಗಳು ತುಂಬಿ ತುಳುಕುತ್ತಿವೆ.
ಇಂದು ನಡೆಯಲಿರುವ ಪವಿತ್ರ ಸ್ನಾನಕ್ಕೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಲಕ್ನೋ ಮತ್ತು ಪ್ರತಾಪ್ಗಢದಿಂದ ಬರುವ ಭಕ್ತರಿಗೆ ಫಫಮೌ ಘಾಟ್ , ಮತ್ತು ರೇವಾನ್, ಬಂದಾ, ಚಿತ್ರಕೂಟ ಮತ್ತು ಮಿರ್ಜಾಪುರದ ಜನರಿಗೆ ಅರೈಲ್ ಘಾಟ್ ಅನ್ನು ಕಾಯ್ದಿರಿಸಲಾಗಿದೆ. ಕೌಶಂಬಿಯಿಂದ ಬರುವ ಭಕ್ತರಿಗಾಗಿ ಸಂಗಮ್ ಘಾಟ್ ಅನ್ನು ಕಾಯ್ದಿರಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಇಡೀ ಮೇಳದ ಪ್ರದೇಶದಲ್ಲಿ ಯಾವುದೇ ವಾಹನಗಳನ್ನು ಅನುಮತಿಸಲಾಗುವುದಿಲ್ಲ. ಪಾಸ್ ಹೊಂದಿರುವ ವಾಹನಗಳನ್ನು ಮಾತ್ರ ನಿಗದಿತ ಸ್ಥಳಗಳಲ್ಲಿ ನಿಲ್ಲಿಸಬಹುದು.
ಪ್ರಯಾಗ್ರಾಜ್ಗೆ ಹೋಗುವ ಎಲ್ಲಾ ಪ್ರಮುಖ ಹೆದ್ದಾರಿಗಳು ಮತ್ತು ರಸ್ತೆಗಳಲ್ಲಿ 40 ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ, ಮಾರ್ಗ ಬದಲಾವಣೆಗಳನ್ನು ಮಾಡಲಾಗಿದೆ. ಪ್ರಯಾಗ್ರಾಜ್ಗೆ ಸಂಪರ್ಕ ಕಲ್ಪಿಸುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಹೆಚ್ಚುವರಿ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರ ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






