Dasara 2025: ವಿಜಯದಶಮಿ ಹಬ್ಬದಂದು ರಾವಣನ ಪ್ರತಿಮೆಯನ್ನು ಸುಡುವುದು ಯಾಕೆ.?

ಅಕ್ಟೋಬರ್ 2, 2025 - 07:00
 0  9
Dasara 2025: ವಿಜಯದಶಮಿ ಹಬ್ಬದಂದು ರಾವಣನ ಪ್ರತಿಮೆಯನ್ನು ಸುಡುವುದು ಯಾಕೆ.?

ವಿಜಯದಶಮಿಯನ್ನು ಅತ್ಯಂತ ಶುಭದಾಯಕ ದಿನವೆಂದು ಪರಿಗಣಿಸಲಾಗಿದೆ. ವಿಜಯದಶಮಿ, ಶ್ರೀರಾಮನು ರಾವಣನನ್ನು ಹತ್ಯೆಗೈದ ದಿನವಾಗಿದೆ. ಆದಿಮಾಯೆಯು ದುರ್ಗಾ ದೇವಿಯ ರೂಪ ತಾಳಿ ಮಹಿಷಾಸುರನನ್ನು ವಧೆ ಮಾಡಿ ಜಗತ್ತನ್ನು ರಕ್ಷಿಸಿದ ದಿನವಾಗಿದೆ. ಈ ದಿನವನ್ನು ಅಸತ್ಯದ ಮೇಲೆ ಸತ್ಯದ ವಿಜಯದ ದಿನವೆಂದೂ, ಅಧರ್ಮದ ವಿರುದ್ಧ ಧರ್ಮದ ವಿಜಯದ ದಿನವೆಂದೂ ಪರಿಗಣಿಸಲಾಗಿದೆ. 

ದಶಕಂಠನ ಮೇಲೆ ಶ್ರೀರಾಮನ ವಿಜಯ:
ವಿಜಯದಶಮಿಯನ್ನು ರಾವಣನ ಮೇಲೆ ಶ್ರೀರಾಮಚಂದ್ರನು ಸಾಧಿಸಿದ ವಿಜಯದ ನೆನಪಿಗಾಗಿ ಸಹ ಆಚರಿಸಲಾಗುತ್ತದೆ. ಸೀತಾ ಮಾತೆಯನ್ನು ಲಂಕೆಯಿಂದ ಬಿಡಿಸಿಕೊಂಡು ಹೋಗಲು ಬಂದ ಶ್ರೀರಾಮನು ರಾವಣನನ್ನು ಸಂಹರಿಸುತ್ತಾನೆ. ಇದರ ನೆನಪಿನಾರ್ಥವಾಗಿ ರಾವಣನ ಪ್ರತಿಕೃತಿಗಳನ್ನು ದಹನ ಮಾಡುತ್ತಾರೆ.

ಇದು ಕೆಟ್ಟದ್ದರ ವಿರುದ್ಧ ಒಳ್ಳೆಯದು ಗೆಲುವು ಸಾಧಿಸಿದ ಧ್ಯೋತಕ ಎಂದು ನಂಬಲಾಗುತ್ತದೆ. ರಾವಣನಿಗೆ ಹತ್ತು ತಲೆಗಳು ಇದ್ದವು. ಇವೆಲ್ಲವೂ ರಾವಣನಿಗೆ ಅಸಾಧ್ಯವಾದ ಅಹಂ ಅನ್ನು ನೀಡಿದ್ದವು. ಈ ಹತ್ತು ತಲೆಗಳನ್ನು ಸಂಹರಿಸಿದ ದಿನವೇ ‘ದಶ ಹರ’ ಎಂದು ಕರೆಯಲ್ಪಟ್ಟಿತು. ಮುಂದೆ ಇದೇ ಜನರ ಬಾಯಲ್ಲಿ ದಸರಾ ಎಂದು ಬದಲಾಯಿತು. ಅಹಂ ಅನ್ನು ಓಡಿಸುವ ದಿನ ಇದು ಎಂದು ಸಹ ಕರೆಯಲ್ಪಡುತ್ತದೆ.

 ಹಲವಾರು ಕಾರಣಗಳಿಗಾಗಿ, ಪ್ರತಿಕೃತಿ ದಹನವು ಬಹಳಷ್ಟು ಜ್ಯೋತಿಷ್ಯ ಮಹತ್ವವನ್ನು ಸಹ ಹೊಂದಿದೆ. ರಾವಣ ದಹನವನ್ನು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸಂಕೇತಿಸಲು ಮಾಡಲಾಗುತ್ತದೆ. ಇದು ಉತ್ತಮ ಜ್ಯೋತಿಷ್ಯ ಕ್ಷಣದಲ್ಲಿ ಸಂಭವಿಸುವುದರಿಂದ ಇದು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಪ್ರತಿಕೃತಿಯನ್ನು ಸುಡುವ ಅಭ್ಯಾಸವು ಗ್ರಹಗಳನ್ನು ಆಶೀರ್ವಾದಕ್ಕಾಗಿ ಮತ್ತು ಜೀವನೋತ್ಸಾಹವನ್ನು ಹೆಚ್ಚಿಸಲು ಉತ್ತಮ ಶಕ್ತಿಯನ್ನು ಆಹ್ವಾನಿಸುತ್ತದೆ ಎಂದು ನಂಬಲಾಗಿದೆ.
 
ನವರಾತ್ರಿಯ ಸಮಯದಲ್ಲಿ, ನಾವು ಪ್ರತಿದಿನ ಮಾತೆ ದುರ್ಗೆಯ ವಿಭಿನ್ನ ರೂಪವನ್ನು ಪೂಜಿಸುವುದರಿಂದ, ಇದು ಗ್ರಹಗಳ ಪರವಾಗಿ ಪ್ರಾಮುಖ್ಯತೆಯ ಜ್ಯೋತಿಷ್ಯ ಕಲ್ಪನೆಗಳಿಗೆ ಸಂಬಂಧಿಸಿದೆ. ಮಂಗಳ ಗ್ರಹವು ಅನುಕೂಲಕರ ಸ್ಥಾನದಲ್ಲಿದೆ ಎಂದು ಹೇಳಲಾಗುತ್ತದೆ. ಈ ಗ್ರಹವು ಶೌರ್ಯದಂತಹ ಗುಣಲಕ್ಷಣಗಳೊಂದಿಗೆ ಸಂಬಂಧಿಸಿದೆ, ಇದು ದುಷ್ಟ ಶಕ್ತಿಗಳನ್ನು ಜಯಿಸಲು ಬಹಳ ಅವಶ್ಯಕವಾಗಿದೆ. ಈ ಮಂಗಳ ಸ್ಥಾನವು ರಾವಣನ ಪ್ರತಿಕೃತಿಗಳನ್ನು ಸುಡುವುದರೊಂದಿಗೆ ಹೊಂದಿಕೆಯಾಗುತ್ತದೆ.
 
ಪಾಂಡವರ ವನವಾಸ ಅಂತ್ಯಗೊಂಡ ದಿನ:

ಮಹಾಭಾರತದಲ್ಲಿ ಪಾಂಡವರ ಅಜ್ಞಾತವಾಸವು ಅಂತ್ಯಗೊಂಡ ದಿನವೇ ‘ವಿಜಯದಶಮಿ’. ಕೌರವರ ಜೊತೆಗೆ ನಡೆದ ಪಗಡೆಯಾಟದಲ್ಲಿ ಸೋತು, ನಿಯಮದ ಪ್ರಕಾರ ಹನ್ನೆರಡು ವರ್ಷಗಳ ವನವಾಸ ಮತ್ತು ಒಂದು ವರ್ಷದ ಅಜ್ಞಾತ ವಾಸವನ್ನು ಮಾಡಿದ ಪಾಂಡವರು, ತಮ್ಮ ಅಜ್ಞಾತವಾಸವನ್ನು ಮುಗಿಸಿ, ತಮ್ಮ ರಾಜ್ಯವನ್ನು ತಮಗೆ ನೀಡಿರಿ ಎಂದು ಕೇಳಲು ಬಂದರು. ಆ ಕ್ರಿಯೆಗೆ ಮುನ್ನುಡಿ ಹಾಡಿದ ವಿರಾಟನ ಗೋಗ್ರಹಣಕ್ಕೆ ಪ್ರತಿಯಾಗಿ ಯುದ್ಧವೊಂದು ನಡೆಯಿತು. ಆ ಯುದ್ಧ ನಡೆದಿದ್ದು ವಿಜಯದಶಮಿಯಂದು.

ದಕ್ಷಿಣ ಭಾರತದಲ್ಲಿ ವಿಜಯದಶಮಿಯನ್ನು ಚಾಮುಂಡೇಶ್ವರಿ ಅಥವಾ ದುರ್ಗಾ ದೇವಿಯ ಆರಾಧನೆ ಮಾಡಲು ಆಚರಿಸುತ್ತಾರೆ. ದೇವಾನುದೇವತೆಗಳ ಬಣ್ಣ ಬಣ್ಣದ ಬೊಂಬೆಗಳನ್ನು ತಯಾರಿಸಿ ಮನೆಗಳಲ್ಲಿ ಇಡುತ್ತಾರೆ. ಇದನ್ನು ತಮಿಳು ನಾಡಿನಲ್ಲಿ ‘ಗೋಲು’ ಎಂದು, ಕರ್ನಾಟಕದಲ್ಲಿ ‘ಗೊಂಬೆ ಹಬ್ಬ’ ಎಂದು ಕರೆಯುತ್ತಾರೆ. ಕೇರಳದಲ್ಲಿ, ವಿಜಯದಶಮಿಯ ದಿನ ಸರಸ್ವತಿ ದೇವಿಯನ್ನು ಪೂಜಿಸುತ್ತಾರೆ. ಈ ದಿನ ಎಳೆಯ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡುತ್ತಾರೆ. ಈ ದಿನ ವಿದ್ಯಾಭ್ಯಾಸವನ್ನು ಆರಂಭಿಸಲು ಒಳ್ಳೆಯ ದಿನ ಎಂಬ ನಂಬಿಕೆ ಇದೆ.

ಕೆಟ್ಟದ್ದರ ವಿರುದ್ಧ ಒಳ್ಳೆಯದು ಸಾಧಿಸಿದ ಗೆಲುವನ್ನು ಆಚರಿಸಲು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಯಾವುದೇ ಧರ್ಮ, ಮತಗಳ ಭೇದವಿಲ್ಲದೆ ಹಲವರು ಈ ಹಬ್ಬವನ್ನು ಆಚರಿಸುತ್ತಾರೆ. ಎಲ್ಲರಿಗೂ ಸಿಹಿಗಳನ್ನು ಹಂಚಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಶಾಂತಿ ಮತ್ತು ಸೌಹಾರ್ದತೆಯ ಜೊತೆಗೆ ಸಂಪತ್ತನ್ನು ಕರುಣಿಸು ಎಂದು ದೇವಿಯನ್ನು ಪ್ರಾರ್ಥಿಸುತ್ತಾರೆ. ಜೊತೆಗೆ ಸುಗ್ಗಿಯ ಕಾಲವನ್ನು ಬರಮಾಡಿಕೊಳ್ಳಲು ಈ ಹಬ್ಬದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow