ಎಗ್ ರೈಸ್ ತಿಂದು ಬಂದಿನಿ: ಮತ್ತೆ ಹುಟ್ಟೂರಿನ ಜನರ ಹೃದಯ ಗೆದ್ದ ಹನುಮಂತು!

ಫೆಬ್ರವರಿ 21, 2025 - 21:17
 0  14
ಎಗ್ ರೈಸ್ ತಿಂದು ಬಂದಿನಿ: ಮತ್ತೆ ಹುಟ್ಟೂರಿನ ಜನರ ಹೃದಯ ಗೆದ್ದ ಹನುಮಂತು!

ಕರ್ನಾಟಕದ ಜನತೆಗೆ ಹನುಮಂತ ಲಮಾಣಿಯ ಪರಿಚಯವಾಗಿದ್ದೇ ಅವರ ಗಾಯನದಿಂದ. 2019ರಲ್ಲಿ ಸರಿಗಮಪ ಸೀಸನ್‌ 15 ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹನುಮಂತನ ಅದೃಷ್ಟದ ಬಾಗಿಲು ತೆರೆಯಿತು. ಅಲ್ಲಿಂದ ಶುರುವಾದ ಅವರ ಯಶಸ್ಸಿನ ಪಯಣ ಇದೀಗ ಕರ್ನಾಟಕದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಗೆಲ್ಲುವ ಹಂತಕ್ಕೆ ಬಂದು ನಿಂತಿದೆ.

ಇನ್ನೂ ಬಿಗ್‌ಬಾಸ್ 11ನೇ ಸೀಸನ್ ವಿನ್ನರ್ ಹನುಮಂತು ಶೋ ಬಳಿಕ ಸಖತ್ ಬ್ಯುಸಿಯಾಗಿದ್ದಾರೆ. ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಎಲ್ಲರ ಮನಗೆದ್ದಿದ್ದ ಹನುಮಂತು ಈಗ ತಮ್ಮ ಕಾರ್ಯಕ್ರಮಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದಾರೆ.

ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿ ದೇವಿ ಜಾತ್ರೆಯ ಪ್ರಯುಕ್ತ ಮನರಂಜನಾ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಬಿಗ್‌ಬಾಸ್ ವಿನ್ನರ್ ಹನುಮಂತು. ತಮ್ಮ ಹಾಡಿನ ಮೂಲಕವೇ ಹನುಮಂತು ಜನರಿಗೆ ಮನರಂಜನೆ ನೀಡಿದ್ದಾರೆ. ಶರೀಫರ ತತ್ವ ಪದ ಹಾಗೂ ಸಿನಿಮಾ ಹಾಡುಗಳನ್ನ ಹಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಿದ್ದಾರೆ.

ಹಳ್ಳಿಹೈದ ಹನುಮಂತು ವೇದಿಕೆಗೆ ಆಗಮಿಸುತ್ತಿದ್ದಂತೆ ಜನರ ಕೇಕೆ ಚಪ್ಪಾಳೆ ಜೋರಾಗಿತ್ತು. ಮೊದಲು ಕೇಳ ಜಾಣ ಶಿವಧ್ಯಾನ ಮಾಡಣ್ಣ, ನಿನ್ನ ಒಳಗ ನೀನು‌ ತಿಳಿದು ನೋಡಣ್ಣ ಎಂಬ ಹಾಡನ್ನ ಹಾಡುವ ಮೂಲಕ ಜನರಿಗೆ ಮನರಂಜನೆ ನೀಡಿದರು. ಹಾಡಿನ ಮಧ್ಯದಲ್ಲಿ ಎಗ್ಗರೈಸ್ ತಿಂದು ಬಂದಿನ್ರೀ. ಯಾಕೋ ಸ್ವಲ್ಪ ಧ್ವನಿ ಸರಿ ಇಲ್ಲರ್ರೀ ಎಂದು ಹಾಸ್ಯ ಚಟಾಕಿ ಸಿಡಿಸಿ ಜನರ ಮುಖದಲ್ಲಿ ನಗು ತರಿಸಿದರು.

ನಂತರ ನಿಜ ಹೇಳತಿನಿ ಕೇಳ ಗೆಳತಿ ಎಂಬ ಜಾನಪದ ಹಾಡನ್ನ ಹೇಳಿ, ಹನುಮಂತು ಹಳ್ಳಿಯ ಜನರ ಮನ ತಣಿಸಿದರು. ಅಲ್ಲದೆ ಶೇಕ್ ಇಟ್ ಪುಷ್ಪವತಿ ಸಾಂಗ್‌ಗೆ ಸಖತ್ ಸ್ಟೆಪ್ ಹಾಕಿ ಜಾತ್ರೆಗೆ ಆಗಮಿಸಿದ ಜನರಿಗೆ ಮನರಂಜನೆ ನೀಡಿದರು. ದಿವಂಗತ ಪುನೀತ್ ರಾಜಕುಮಾರ್ ಅವರನ್ನ ನೆನೆದು ಬೊಂಬೆ ಹೇಳುತೈತೆ ಹಾಡಿಗೆ ಧ್ವನಿಗೂಡಿಸಿ ನೆರೆದಿದ್ದ ಪ್ರೇಕ್ಷಕರನ್ನ ಭಾವುಕ ಕ್ಷಣಕ್ಕೆ ಕರೆದೊಯ್ದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow