Upendra in Coolie: ನಟ ರಜನೀಕಾಂತ್ʼರನ್ನು ‘ದ್ರೋಣಾಚಾರ್ಯ’ ಎಂದ ಉಪೇಂದ್ರ
ಚೆನ್ನೈ: ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ಆಗಸ್ಟ್ 14ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಒಂದು ವಾರದ ಹಿಂದೆ ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ ನಡೆದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ರಜನೀಕಾಂತ್, ಅಕ್ಕಿನೇನಿ ನಾಗಾರ್ಜುನ, ಆಮಿರ್ ಖಾನ್, ಸೌಬಿನ್, ಉಪೇಂದ್ರ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಿದ್ದರು.
ಸನ್ ನೆಟ್ವರ್ಕ್ಸ್ ಇದೀಗ ಆ ಕಾರ್ಯಕ್ರಮದ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದ್ದು, ಅದರಲ್ಲಿ ನಟ ಉಪೇಂದ್ರ ಅವರ ಭಾಷಣ ಹೆಚ್ಚು ಗಮನ ಸೆಳೆದಿದೆ.
ಭಾಷಣವನ್ನು ಕನ್ನಡದಲ್ಲಿ “ಎಲ್ಲರಿಗೂ ನಮಸ್ಕಾರ” ಎಂದು ಪ್ರಾರಂಭಿಸಿದ ಉಪೇಂದ್ರ, ನಂತರ ತಮಿಳಿನಲ್ಲಿ ಮಾತನಾಡಿ, “25 ವರ್ಷಗಳ ಹಿಂದೆ ನಾನು ರಜನೀಕಾಂತ್ ಅವರನ್ನು ಭೇಟಿಯಾಗಿದ್ದು ನನ್ನ ಜೀವನದ ಮರೆಯಲಾಗದ ಘಟನೆ. ಅಂದಿನಿಂದ ಇಂದಿನವರೆಗೂ ಒಬ್ಬ ಏಕಲವ್ಯ ದ್ರೋಣಾಚಾರ್ಯನನ್ನು ಅನುಸರಿಸಿದಂತೆ ನಾನು ರಜನೀಕಾಂತ್ ಅವರನ್ನು ಅನುಸರಿಸುತ್ತಿದ್ದೇನೆ” ಎಂದರು.
ಅವರು ಮುಂದುವರಿಸಿ, “ರಜನೀಕಾಂತ್ ಅವರ ಪ್ರತಿ ವಿಡಿಯೋವನ್ನು 10, 20, 100 ಬಾರಿ ನೋಡುತ್ತೇನೆ. ಅದು ಕೇವಲ ಮನರಂಜನೆಗಾಗಿ ಅಲ್ಲ, ಜ್ಞಾನೋದಯಕ್ಕಾಗಿ. ದ್ರೋಣಾಚಾರ್ಯ ಏಕಲವ್ಯನ ಬೆರಳು ತೆಗೆದುಕೊಂಡರೆ, ರಜನೀಕಾಂತ್ ಈ ಏಕಲವ್ಯನ ಬೆರಳು ಹಿಡಿದು ‘ಕೂಲಿ’ ಪ್ರಪಂಚಕ್ಕೆ ಕರೆದುಕೊಂಡು ಬಂದರು. ಇಲ್ಲಿ ದಿಗ್ಗಜರಾದ ಆಮಿರ್ ಖಾನ್, ನಾಗಾರ್ಜುನ, ಸೌಬಿನ್ ಇದ್ದಾರೆ. ಈ ಅವಕಾಶ ನೀಡಿದಕ್ಕೆ ಧನ್ಯವಾದಗಳು” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?