ದರ್ಶನ್ & ಗ್ಯಾಂಗ್ ಜಾಮೀನು ರದ್ದು ಕೋರಿ ಅರ್ಜಿ: ವಿಚಾರಣೆಗೆ ದಿನಾಂಕ ಫಿಕ್ಸ್ ಮಾಡಿದ ಸುಪ್ರೀಂ

ಬೆಂಗಳೂರು: ಕೊಲೆ ಕೇಸ್ ಆರೋಪಿ ನಟ ದರ್ಶನ್ ತೂಗುದೀಪ ಅವರಿಗೆ ಸುಪ್ರೀಂ ಕೋರ್ಟ್ ಕೇಸ್ ಸಂಕಷ್ಟ ಆರಂಭವಾಗಿದೆ. ನಟನ ಮಧ್ಯಂತರ ಜಾಮೀನು ರದ್ದು ಮಾಡುವಂತೆ ಕೋರಿ ಕರ್ನಾಟಕ ಸರ್ಕಾರವು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಡಿಸೆಂಬರ್ ತಿಂಗಳಲ್ಲಿ ರಾಜ್ಯ ಹೈಕೋರ್ಟ್ ರೇಣುಕಾ ಸ್ವಾಮಿ ಕೊಲೆ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಇನ್ನೂ ಕೆಲವರಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು.
ಅದರ ಬೆನ್ನಲ್ಲೆ ಪೊಲೀಸ್ ಇಲಾಖೆಯು ಗೃಹ ಇಲಾಖೆಯ ಅನುಮತಿ ಪಡೆದು ಆರೋಪಿಗಳ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯ ವಿಚಾರಣೆ ಈ ವರೆಗೆ ನಡೆದಿರಲಿಲ್ಲ. ಇದೀಗ ಜಾಮೀನು ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸುವಂತೆ ವಕೀಲ ವಕೀಲ ಅನಿಲ್ ಕುಮಾರ್ ನಿಶಾನಿ ಮನವಿ ಮಾಡಿದ್ದಾರೆ.
ವಕೀಲ ಅನಿಲ್ ಕುಮಾರ್ ನಿಶಾನಿ ಅವರ ಮನವಿಗೆ ಸ್ಪಂದಿಸಿರುವ ಸುಪ್ರೀಂಕೋರ್ಟ್ ಏಪ್ರಿಲ್ 2 ರಂದು ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಏಪ್ರಿಲ್ 2 ರಂದು ನಡೆಯುವ ವಿಚಾರಣೆಯಲ್ಲಿ ಪ್ರಕರಣ ಪೊಲೀಸರ ಪರವಾದರೆ ದರ್ಶನ್, ಪವಿತ್ರಾ ಸೇರಿ ಇನ್ನೂ ಕೆಲ ಆರೋಪಿಗಳು ಮತ್ತೆ ಜೈಲು ಪಾಲಾಗಲಿದ್ದಾರೆ.
ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳ ಜಾಮೀನು ರದ್ದು ಮಾಡುವಂತೆ ಮನವಿ ಸಲ್ಲಿಸಲಾಗಿದೆ. ದರ್ಶನ್ ಪರವಾಗಿ ಸುಪ್ರೀಂಕೋರ್ಟ್ನಲ್ಲಿಯೂ ವಕೀಲ ನಾಗೇಶ್ ಅವರೇ ವಾದ ಮಂಡಿಸುವ ಸಾಧ್ಯತೆ ಇದೆ. ಸರ್ಕಾರದ ಪರವಾಗಿ ಅನಿಲ್ ಕುಮಾರ್ ನಿಶಾನಿ ಅವರು ವಾದಿಸುವ ಸಾಧ್ಯತೆ ದಟ್ಟವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






