ಸಚಿವ ಮುನಿಯಪ್ಪ ಮನೆಗೆ ಮುತ್ತಿಗೆಗೆ ಯತ್ನ..ಪೊಲೀಸರಿಂದ ತಡೆ - ವಿಷ ಸೇವಿಸಿದ ರೈತ!

ಬೆಂಗಳೂರು :- ಕಳೆದ ಸಾಕಷ್ಟು ದಿನಗಳಿಂದ ಕೆಐಎಡಿಬಿ ಭೂ ಸ್ವಾಧೀನ ವಿರೋಧಿಸಿ ಧರಣಿ ನಡೆಸುತ್ತಿದ್ದ ರೈತರು, ಇಂದು ಸಚಿವ ಕೆ.ಹೆಚ್ ಮುನಿಯಪ್ಪ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿ, ಪೊಲೀಸರು ತಡೆದ ಹಿನ್ನೆಲೆ ವಿಷಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ ಘಟನೆ ಬೆಂಗಳೂರು ಗ್ರಾಮಾಂತರ, ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಗ್ರಾಮದಲ್ಲಿ ಜರುಗಿದೆ.
ಚನ್ನರಾಯಪಟ್ಟಣದಿಂದ ಬೆಂಗಳೂರಿನಲ್ಲಿರುವ ಸಚಿವ ಕೆ.ಹೆಚ್ ಮುನಿಯಪ್ಪ ಮನೆಗೆ ಹೊರಟಿದ್ದ ನೂರಾರು ರೈತರನ್ನು ಪೊಲೀಸರು ತಡೆದಿದ್ದಾರೆ. ಬಸ್ ಮೂಲಕ ಧರಣಿ ಸ್ಥಳದಿಂದ ಹೊರಟಿದ್ದ ನೂರಾರು ರೈತರನ್ನ ತಡೆದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ರೈತರು ಚನ್ನರಾಯಪಟ್ಟಣ-ದೇವನಹಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.
ರೈತರನ್ನು ರಸ್ತೆಯಲ್ಲಿಯೇ ತಡೆದಿದ್ದಕ್ಕೆ ಆಕ್ರೋಶಗೊಂಡ ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಕುಡಿದು ರೈತ ವೆಂಕಟೇಶ್ ಅಸ್ವಸ್ಥತರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






