ಶಿವನಿಗೆ ಬಿಲ್ವಪತ್ರೆ ಬಲುಪ್ರಿಯ: ಈ ರೀತಿ ಪರಶಿವನ ನೆನೆದರೆ ಕಷ್ಟಗಳು ಪರಿಹಾರ!

ಶಿವ ಪೂಜೆಯನ್ನು ಮಾಡುವಾಗ ಅವನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸುವುದು ವಾಡಿಕೆ. ಅದರಲ್ಲೂ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವುದು ಅತ್ಯಂತ ಮಂಗಳಕರ. ಶಿವ ಪೂಜೆಯನ್ನು ಮಾಡುವಾಗ ತಪ್ಪದೇ ಒಂದಾದರೂ ಬಿಲ್ವಪತ್ರೆಯನ್ನು ಅರ್ಪಿಸಲಾಗುತ್ತದೆ. ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವುದು ಎಷ್ಟು ಮಹತ್ವದ್ದಾಗಿದೆಯೋ ಹಾಗೇ ಮನೆಯಲ್ಲಿ ಬಿಲ್ವಪತ್ರೆಯನ್ನು ನೆಡುವುದು ಕೂಡ ಮಹತ್ವದ್ದಾಗಿದೆ.
ಶಿವ ದೇವರ ಆರಾಧನೆಯಲ್ಲಿ ಬಿಲ್ವಪತ್ರೆಗೆ ಬಲು ಮಹತ್ವ. ಶಿವನ ಪೂಜೆಗೆ ಬಿಲ್ವಪತ್ರೆ ಬಹಳ ಅಗತ್ಯ ಎಂದೇ ಪರಿಗಣಿಸಲಾಗುತ್ತದೆ. ಬಿಲ್ವಪತ್ರೆ ಇಲ್ಲದೆ ಶಿವನ ಆರಾಧನೆಯೇ ಅಪೂರ್ಣ ಎಂಬ ನಂಬಿಕೆ ಆಸ್ತಿಕರಲ್ಲಿದೆ. ಬಿಲ್ವಪತ್ರೆಗೆ ಸಂಬಂಧಿಸಿದಂತೆ ಶಿವಪುರಾಣದಲ್ಲಿ ಸಾಕಷ್ಟು ನಿಯಮಗಳನ್ನು ನೋಡಬಹುದು.
ಸಾಮಾನ್ಯವಾಗಿ ಮೂರು ಎಲೆಗಳುಳ್ಳ ಬಿಲ್ವಪತ್ರೆಯನ್ನು ದೇವರಿಗೆ ಅರ್ಪಿಸಲಾಗುತ್ತದೆ. ಆದರೆ, ಐದು ಎಲೆಯ ಬಿಲ್ವಪತ್ರೆಗಳೂ ಇವೆ. ಇವನ್ನು ಶಿವ ದೇವರಿಗೆ ಅರ್ಪಿಸುವುದು ಕೂಡಾ ಬಹಳ ಮಂಗಳಕರ ಎಂಬ ನಂಬಿಕೆ ಇದೆ. ಆದರೆ, ಶಿವಪೂಜೆಯಲ್ಲಿ ವಿಶೇಷ ಸ್ಥಾನ ಪಡೆದಿರುವ ಐದು ಎಲೆಯ ಬಿಲ್ವಪತ್ರೆ ಅಷ್ಟು ಸುಲಭವಾಗಿ ಸಿಗುವುದೂ ಇಲ್ಲ. ಈ ಐದು ಎಲೆಯ ಬಿಲ್ವಪತ್ರೆಗಳು ಐದು ಮುಖ್ಯ ದೇವರುಗಳ ಸಂಕೇತ ಎಂಬುದು ನಂಬಿಕೆ. ಸೃಷ್ಟಿಕರ್ತ ಬ್ರಹ್ಮ, ಪಾಲನೆ ಮಾಡುವ ವಿಷ್ಣು, ಲಯಾಧಿಪತಿ ಶಿವ ಈ ತ್ರಿಮೂರ್ತಿಗಳೊಂದಿಗೆ ವಿಘ್ನ ನಿವಾರಕ ಗಣೇಶ ಹಾಗೂ ತಾಯಿ ಭಗವತಿಯ ಸಂಕೇತ ಐದು ಎಲೆಗಳ ಬಿಲ್ವಪತ್ರೆ ಎಂಬುದು ನಂಬಿಕೆ. ಹೀಗಾಗಿ, ಈ ಐದು ಎಲೆಯ ಬಿಲ್ವಪತ್ರೆ ಎಂದರೆ ಶಿವದೇವರಿಗೆ ಇನ್ನೂ ಪ್ರಿಯ ಎಂಬುದು ನಂಬಿಕೆ
ಬಿಲ್ವಪತ್ರೆಯನ್ನು ಅರ್ಪಿಸಿದರೆ ಶಿವದೇವರು ಪ್ರಸನ್ನರಾಗುತ್ತಾರೆ ಎಂಬುದು ಆಸ್ತಿಕರ ನಂಬಿಕೆ. ಈ ಬಿಲ್ವಪತ್ರೆಯನ್ನು ಅರ್ಪಿಸಿದರೆ ಕಷ್ಟಗಳು ಪರಿಹಾರವಾಗುತ್ತವೆ ಎಂದು ನಂಬಲಾಗಿದೆ. ಅಂತೆಯೇ, ಭಕ್ತರು ಹೀಗೆ ಮಾಡಿದರೆ ಮಂಗಳಕರವಂತೆ.
* ಸೋಮವಾರ ಬೆಳಗ್ಗೆ ಸ್ನಾನದ ನಂತರ ಬಿಲ್ವಪತ್ರೆಯೊಂದಿಗೆ ಶಿವಲಿಂಗಕ್ಕೆ ಹಾಲು ಮತ್ತು ಜೇನುತುಪ್ಪವನ್ನು ಅರ್ಪಿಸಿ. ಹೀಗೆ 11 ಸೋಮವಾರ ನಿರಂತರ ಶಿವನ ಪೂಜೆ ಮಾಡಿದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬುದು ನಂಬಿಕೆ.
* ವಿವಾಹದ ವಿಳಂಬ ಅಥವಾ ಕೆಲಸಗಳು ಕೈಗೂಡದೇ ಇರುವ ಸಮಸ್ಯೆ ಇದ್ದರೂ ಶಿವ ಪೂಜೆ ಮಂಗಳಕರ ಎಂಬ ನಂಬಿಕೆ ಇದೆ. ಐದು ಸೋಮವಾರ ಶಿವ ದೇವಸ್ಥಾನದಲ್ಲಿ ಜಲಾಭಿಷೇಕ ಮಾಡಿ ಮತ್ತು 108 ಬಿಲ್ವಪತ್ರೆಯನ್ನು ಅರ್ಪಿಸಿ. ಈ ಸಮಯದಲ್ಲಿ `ಓಂ ನಮಃ ಶಿವಾಯಃ' ಎಂಬ ಮಂತ್ರವನ್ನು ಪಠಿಸುವುದು ಕೂಡಾ ಮಂಗಳಕರ. ಇದರಿಂದ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.
* ಇನ್ನು ಸಂತಾನಾಪೇಕ್ಷೆ ಇರುವವರು ಸೋಮವಾರ ಶಿವನನ್ನು ಭಕ್ತಿಯಿಂದ ಪೂಜಿಸುವುದು ಮಂಗಳಕರವಂತೆ. ಜತೆಗೆ, ನಿಮ್ಮ ವಯಸ್ಸಿಗೆ ಸಮನಾದ ಬಿಲ್ವಪತ್ರೆ ಎಲೆಗಳನ್ನು ತೆಗೆದುಕೊಂಡು ಒಂದೊಂದನ್ನೇ ಹಸಿ ಹಾಲಿನಲ್ಲಿ ಅದ್ದಿ ಶಿವಲಿಂಗದ ಮೇಲೆ ಅರ್ಪಿಸಿ. ಹುಣ್ಣಿಮೆಯ ನಂತರದ ಸೋಮವಾರದಿಂದ ಇದನ್ನು ಆರಂಭಿಸಿದರೆ ಒಳಿತಾಗುತ್ತದೆ ಎಂಬುದು ನಂಬಿಕೆ.
* ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸೋಮವಾರ ಐದು ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸಿದ ಬಳಿಕ ಆ ಎಲೆಗಳನ್ನು ನಿಮ್ಮ ಪರ್ಸ್ ಅಥವಾ ಹಣ ಇಡುವ ಸ್ಥಳದಲ್ಲಿ ಇರಿಸಿದರೆ ಕಷ್ಟ ಪರಿಹಾರವಾಗುತ್ತವೆ ಎಂಬ ನಂಬಿಕೆ ಕೂಡಾ ಇದೆ.
* ಸೋಮವಾರ ಶಿವ ದೇವರೊಂದಿಗೆ ಮಾತೆ ಪಾರ್ವತಿಯನ್ನು ಪೂಜಿಸುವುದರಿಂದಲೂ ಒಳಿತಾಗುತ್ತದೆ ಎಂದು ನಂಬಲಾಗಿದೆ.
* ಆರೋಗ್ಯವೃದ್ಧಿಗಾಗಿ 108 ಬಿಲ್ವಪತ್ರೆಗಳನ್ನು ಶ್ರೀಗಂಧದಲ್ಲಿ ಅದ್ದಿ ಅದನ್ನು ಶಿವ ಲಿಂಗಕ್ಕೆ ಅರ್ಪಿಸಿ. ಹೀಗೆ ದೇವರಿಗೆ ಬಿಲ್ವಪತ್ರೆಯನ್ನು ಅರ್ಪಿಸುವಾಗ `ಓಂ ನಮಃ ಶಿವಾಯಃ' ಮಂತ್ರವನ್ನು ಜಪಿಸುವುದರಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ.
ನಿಮ್ಮ ಪ್ರತಿಕ್ರಿಯೆ ಏನು?






