Renukaswamy Case: ದರ್ಶನ್-ಪವಿತ್ರಾ ಗೌಡಗೆ ಸಿಗಲಿಲ್ಲ ಬೇಲ್: ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ಹಾಗೂ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಲೇ ಇದ್ದು ಇಂದು ನಟ ದರ್ಶನ್ ಸೇರಿದಂತೆ ಆರು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ನಟ ದರ್ಶನ್, ನಟಿ ಪವಿತ್ರಾಗೌಡ, ನಾಗರಾಜ್, ಲಕ್ಷ್ಮಣ್, ಅನುಕುಮಾರ್ ಹಾಗೂ ಜಗದೀಶ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದೆ. ದಿನದ ವಿಚಾರಣೆಯಲ್ಲಿ ಆರೋಪಿಗಳ ಪರವಾಗಿ ವಾದ ಮಂಡನೆ ಪೂರ್ತಿಯಾಗಿದೆ.
ಮುಂದೆ, ಪೊಲೀಸರ ಪರವಾದ ವಾದ ಮಂಡನೆಗೆ ಅವಕಾಶವಿದೆ. ಹಾಗಾಗಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ. 6ಕ್ಕೆ ಮುಂದೂಡಲಾಗಿದೆ. ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡರ ವಕೀಲರಾದ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದರು. ತಮ್ಮ ಕಕ್ಷಿದಾದರಾದ ಪವಿತ್ರಾ ಗೌಡರದ್ದು ದೊಡ್ಡ ಅಪರಾಧವೇನಿಲ್ಲ ಎಂಬರ್ಥದಲ್ಲಿ ಅವರು ವಾದ ಮಂಡಿಸಿದರು.
ಅಸಲಿಗೆ, ರೇಣುಕಾಸ್ವಾಮಿಯವರ ಅಪಹರಣದ ಬಗ್ಗೆ ಪವಿತ್ರಾ ಅವರದ್ದು ಯಾವುದೇ ಪಾತ್ರವಿಲ್ಲ. ರೇಣುಕಾಸ್ವಾಮಿಯವರು ತಮಗೆ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದುದರ ಬಗ್ಗೆ ಪವಿತ್ರಾ ಅವರು ತಮ್ಮ ಮ್ಯಾನೇಜರ್ ಪವನ್ ಅವರ ಬಳಿ ನೋವಿನಿಂದ ಹೇಳಿಕೊಂಡಿದ್ದರು. ಆತ ಹೋಗಿ ದರ್ಶನ್ ಅವರಿಗೆ ಹೇಳಿದ್ದಾನೆ ಎಂದು ಸೆಬಾಸ್ಟಿಯನ್ ಅವರು ವಾದ ಮಂಡಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಇನ್ನು, ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡಾದ ಮೇಲೆಯೇ ಪವಿತ್ರಾ ಗೌಡರಿಗೆ ವಿಷಯ ಗೊತ್ತಾಗಿದೆ. ದರ್ಶನ್ ಅವರು ನಿನಗೆ ಮೆಸೇಜ್ ಮಾಡುತ್ತಿದ್ದವನ್ನು ಹಿಡಿದು ತರಿಸಿದ್ದೇವೆ ಎಂದು ಹೇಳಿದಾಗಲೇ ಪವಿತ್ರಾ ಗೌಡರಿಗೆ ರೇಣುಕಾಸ್ವಾಮಿಯನ್ನು ಕರೆತಂದಿರುವುದು ಗೊತ್ತಾಗಿದೆ ಎಂದು ಅವರು ವಾದ ಮಂಡಿಸಿದ್ದಾರೆ.
ಇನ್ನು, ಹತ್ಯೆಗೆ ಬಳಸಿದ ವಸ್ತುಗಳ ರಿಕವರಿಗೂ ತಡವಾಗಿದೆ. ಹೇಳಿಕೆಗಳನ್ನು ತಡವಾಗಿ ದಾಖಲಿಸಲಾಗಿದೆ. ಬಟ್ಟೆಯ ಮೇಲಿರುವ ರಕ್ತದ ಕಲೆಯ ಬಗ್ಗೆ ಪಂಚನಾಮೆಯಲ್ಲಿ ಉಲ್ಲೇಖವಾಗಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಮೂಲಕ, ಪ್ರಕರಣದ ಆರೋಪಿಗಳ ಪರವಾದ ವಾದ ಪೂರ್ಣವಾಗಿದೆ. ಮುಂದಿನ ವಿಚಾರಣೆಯಲ್ಲಿ ಪೊಲೀಸರ ಪರವಾಗಿ ಸರ್ಕಾರಿ ವಕೀಲರಾದ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಬಹುದು ಎಂದು ನ್ಯಾಯಪೀಠ ಸೂಚಿಸಿದೆ. ಹಾಗಾಗಿ, ಡಿ. 6ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






