ಜೀವನದಲ್ಲಿ ಸುಖ-ಸಮೃದ್ಧಿ, ಶಾಂತಿಗಾಗಿ ನಿತ್ಯ ತುಳಸಿಯನ್ನು ಈ ರೀತಿ ಪೂಜೆಸಿ

ಹಿಂದೂ ಧರ್ಮದಲ್ಲಿ ತುಳಸಿಗೆ ಅತ್ಯಂತ ಪೂಜನೀಯ ಸ್ಥಾನ ಇದೆ. ಬಹುತೇಕ ಪೂಜಾ ಕೈಂಕರ್ಯಗಳಲ್ಲಿ ತುಳಸಿಯ ಬಳಕೆಯಾಗುತ್ತದೆ. ಅದೂ ಅಲ್ಲದೆ, ಪ್ರತಿ ಆಸ್ತಿಕ ಹಿಂದೂ ಧರ್ಮೀಯರ ಮನೆಯಲ್ಲಿ ತುಳಸಿಕಟ್ಟೆ ಇರುತ್ತದೆ. ಪ್ರತಿದಿನ ಪೂಜೆ ಕೂಡಾ ಸಲ್ಲಿಕೆಯಾಗುತ್ತದೆ. ಮುಂಜಾನೆ ಭಕ್ತಿಯಿಂದ ತುಳಸಿಗೆ ನೀರೆರೆದು ಪೂಜಿಸಿದ ಬಳಿಕವೇ ಬಹುತೇಕರ ಕೆಲಸಗಳು ಆರಂಭವಾಗುವುದು. ತುಳಸಿಕಟ್ಟೆಗೆ ಪ್ರದಕ್ಷಿಣೆ ಬಂತು ಭಕ್ತಿಯಿಂದ ನಮಿಸಿದಾಗ ಮನಸ್ಸಿನಲ್ಲೊಂದು ನೆಮ್ಮದಿಯ ಭಾವ ಮೂಡುತ್ತದೆ. ತುಳಸಿಯ ಆರಾಧನೆಯಿಂದ ಭಗವಾನ್ ವಿಷ್ಣು ಮತ್ತು ಸಂಪತ್ತಿನ ಅಧಿದೇವತೆಯಾದ ದೇವಿ ಲಕ್ಷ್ಮಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಶ್ರೀಹರಿ ಮತ್ತು ಮಾತೆ ಲಕ್ಷ್ಮಿ ತುಳಸಿಯಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ ಕೂಡಾ ನಮ್ಮದು.
ನಿತ್ಯವೂ ಮನೆಯ ಹೊರಗಿನಿಂದಲೇ ಧನಾತ್ಮಕ ಶಕ್ತಿಯನ್ನು ಆಕರ್ಷಿಸಿ, ಮನೆ ಮಂದಿಗೆ ನೆಮ್ಮದಿಯನ್ನು ನೀಡುವ ತಾಯಿ ತುಳಸಿ ದೇವಿ. ಶಕ್ತಿಯನ್ನು ಮತ್ತು ಪವಿತ್ರತೆಯನ್ನು ಸಂಕೇತಿಸುವ ತುಳಸಿ ದೇವಿ ಮನೆಗೆ ಸಮೃದ್ಧಿಯನ್ನು ತರುವ ತಾಯಿ. ಈ ತಾಯಿ ಭಗವಾನ್ ವಿಷ್ಣುವನ್ನು ವಿವಾಹವಾದ ದಿನವನ್ನು ತುಳಸಿ ಅಯನ ಎಂದು ಆಚರಿಸಲಾಗುವುದು. ಆ ಸುದಿನದ ಸಂಕೇತವಾಗಿ ಭಕ್ತರು ಪ್ರತಿವರ್ಷ ಅತ್ಯಂತ ಶ್ರದ್ಧಾ ಭಕ್ತಿಯಿಂದ ತುಳಸಿ ವಿವಾಹದ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬಕ್ಕೆ ತುಳಸಿ ಅಯನ, ತುಳಸಿ ಹಬ್ಬ ಅಥವಾ ತುಳಸಿ ವಿವಾಹ, ತುಳಸಿ ಮದುವೆ ಎಂದು ಕರೆಯುವರು.
ಕಾರ್ತಿಕ ಮಾಸದ ಪ್ರಭೋಧಿನಿ ಏಕಾದಶಿಯಂದು ಈ ಆಚರಣೆಯನ್ನು ಮಾಡಲಾಗುವುದು. ಲಕ್ಷ್ಮಿ ದೇವಿಯ ಪ್ರತಿರೂಪಳಾದ ತುಳಸಿ ದೇವಿಗೆ ಅಂದು ವಿಶೇಷ ಅಲಂಕಾರ, ನೈವೇದ್ಯಗಳನ್ನು ಅರ್ಪಿಸುವುದರ ಮೂಲಕ ಸಡಗರದ ವಿವಾಹ ಹಬ್ಬವನ್ನು ಆಚರಿಸುತ್ತಾರೆ.
ಹಿಂದೂ ಪಂಚಾಂಗದ ಪ್ರಕಾರ ತುಳಸಿ ವಿವಾಹವನ್ನು ನವೆಂಬರ್ 9ರಂದು ಆಚರಿಸಲಾಗುವುದು. ವಿವಾಹಿತ ಮಹಿಳೆಯರು ಕುಟುಂಬದ ರಕ್ಷಣೆ, ಪತಿಯ ಆರೋಗ್ಯ ಮತ್ತು ಆಯುಷ್ಯದ ವೃದ್ಧಿಗೆ ತುಳಸಿ ಪೂಜೆಯನ್ನು ಕೈಗೊಳ್ಳುತ್ತಾರೆ. ಅದೇ ಅವಿವಾಹಿತ ಮಹಿಳೆಯರು ಉತ್ತಮ ಜೀವನ ಸಂಗಾತಿಯನ್ನು ಪಡೆದುಕೊಳ್ಳಲು ಆರಾಧಿಸುತ್ತಾರೆ. ಒಟ್ಟಿನಲ್ಲಿ ಮಹಿಳೆಯರಿಗೆ ಹಾಗೂ ಕುಟುಂಬದವರಿಗೆ ತುಳಸಿ ವಿವಾಹವು ಅತ್ಯಂತ ಸಂತೋಷ ಹಾಗೂ ಸಡಗರವನ್ನು ನೀಡುವ ಹಬ್ಬವಾಗಿರುತ್ತದೆ.
ತುಳಸಿ ವಿವಾಹದ ನಂತರವೇ ಮನೆಯಲ್ಲಿ ವಿಶೇಷ ಶುಭ ಕಾರ್ಯಗಳನ್ನು ಹಮ್ಮಿಕೊಳ್ಳವ ಪದ್ಧತಿಯಿದೆ.
ತುಳಸಿಯ ಮಹತ್ವ
ತುಳಸಿ ಎನ್ನುವುದು ಒಂದು ಪುಟ್ಟ ಔಷಧೀಯ ಗುಣವನ್ನು ಹೊಂದಿರುವ ಸಸ್ಯ. ಇದಕ್ಕೆ ಧಾರ್ಮಿಕವಾಗಿಯೂ ಅತ್ಯಂತ ಪವಿತ್ರ ಸ್ಥಾನವನ್ನು ನೀಡಲಾಗಿದೆ. ವಿಷ್ಣುವಿನ ಪತ್ನಿಯಾದ ತುಳಸಿ ಅತ್ಯಂತ ಶ್ರೇಷ್ಠ ಹಾಗೂ ಶಕ್ತಿಯನ್ನು ಹೊಂದಿರುವ ದೇವಿ ಎಂದು ಹೇಳಲಾಗುವುದು. ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯಿಂದ ಕೂಡಿರುವ ತುಳಸಿ ದಳವನ್ನು ಬಳಸದೆ ದೇವತಾ ಪೂಜಾ ಕಾರ್ಯಗಳು ಸಂಪನ್ನವಾಗುವುದಿಲ್ಲ. ವಿಷ್ಣು ದೇವರ ಪತ್ನಿಯಾದ ತುಳಸಿಯು ಲಕ್ಷ್ಮಿ ದೇವಿಯ ಸಂಕೇತ ಎನ್ನುವ ನಂಬಿಕೆಯಿದೆ. ತುಳಸಿ ನೀರಿನ ಪ್ರೋಕ್ಷಣೆ ಅಥವಾ ಸಿಂಪಡಿಸುವುದರ ಮೂಲಕ ಮನೆಯನ್ನು, ವಸ್ತುಗಳನ್ನು ಹಾಗೂ ವ್ಯಕ್ತಿಯನ್ನು ಶುದ್ಧಗೊಳಿಸಲಾಗುವುದು. ಒಂದು ಹನಿ ತುಳಸಿಯ ನೀರು ಅತ್ಯಂತ ಪವಿತ್ರ ಶಕ್ತಿಯನ್ನು ಒಳಗೊಂಡಿರುತ್ತದೆ. ವಿವಿಧ ಅನಾರೋಗ್ಯಗಳನ್ನು ಬಹುಬೇಗ ನಿವಾರಿಸುವ ಶಕ್ತಿಯನ್ನು ತುಳಸಿ ಎಲೆಗಳು ಒಳಗೊಂಡಿವೆ.
ತುಳಸಿ ಪೂಜೆಯ ಮಂತ್ರಗಳು
ಪರಿಕ್ರಮ ಮಾಡುವಾಗ ತುಳಸಿಗೆ ಹೇಳುವ ಮಂತ್ರ
1. "ಯಾನಿಕಾನಿಚಾ ಪಾಪನಿ ಬ್ರಹ್ಮ ಹತ್ಯ ಅದಿಕಾನಿಚಾ
ತಾತ್ಸರ್ವಂ ವಿಲಾಯಂ ಯತಿ ತುಳಸಿ ತ್ವತ್ ಪ್ರದಕ್ಷಿನಾಥ್
2. ತುಳಸಿ ಪ್ರಾಣಂ ಮಂತ್ರ
"ಮಹಾಪ್ರಸಾದ್ ಜನನಿ ಸರ್ವಸೌಭವ್ಯ ವರ್ಧಿನಿ
ಅಧಿವಾಧಿ ಹರೀ ನಿತ್ಯಂ ತುಳಸಿ ತ್ವಾಮ್ ಸಮೋಸ್ತುತೇ.
3. ತುಳಸಿ ದಳವನ್ನು ಕೀಳುವಾಗ ಅಥವಾ ಕೊಯ್ಯುವಾಗ ಹೇಳುವ ಮಂತ್ರ.
" ಕೃಷ್ಣ ವಾಸುದೇವಾಯ ದೇವಕಿ ನಂದನಾಯಚ
ನಂದಗೋಪ್ ಕುಮಾರಾಯ ಗೋವಿಂದಾಯ ನಮೋ ನಮಃ."
ತುಳಸಿ ಪೂಜಾ ವಿಧಾನ
ತುಳಸಿ ವಿವಾಹದ ಆಚರಣೆಯನ್ನು ಮನೆಯಲ್ಲಿರುವ ತುಳಸಿ ಕಟ್ಟೆಗೆ ಅಥವಾ ದೇವಾಲಯಗಳಲ್ಲೂ ಆಚರಿಸಬಹುದು. ಸಾಮಾನ್ಯವಾಗಿ ತುಳಸಿ ಹಬ್ಬದ ಪ್ರಯುಕ್ತ ಉಪವಾಸ ವ್ರತವನ್ನು ಕೈಗೊಳ್ಳಲಾಗುವುದು. ಈ ಉಪವಾಸ ವ್ರತವು ಮುಂಜಾನೆಯಿಂದ ರಾತ್ರಿ ತುಳಸಿಯ ಪೂಜೆ ಸಂಪೂರ್ಣವಾಗುವ ತನಕ ಮುಂದುವರಿಯಬೇಕು.
ತುಳಸಿ ಗಿಡಕ್ಕೆ ಮತ್ತು ವಿಷ್ಣು ದೇವರ ವಿಗ್ರಹಕ್ಕೆ ನೀರನ್ನು ಅರ್ಪಿಸಿ ಸ್ನಾನ ಮಾಡಿಸುವುದು, ಹೂವಿನ ಅಲಂಕಾರ, ವಿಶೇಷ ನೈವೇದ್ಯ ಮತ್ತು ಹಣ್ಣು-ಹಂಪಲುಗಳನ್ನು ಇಟ್ಟು ಪೂಜೆ ಮಾಡಲಾಗುವುದು. ತುಳಸಿ ಗಿಡಕ್ಕೆ ವಧುವಿನ ರೂಪದಂತೆ ಕೆಂಪು ಸೀರೆ, ಆಭರಣ, ಕೆಂಪು ಕುಂಕುಮದೊಂದಿಗೆ ಅಲಂಕರಿಸಲಾಗುತ್ತದೆ. ವಿಷ್ಣು ವಿಗ್ರಹಕ್ಕೆ ಬಿಳಿಯ ಧೋತಿ, ಅಥವಾ ಮಡಿ ಬಟ್ಟೆಯಿಂದ ಅಲಂಕರಿಸುವರು. ನಂತರ ಧಾರಗಳಿಂದ ವಿಗ್ರಹ ಹಾಗೂ ಸಸ್ಯದ ಸುತ್ತಲೂ ಸುತ್ತುವರು. ಬಳಿಕ ವಿಶೇಷ ಮಂತ್ರ, ಪ್ರಾರ್ಥನೆ ಮತ್ತು ಹಾಡು ಹೇಳುವುದರ ಮೂಲಕ ಪೂಜೆಯನ್ನು ಮಾಡಲಾಗುವುದು.
ಮನೆಯ ಸದಸ್ಯರೆಲ್ಲರೂ ತುಳಸಿ ಮತ್ತು ವಿಷ್ಣುವಿಗೆ ಅಕ್ಷತೆ, ಕುಂಕುಮ ಮತ್ತು ಹೂವನ್ನು ಅರ್ಪಿಸಿ ನಮಸ್ಕರಿಸಬೇಕು. ಆಗ ಪೂಜೆಯು ಸಂಪೂರ್ಣವಾಗುವುದು. ನಂತರ ಪ್ರಸಾದವನ್ನು ಹಂಚಲಾಗುವುದು.
ವಾಸ್ತು ಶಾಸ್ತ್ರದಲ್ಲೂ ಸಹ ತುಳಸಿಗೆ ವಿಶೇಷ ಸ್ಥಾನವನ್ನು ನೀಡಲಾಗುತ್ತದೆ. ತುಳಸಿ ಗಿಡವನ್ನು ಮನೆಯ ಮುಂದೆ, ದೇವ ಮೂಲೆಯಲ್ಲಿ ಇಡಬೇಕು. ಅಗ್ನಿ ಮೂಲೆಯ ಭಾಗದಲ್ಲಿ ತುಳಸಿ ಸಸ್ಯವನ್ನು ನೆಡುವುದು ಅಥವಾ ಕೂರಿಸುವ ಕಾರ್ಯ ಮಾಡಬಾರದು. ಮನೆಯ ಆವರಣದಲ್ಲಿ ತುಳಸಿ ಗಿಡವನ್ನು ಸೂಕ್ತ ಸ್ಥಳದಲ್ಲಿ ಇಡಬೇಕು. ಆಗ ಮಾತ್ರ ಮನೆಯಲ್ಲಿ ನೆಮ್ಮದಿ, ಸಂತೋಷ ನೆಲೆಸುವುದು.
ಜೊತೆಗೆ ಮನೆಯ ಯಜಮಾನ ಕೈಗೊಂಡ ಕೆಲಸ ಕಾರ್ಯಗಳು ಅತ್ಯಂತ ಲಾಭದಾಯಕದಿಂದ ಕೂಡಿರುತ್ತವೆ. ಮನೆಯ ದೋಷಗಳನ್ನು ನಿವಾರಿಸಲು ತುಳಸಿ ಗಿಡವನ್ನು ದೇವ ಮೂಲೆಯಲ್ಲಿ ಇಡಬೇಕು. ಹಲವೆಡೆ ಮನಸ್ಸಿಗೆ ಬಂದಂತೆ ನೆಡಬಾರದು. ತುಳಸಿಯ ಗಾಳಿಯು ಮನೆಗೆ ಶುದ್ಧ ಹಾಗೂ ಸಕಾರಾತ್ಮಕ ಶಕ್ತಿ ಆಗಮಿಸುವಂತೆ ಪ್ರೇರೇಪಣೆ ನೀಡುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






