Mandya Traffic Police: ನಾನೇ 10 ಲಕ್ಷ ಕೊಡ್ತೀನಿ ನನ್ನ ಮಗಳ ತಂದುಕೊಡಿ: ಪೊಲೀಸರ ಎಡವಟ್ಟಿಗೆ ತಂದೆ ಆಕ್ರೋಶ

ಮಂಡ್ಯ: ಮಂಡ್ಯ ಟ್ರಾಫಿಕ್ ಪೊಲೀಸರ ಯಡವಟ್ಟಿಗೆ 3 ವರ್ಷದ ಕಂದಮ್ಮ ಹೃತೀಕ್ಷ ಕೊನೆಯುಸಿರೆಳೆದಿದೆ. ನಗರದ ಸ್ವರ್ಣಸಂದ್ರ ಸರ್ಕಲ್ ಬಳಿ ಹೆಲ್ಮೆಟ್ ತಪಾಸಣೆ ವೇಳೆ ಪೊಲೀಸರು ಬೈಕ್ ಅನ್ನು ಅಡ್ಡಗಟ್ಟಿದ್ದರು. ಬೈಕ್ನಲ್ಲಿದ್ದ ತಂದೆ, ತಾಯಿ ಆಯತಪ್ಪಿ ಬಿದ್ದಿದ್ದು, ಮಗು ತಲೆಗೆ ಬಲವಾದ ಪೆಟ್ಟಾಗಿತ್ತು. ರಕ್ತಸ್ರಾವದಿಂದ 3 ವರ್ಷದ ಕಂದಮ್ಮ ಸಾವನ್ನಪ್ಪಿದೆ. ಮಗುವನ್ನ ಮಡಿಲಲ್ಲಿಟ್ಟುಕೊಂಡು ತಂದೆ-ತಾಯಿ ಗೋಳಾಡುತ್ತಿದ್ದರೆ ಟ್ರಾಫಿಕ್ ಪೊಲೀಸರ ವಿರುದ್ಧ ಸಾರ್ವಜನಿಕರು ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಮಗು ಕಳೆದುಕೊಂಡ ನೋವಿನಲ್ಲಿ ಮಾತನಾಡಿರುವ ತಂದೆ, ಪಾಪುಗೆ ನಾಯಿ ಕಚ್ಚಿತ್ತು. ಮದ್ದೂರಿನಿಂದ ಕರೆದುಕೊಂಡು ಬಂದ್ವಿ. ಇಲ್ಲಿನ ಸರ್ವೀಸ್ ರಸ್ತೆಯಲ್ಲಿ ಗಾಡಿಯನ್ನು ಅಡ್ಡ ಹಾಕಿದ್ದಾರೆ. ಆಗ ಅರ್ಜೆಂಟ್ ಅಲ್ಲಿ ಆಸ್ಪತ್ರೆಗೆ ಹೊರಟಿದ್ವಿ. ಆಗ ಗಾಡಿ ಮೂವ್ ಮಾಡಲು ಕೊಟ್ಟಿಲ್ಲ. ಅವರ ಗಾಡಿ ಅಡ್ಡ ಹಾಕಿದ ಪರಿಣಾಮ ನಮ್ಮ ಬೈಕ್ ಸ್ಕಿಡ್ ಆಗಿದೆ. ಸ್ಕಿಡ್ ಆಗಿ ಮಗು ಬೀಳುತ್ತಿದ್ದಂತೆಯೇ ಬೇರೆ ವಾಹನ ಬಂದು ಪಾಪು ಮೇಲೆ ಹರಿದಿದೆ. ನನ್ನ ಮಗಳ ಜೀವ ತಿನ್ನೋಕೆ ಇವರೇ ಕಾರಣ ಸ್ವಾಮಿ.
ಅವರಿಗೆ ಬ್ಯಾಂಡೇಜ್ ಹಾಕಿದ್ದೂ ಕಾಣಿಸಿಲ್ವಾ? ಇವರ ದುಡ್ಡನ್ನು ತಿಂದು ಹೋಗ್ತೀವಾ? ನನ್ನ ಮಗಳಿಗೆ ಪರಿಹಾರ ಕೊಡ್ತಾರಂತೆ. ನಾನೇ ಹತ್ತು ಲಕ್ಷ ಕೊಡ್ತೀನಿ ಸ್ವಾಮಿ ನನ್ನ ಮಗಳ ತಂದು ಕೊಡ್ತೀರಾ? ಎಂದು ಕಣ್ಣೀರಿಟ್ಟಿದ್ದಾರೆ.ಈ ಘಟನೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ಸಂಚಾರಕ್ಕೂ ತೊಂದರೆಯಾಯಿತು. ಇನ್ನು ಮೃತ ಮಗು ಹೃತೀಕ್ಷ ಸಾವು ಸಂಬಂಧ ಮಂಡ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






