ದೆಹಲಿಯಲ್ಲಿ ಭೀಕರ ಕಾಲ್ತುಳಿತ ಪ್ರಕರಣ: ಮಹತ್ವದ ನಿರ್ಧಾರ ತೆಗೆದುಕೊಂಡ ರೈಲ್ವೇ ಆಡಳಿತ!

ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಭೀಕರ ಕಾಲ್ತುಳಿತದಿಂದ ಮಕ್ಕಳು ಮಹಿಳೆಯರು ಸೇರಿ ಒಟ್ಟು 18 ಜನರ ಜೀವ ಕಳೆದುಕೊಂಡಿದ್ದಾರೆ. ಮಹಾಕುಂಭಮೇಳಕ್ಕೆ ಪ್ರಯಾಗರಾಜ್ಗೆ ತೆರಳುವ ವೇಳೆ ರೈಲು ಬಂಂತು ಎಂಬ ಧಾವಂತದಲ್ಲಿ ಓಡಿ ಹೋಗಲು ಹೋಗಿ ಒಬ್ಬರ ಮೇಲೆ ಒಬ್ಬರು ಬಿದ್ದು ಕಾಲ್ತುಳಿತ ಉಂಟಾಗಿ 18 ಜನರ ಅಸುನೀಗಿದ್ದಾರೆ. ಇದೀಗ ರೈಲ್ವೇ ಆಡಳಿತವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೌಂಟರ್ನಿಂದ ಪ್ಲಾಟ್ಫಾರ್ಮ್ ಟಿಕೆಟ್ಗಳ ಮಾರಾಟವನ್ನು ನಿಲ್ಲಿಸಲಾಗಿದ್ದು, ಭದ್ರತೆಯನ್ನು ಹೆಚ್ಚಿಸಿದೆ.
ಎರಡು ದಿನಗಳ ಹಿಂದೆ ದೆಹಲಿ ರೈಲು ನಿಲ್ದಾಣದಲ್ಲಿ ಜನಸಂದಣಿಯಿಂದಾಗಿ ಉಂಟಾದ ಕಾಲ್ತುಳಿತದಲ್ಲಿ 18 ಜನರು ಸಾವನ್ನಪ್ಪಿದ್ದರು. ಘಟನೆಯ ನಂತರ ರೈಲು ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ನಿಲ್ದಾಣದ ಆವರಣದಲ್ಲಿ ಭದ್ರತಾ ಪಡೆಗಳ ಒಂದು ಕಂಪನಿಯನ್ನು ನಿಯೋಜಿಸಲಾಗಿದೆ. ಮೆಟ್ರೋ ಭದ್ರತೆಯಲ್ಲಿ ತೊಡಗಿರುವ ಸಿಐಎಸ್ಎಫ್ ಕಂಪನಿಯನ್ನು ರೈಲ್ವೇ ಭದ್ರತೆಗಾಗಿ ನಿಯೋಜಿಸಲಾಗಿದೆ.
ಈ ಬಗ್ಗೆ ಜಂಟಿ ಪೊಲೀಸ್ ಆಯುಕ್ತ ವಿಜಯ್ ಸಿಂಗ್ ಮಾತನಾಡಿ, ದೆಹಲಿ ರೈಲು ನಿಲ್ದಾಣದ ಭದ್ರತೆಗಾಗಿ ಎಂಟು ಕಂಪನಿಗಳ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ. ಜೊತೆಗೆ 80 ಸಿಬ್ಬಂದಿಯನ್ನು ಒಳಗೊಂಡ ಮೆಟ್ರೋ ಪೊಲೀಸ್ ಕಂಪನಿಯನ್ನು ನಿಯೋಜಿಸಲಾಗಿದೆ.
ಇದಲ್ಲದೆ, ಮೆಟ್ರೋದಿಂದ ಮೂವರು ಇನ್ಸ್ಪೆಕ್ಟರ್ಗಳು ಮತ್ತು ಒಬ್ಬ ಎಸಿಪಿಯನ್ನು ನಿಯೋಜಿಸಲಾಗಿದೆ. ರೈಲ್ವೇ ಪೊಲೀಸ್ ಮತ್ತು ಜಿಆರ್ಪಿಯ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಂಟರಿಂದ ಹತ್ತು ರೈಲ್ವೇ ಪೊಲೀಸ್ ಠಾಣೆಗಳ ಮುಖ್ಯಸ್ಥರನ್ನು ನಿಯೋಜಿಸಲಾಗಿದೆ. ದೆಹಲಿ ಪೊಲೀಸ್ ಠಾಣೆ ಮುಖ್ಯಸ್ಥರನ್ನು ಸಹ ಹತ್ತಿರದಲ್ಲೇ ನಿಯೋಜಿಸಲಾಗಿದೆ ಎಂದರು.
ಇದಲ್ಲದೆ ಪ್ರತಿ ಪ್ಲಾಟ್ಫಾರ್ಮ್, ಪಾದಚಾರಿ ಸೇತುವೆ ಮತ್ತು ಹೊರಗೆ ಒಂದು ಕಂಪನಿಯನ್ನು ನಿಯೋಜಿಸಲಾಗಿದೆ. ಒಂದು ಕಂಪನಿಯಲ್ಲಿ 80 ರಿಂದ 85 ಭದ್ರತಾ ಸಿಬ್ಬಂದಿಗಳಿದ್ದಾರೆ. ಅಲ್ಲದೆ, ರೈಲ್ವೇ ನಿಲ್ದಾಣದ ಹೊರಗೆ ಮತ್ತು ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.
ರೈಲು ನಿಲ್ದಾಣದ ಬಳಿ ವಾಹನಗಳನ್ನು ಅನುಮತಿಸಲಾಗುವುದಿಲ್ಲ. ಕುಂಭಮೇಳಕ್ಕೆ ಹೋಗುವ ರೈಲುಗಳು 12, 13 ಮತ್ತು 14ನೇ ಪ್ಲಾಟ್ಫಾರ್ಮ್ಗಳಿಂದ ಹೊರಡುತ್ತಿವೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಪ್ರಯಾಗ್ರಾಜ್ಗೆ ಹೋಗುವ ರೈಲುಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ ಎಂದು ತಿಳಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






