ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪರ ಮನೆ ಖರೀದಿಸಿದ ರಾಜ್ಯ ಸರ್ಕಾರ!

ಬೆಂಗಳೂರು:- ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪರ ಮನೆಯನ್ನು ಕರ್ನಾಟಕ ಸರ್ಕಾರ ಖರೀದಿಸಿದೆ.
ಸುಮಾರು 1 ಕೋಟಿ ರೂ. ಕಡಿಮೆ ಮೊತ್ತಕ್ಕೆ ಸರ್ಕಾರ, ನಿಜಲಿಂಗಪ್ಪ ನಿವಾಸವನ್ನು ಖರೀದಿ ಮಾಡಿದ ಬಗ್ಗೆ ವರದಿಯಾಗಿದೆ. ನಿಜಲಿಂಗಪ್ಪ ಅವರು ಬದುಕಿ, ಬಾಳಿರುವ ಚಿತ್ರದುರ್ಗದ ಮನೆಯ ಖರೀದಿಗೆ ಸರ್ಕಾರ ಉತ್ಸಾಹ ತೋರದ್ದರಿಂದ ಇತ್ತೀಚೆಗೆ ಕೆಲವು ದಿನಗಳ ಹಿಂದೆ ಅವರ ಮಗ ಎಸ್ಎನ್ ಕಿರಣಶಂಕರ್ ‘‘ಮನೆ ಮಾರಾಟಕ್ಕಿದೆ’’ ಎಂದು ಜಾಹೀರಾತು ನೀಡಿದ್ದರು. ಇದರಿಂದ ಐತಿಹಾಸಿಕ ನಿವಾಸ ಖಾಸಗಿಯವರ ಪಾಲಾಗುವ ಆತಂಕ ಎದುರಾಗಿತ್ತು.
ನಾಲ್ಕು ವರ್ಷಗಳ ವಿಳಂಬದ ಬಳಿಕ ಕರ್ನಾಟಕ ಸರ್ಕಾರ ಮನೆ ಖರೀದಿಸಿದೆ. ಎಸ್ಎನ್ ಕಿರಣಶಂಕರ್ ಅವರು ಸ್ಥಳೀಯ ತಹಶೀಲ್ದಾರ್ ಮೂಲಕ ಮನೆಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದರು ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಕಿರಣಶಂಕರ್ ಅವರು ಕರ್ನಾಟಕ ಸರ್ಕಾರದ ಮುಖ್ಯ ವಾಸ್ತುಶಿಲ್ಪಿಯಾಗಿ ಸೇವೆ ಸಲ್ಲಿಸಿದ್ದರು.
ಮಹಾತ್ಮಾ ಗಾಂಧಿಯ ಭಾಗವಹಿಸಿದ್ದ 1924 ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸಂದರ್ಭದಲ್ಲೇ ಬೆಳಗಾವಿಯಲ್ಲಿನ ಐತಿಹಾಸಿಕ ನಿವಾಸ ಸರ್ಕಾರದ ಅಧೀನಕ್ಕೆ ಬಂದಿರುವುದು ವಿಶೇಷ ಎನ್ನಲಾಗಿದೆ.
ನಾಲ್ಕು ವರ್ಷಗಳ ಹಿಂದೆಯೇ ಮನೆಯನ್ನು ಸರ್ಕಾರಕ್ಕೆ ಮಾರಾಟ ಮಾಡುವ ಬಗ್ಗೆ ನಿಜಲಿಂಗಪ್ಪ ಕುಟುಂಬದವರು ಒಪ್ಪಿಗೆ ನೀಡಿದ್ದರು. ಆದರೆ ಸರ್ಕಾರ ನಿರುತ್ಸಾಹ ತೋರಿದ್ದರಿಂದ ಮಾರಾಟ ವಿಳಂಬವಾಯಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆಯುವುದಕ್ಕೆ ಸುಮಾರು ಒಂದು ದಶಕದ ಮೊದಲು ನಿರ್ಮಿಸಲಾದ ಮನೆ ಇದಾಗಿದೆ.
ಈ ಮೂಲಕ ವಿವಾದದ ಸುಳಿಯಲ್ಲಿ ಸಿಲುಕಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಎಐಸಿಸಿ ಅಧ್ಯಕ್ಷ ಎಸ್ ನಿಜಲಿಂಗಪ್ಪ ಅವರ ಚಿತ್ರದುರ್ಗದ ನಿವಾಸವನ್ನು ಅಂತಿಮವಾಗಿ ಕರ್ನಾಟಕ ಸರ್ಕಾರಕ್ಕೆ ಮಾರಾಟ ಮಾಡಲಾಯಿತು, ಇದು ನಾಲ್ಕು ವರ್ಷಗಳ ಕಾಲ ನಡೆದ ಹಗ್ಗ ಜಗ್ಗಾಟ ಕೊನೆಗೊಂಡಿದೆ.
ನಿಮ್ಮ ಪ್ರತಿಕ್ರಿಯೆ ಏನು?






