ಜಾಮೀನು ಮಂಜೂರಾಗಿದ್ದರೂ ಮತ್ತೆ ಜೈಲೋ ಸೇರುವ ಭೀತಿ ನಟ ದರ್ಶನ್ʼಗೆ ಶುರು..!

ನಟ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ. ಅವರು ಈಗಾಗಲೇ ಮಧ್ಯಂತರ ಜಾಮೀನು ಪಡೆದು ಹೊರಗೆ ಇರುವುದರಿಂದ ಅವರಿಗೆ ಯಾವುದೇ ಹೆಚ್ಚಿನ ಚಿಂತೆ ಇಲ್ಲ. ತುರ್ತು ಆಪರೇಷನ್ ಅಗತ್ಯ ಎಂದು ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದರು.
ವೈದ್ಯರು ಡಿಸೆಂಬರ್ 11ಕ್ಕೆ ಆಪರೇಷನ್ ನಿಗದಿ ಮಾಡಿದ್ದರು. ಆದರೆ, ಈಗ ಪೂರ್ಣ ಪ್ರಮಾಣದ ಜಾಮೀನು ಸಿಕ್ಕಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿಕೊಳ್ಳುತ್ತಾರಾ ಅಥವಾ ಆಪರೇಷನ್ ಮಾಡಿಸಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
ಇದರ ಜೊತೆಗೆ ಬಟ್ಟೆಗಳಲ್ಲಿ ರಕ್ತದ ಕಲೆ, ಮೊಬೈಲ್ ಸಿಡಿಆರ್ ವಿವರ ಸೇರಿದಂತೆ ಇತ್ಯಾದಿಗಳ ಬಗ್ಗೆ ಸಾಕ್ಷಿ ವಿಚಾರಣೆ ಬಳಿಕವಷ್ಟೇ ನಿರ್ಣಯಕ್ಕೆ ಬರಲು ಸಾಧ್ಯ ಎಂದಿರುವ ಕೋರ್ಟ್, ಗ್ರೌಂಡ್ಸ್ ಆಫ್ ಅರೆಸ್ಟ್ ಬಗ್ಗೆ ಹೆಚ್ಚಿನ ಒತ್ತು ನೀಡಿದೆ. ಗ್ರೌಂಡ್ಸ್ ಆಫ್ ಅರೆಸ್ಟ್ ಸರಿಯಾಗಿಲ್ಲದಿದ್ದರೆ ಜಾಮೀನು ನೀಡಬಹುದು. ಹೀಗಂತಾ ಸುಪ್ರೀಂ ಕೋರ್ಟ್ ಪ್ರಬೀರ್ ಪುರಕಾಯಸ್ತ ಕೇಸಿನ ತೀರ್ಪು ಉಲ್ಲೇಖಿಸಿ, ದರ್ಶನ್ ಆ್ಯಂಡ್ ಗ್ಯಾಂಗ್ಗೆ ಜಾಮೀನು ನೀಡಿದೆ.
ಆದರೂ ದರ್ಶನ್ಗೆ ನೆಮ್ಮದಿ ಇಲ್ಲ. ಮತ್ತೆ ಜೈಲು ಸೇರುವ ಭೀತಿ ಅವರಲ್ಲಿ ಕಾಡುತ್ತಿದೆ. ಜಾಮೀನು ಮಂಜೂರಾಗಿದ್ದರೂ ಟೆನ್ಷನ್ನಲ್ಲೇ ಇರಬೇಕಾದ ಸ್ಥಿತಿ ದಾಸನಿಗೆ ಎದುರಾಗಿದೆ. 6 ವಾರಗಳ ಅವಧಿಗೆ ಅನಾರೋಗ್ಯದ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದಿದ್ರೂ, ಸರ್ಜರಿ ಮಾಡಿಸಿಕೊಳ್ಳದಿರುವುದೇ ಸಂಕಷ್ಟ ತಂದಿಡುವ ಸಾಧ್ಯತೆಯಿದೆ. ಹೀಗಾಗಿ ಮತ್ತೆ ಜೈಲೋ ಸೇರುವ ಭೀತಿ ದರ್ಶನ್ಗೆ ಶುರುವಾಗಿದೆ.
ದರ್ಶನ್ಗೆ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್ ಆದೇಶ ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. ಮೇಲ್ಮನವಿ ಸಲ್ಲಿಸುವ ಬಗ್ಗೆ ಎಸ್ಪಿಪಿ ಪ್ರಸನ್ನಕುಮಾರ್ ತಮ್ಮ ಅಭಿಪ್ರಾಯವನ್ನು ಪೊಲೀಸ್ ಆಯುಕ್ತರು ಹಾಗೂ ಗೃಹ ಇಲಾಖೆಗೆ ಲಿಖಿತ ರೂಪದಲ್ಲಿ ಸಲ್ಲಿಸಲಿದ್ದಾರೆ. ಬಳಿಕ ಗೃಹ ಇಲಾಖೆ ಅನುಮತಿ ಬಳಿಕ ಸರ್ಕಾರ, ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






