ಆಸ್ಟ್ರೇಲಿಯಾ ಪ್ರವಾಸದ ವೇಳೆ ಮೂರನೇ ಏಕದಿನ ಪಂದ್ಯದ ಮಧ್ಯೆ ಪಕ್ಕೆಲುಬಿನ ಗಾಯಗೊಂಡಿದ್ದ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಗಾಯದ ಬಳಿಕ ಅವರನ್ನು ಸಿಡ್ನಿಯ ಆಸ್ಪತ್ರೆಯ ಐಸಿಯುವಿಗೆ ದಾಖಲಿಸಲಾಗಿತ್ತು. ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಟೀಂ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಕ್ಯಾನ್ಬೇರಾದಲ್ಲಿ ಇಂದು ನಡೆಯಲಿರುವ ಟಿ20 ಪಂದ್ಯಕ್ಕೂ ಮೊದಲು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್ ಹೇಳಿದರು — “ಶ್ರೇಯಸ್ ಅಯ್ಯರ್ ಟಿ20 ತಂಡದ ಭಾಗವಾಗಿಲ್ಲದಿದ್ದರೂ, ನಾವು ಎಲ್ಲರೂ ಅವರ ಸಂಪರ್ಕದಲ್ಲಿದ್ದೇವೆ. ಅವರು ಈಗ ಐಸಿಯುನಿಂದ ಹೊರಬಂದಿದ್ದಾರೆ, ಎಲ್ಲರೊಂದಿಗೆ ಮಾತನಾಡುತ್ತಿದ್ದಾರೆ, ಮೆಸೇಜ್ಗಳಿಗೆ ಉತ್ತರಿಸುತ್ತಿದ್ದಾರೆ. ಅವರ ಆರೋಗ್ಯ ಸಂಪೂರ್ಣ ಸ್ಥಿರವಾಗಿದೆ.”
“ಅಯ್ಯರ್ ಗಾಯಗೊಂಡಿದ್ದಾರೆ ಎಂಬ ಸುದ್ದಿ ಬಂದ ತಕ್ಷಣ ನಮ್ಮ ಫಿಸಿಯೋ ಕಮಲೇಶ್ ಜೈನ್ ಅವರನ್ನು ಸಂಪರ್ಕಿಸಿದೆ. ಬಳಿಕ ಅಯ್ಯರ್ಗೆ ಮೆಸೇಜ್ ಕಳಿಸಿದ್ದೆ, ಅವರು ಸ್ವತಃ ಉತ್ತರಿಸಿದರು. ಅದು ನಮ್ಮೆಲ್ಲರಿಗೂ ಹರ್ಷದ ವಿಷಯ,” ಎಂದು ಸೂರ್ಯ ಹೇಳಿದರು.
ಅಯ್ಯರ್ ಬಗ್ಗೆ ಮಾತನಾಡುತ್ತಾ ಸೂರ್ಯಕುಮಾರ್ ಮತ್ತಷ್ಟು ಹೇಳಿದರು — “ಶ್ರೇಯಸ್ ಅಯ್ಯರ್ ಅದ್ಭುತ ಪ್ರತಿಭೆಯ ಆಟಗಾರ. ಕೆಲವೊಮ್ಮೆ ಇಂತಹ ಆಕಸ್ಮಿಕ ಗಾಯಗಳು ಕ್ರೀಡಾಪಟುಗಳ ಜೀವನದಲ್ಲಿ ಸಂಭವಿಸುತ್ತವೆ. ಆದರೆ ಆತ ತುಂಬಾ ಬಲಿಷ್ಠ. ಶೀಘ್ರದಲ್ಲೇ ಮೈದಾನಕ್ಕೆ ಮರಳುತ್ತಾರೆ. ಟಿ20 ಸರಣಿ ಮುಗಿದ ನಂತರ ಅವರನ್ನು ಭಾರತಕ್ಕೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇವೆ ಎಂದರು.