ಗಣೇಶ ಉತ್ಸವದ ಮೆರವಣಿಗೆಗಳ ಮೇಲೆ ವ್ಯವಸ್ಥಿತ ದಾಳಿ: ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ಕಿಡಿ!

ಸೆಪ್ಟೆಂಬರ್ 21, 2024 - 22:09
 0  9
ಗಣೇಶ ಉತ್ಸವದ ಮೆರವಣಿಗೆಗಳ ಮೇಲೆ ವ್ಯವಸ್ಥಿತ ದಾಳಿ: ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ಕಿಡಿ!

ಬೆಂಗಳೂರು:- ಸಿದ್ದರಾಮಯ್ಯ ಸರ್ಕಾರ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುವ ನಿಟ್ಟಿನಲ್ಲಿ ಗಮನ ನೀಡುವ ಬದಲು ಧಾರ್ಮಿಕ ಶ್ರದ್ಧೆಯ ಗಣೇಶೋತ್ಸವದ ಮೆರವಣಿಗೆಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು,ದಾವಣಗೆರೆ, ಮಂಡ್ಯ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಕೆಲ ಅಹಿತಕರ ಘಟನೆಗಳು ನಡೆದಿವೆ. ಕಿಡಿಗೇಡಿಗಳ ಇಂತಹ ಕೃತ್ಯವನ್ನು ಮಟ್ಟಹಾಕುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟ್ವಿಟರ್​ನಲ್ಲಿ ಗುಡುಗಿದ್ದಾರೆ. 

 ಹಿಂದೆಂದೂ ಘಟಿಸದ ರೀತಿಯಲ್ಲಿ ರಾಜ್ಯದಲ್ಲಿ ಗಣೇಶ ಉತ್ಸವದ ಮೆರವಣಿಗೆಗಳ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಯುತ್ತಿದೆ. ಹಿಂದೂ ವಿರೋಧಿ ಶಕ್ತಿಗಳು ಸಮಾಜದ ಶಾಂತಿ ಸುವ್ಯವಸ್ಥೆಗೆ ಭಂಗ ತಂದು ಅಶಾಂತಿಯ ವಾತಾವರಣ ಸೃಷ್ಟಿಸಲು ವ್ಯವಸ್ಥಿತವಾಗಿ ತೊಡಗಿವೆ. ಸರಣಿ ಘಟನೆಗಳನ್ನು ಗಮನಿಸಿದರೆ ಹಿಂದೂ ಧಾರ್ಮಿಕ ಆಚಾರ-ವಿಚಾರಗಳನ್ನು ದಮನ ಮಾಡಲು ಒಂದು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿರುವಂತೆ ಕಾಣುತ್ತಿದೆ.

ಕಣ್ಣು, ಕಿವಿ ಇವೆರಡನ್ನು ಮುಚ್ಚಿಕೊಂಡಿರುವ ಕಾಂಗ್ರೆಸ್ ಸರ್ಕಾರದ ಕಾನೂನು ಸುವ್ಯವಸ್ಥೆ ತಿಳಿಗೇಡಿಗಳ ವ್ಯೂಹವನ್ನು ಭೇದಿಸಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುವ ನಿಟ್ಟಿನಲ್ಲಿ ಗಮನ ನೀಡುವ ಬದಲು ಧಾರ್ಮಿಕ ಶ್ರದ್ಧೆಯ ಗಣೇಶೋತ್ಸವದ ಮೆರವಣಿಗೆಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಕ್ರಮವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಷ್ಟರಮಟ್ಟಿಗೆ ಪೊಲೀಸ್ ವ್ಯವಸ್ಥೆ ಪಕ್ಷಪಾತಿ ಹಾಗೂ ನಿಷ್ಕ್ರಿಯವಾಗಿದೆ ಎಂದರೆ, ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರು ತುಮಕೂರಿನ ಗಣೇಶೋತ್ಸವದ ಮೆರವಣಿಗೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸದಂತೆ ನಿರ್ಬಂಧಿಸುವ ಹೇಡಿತನವನ್ನು ಪ್ರದರ್ಶಿಸಿದ್ದಾರೆ. ವಿದ್ಯೆಗೆ ಅಧಿಪತಿ ಗಣಪತಿ, ವಿದ್ಯೆ ದಯಪಾಲಿಸುವ ಗಣೇಶನನ್ನು ಶಾಲಾ-ಕಾಲೇಜುಗಳಲ್ಲಿ ಪೂಜಿಸುವುದು, ಮೆರವಣಿಗೆ ನಡೆಸುವುದು ಶತಮಾನಗಳಿಂದ ನಡೆದು ಬಂದಿರುವ ಪ್ರತೀತಿ. ವಿದ್ಯಾರ್ಥಿಗಳ ಧಾರ್ಮಿಕ ನಂಬಿಕೆ ಶೈಕ್ಷಣಿಕ ಶ್ರದ್ಧೆಯನ್ನು ವಿಚಲಿತಗೊಳಿಸಲು ಯತ್ನಿಸುವ ಕ್ರಮ ಇದಾಗಿದೆ ಎಂದು ಕಿಡಿಕಾರಿದ್ದಾರೆ.

ಒಂದು ಕಡೆ ಧಾರ್ಮಿಕ ಆಚರಣೆಯಲ್ಲಿ ತೊಡಗುವವರಿಗೆ ರಕ್ಷಣೆ ನೀಡಲಾಗದೆ, ಮತ್ತೊಂದು ಕಡೆ ಹಿಂದೂ ವಿರೋಧಿ ದುಷ್ಕರ್ಮಿಗಳ ಷಡ್ಯಂತ್ರವನ್ನು ಪರೋಕ್ಷವಾಗಿ ಬೆಂಬಲಿಸುವಂತೆ ಪೊಲೀಸ್ ವ್ಯವಸ್ಥೆ ನಡೆದುಕೊಳ್ಳುತ್ತಿದೆ. ಈ ನಡವಳಿಕೆಯನ್ನು ನಾವು ಸಹಿಸಿಕೊಳ್ಳುತ್ತಿದ್ದೇವೆ ಎಂದರೆ ಅದು ನಮ್ಮ ದೌರ್ಬಲ್ಯವಲ್ಲ ಎಂಬ ಅಂಶ ಸರ್ಕಾರದ ವ್ಯವಸ್ಥೆಗೆ ತಿಳಿದಿರಲಿ. ತಾಳ್ಮೆ, ಸಂಯಮ ನಮ್ಮ ಸಂಸ್ಕಾರ ಹೌದು, ಅಂತೆಯೇ ದಬ್ಬಾಳಿಕೆಯನ್ನು ಹೆಮ್ಮೆಟ್ಟಿಸುವುದು ನಮ್ಮ ಸ್ವಾಭಿಮಾನದ ಸಂಕೇತವೂ ಎಂಬುದು ಈ ಸರ್ಕಾರಕ್ಕೆ ತಿಳಿದಿರಲಿ ಎಂದು ತಿರುಗೇಟು ನೀಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow