ದೇಶದ ಹೆಮ್ಮೆಯ ಉದ್ಯಮಿ ರತನ್ ಟಾಟಾ ವಿಧಿವಶ: ಅವರು ಬೆಳೆದು ಬಂದ ಹಾದಿ ಬಗ್ಗೆ ನಿಮಗೆಷ್ಟು ಗೊತ್ತು..?

ಉದ್ಯಮಿ ರತನ್ ಟಾಟಾ ಇನ್ನು ನೆನಪು ಮಾತ್ರ. ಮುಂಬೈನಲ್ಲಿ ಬುಧವಾರ ರಾತ್ರಿ ನಿಧನರಾದರು. ಟಾಟಾ ಅವರಿಗೆ ಭಾರತ ಸರ್ಕಾರವು 2008 ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿತ್ತು. ಕೈಗಾರಿಕೋದ್ಯಮಿ ರತನ್ ಟಾಟಾ ವಿಧಿವಶರಾದ ಸುದ್ದಿ ಕೇಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಟಾಟಾ ಗ್ರೂಪ್ ಅಧ್ಯಕ್ಷರಾಗಿ ಸುಮಾರು ಎರಡೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ ರತನ್, 2012ರಲ್ಲಿ ತಮ್ಮ 75ನೇ ಜನ್ಮದಿನದಂದೇ ನಿವೃತ್ತಿ ಪಡೆದರು. ''ಅಧಿಕಾರದಿಂದ ಕೆಳಗಿಳಿಯಿರಿ,'' ಎಂದು ಯಾರೂ ಅವರನ್ನು ಒತ್ತಾಯಿಸಿರಲಿಲ್ಲ. ರಾಜಕಾರಣಿಗಳಂತೆ, ಅವರೂ ಉಸಿರಿರುವ ತನಕ ಪಟ್ಟಕ್ಕೆ ಅಂಟಿಕೊಳ್ಳಬಹುದಿತ್ತು. ಆದರೆ, ಅಧಿಕಾರದ ಕುರ್ಚಿಯನ್ನು ಹೊಸಬರಿಗೆ ತೆರೆದಿಟ್ಟರು. ರತನ್ ಸ್ಥಾನವನ್ನು ಸೈರಸ್ ಮಿಸ್ತ್ರಿ ಸ್ವೀಕರಿಸಿದರು. ಬಳಿಕ ಸಂಸ್ಥೆಯಲ್ಲಿನ ಆಂತರಿಕ ಸಂಘರ್ಷಗಳಿಂದಾಗಿ ಮಿಸ್ತ್ರಿ ಹೊರಹೋಗಬೇಕಾಯಿತು. ಬಿಕ್ಕಟ್ಟಿನ ಸಂದರ್ಭದಲ್ಲಿ ಮತ್ತೆ ಸೂತ್ರ ಹಿಡಿದ ರತನ್ ಅವರು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್.ಚಂದ್ರಶೇಖರನ್ ಅವರನ್ನು ಕರೆ ತಂದರು.
ನಿವೃತ್ತಿ ಅನ್ನುವುದು ಒಬ್ಬ ವ್ಯಕ್ತಿಯ ಪಾಲಿಗೆ ವಿಶ್ರಾಂತಿಯ ಸಂದರ್ಭ. ಆದರೆ, ರತನ್ ಟಾಟಾರಂಥವರಿಗೆ ನಿವೃತ್ತಿ ಅನ್ನುವುದು ಹಾಲಿ ಕೆಲಸವನ್ನು ಬದಲಿಸಿ, ಇನ್ನೊಂದು ಕೆಲಸ ಆರಂಭಿಸುವ ಅವಕಾಶ. ಸಮಾಜಮುಖಿ ಕೆಲಸಗಳಲ್ಲಿ ಮೊದಲಿಂದಲೂ ಸಕ್ರಿಯರಾಗಿದ್ದ ಅವರು, ಈಗ ಪೂರ್ಣಾವಧಿ ತೊಡಗಿಸಿಕೊಂಡಿದ್ದಾರೆ. ಟಾಟಾ ಟ್ರಸ್ಟ್ನ ನೇತೃತ್ವ ವಹಿಸಿಕೊಂಡಿರುವ ರತನ್ ಟಾಟಾ, ಈ ತುಂಬು ಜೀವನದಲ್ಲಿ ಕಂಡ ಕನಸುಗಳು ನೂರಾರು. ಅವುಗಳನ್ನು ನನಸು ಮಾಡಲು ಮಾಡಿದ ಕೆಲಸಗಳು ಒಂದೆರಡಲ್ಲ. ಉದಾರತೆ, ಕರುಣೆ, ಸಮಾಜ ಸೇವೆಗಳು ಟಾಟಾ ಕುಟುಂಬದೊಂದಿಗೆ ಬೆಸೆದುಕೊಂಡಿವೆ. ಜೆಮ್ಶೆಟ್ಜಿ ಟಾಟಾ ತೋರಿದ ಜನಕಲ್ಯಾಣದ ಹಾದಿಯಲ್ಲಿ ರತನ್ ಹೆಜ್ಜೆ ಹಾಕುತ್ತಿದ್ದಾರೆ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೇ ನೀಡಬೇಕು ಎನ್ನುವುದನ್ನು ತಮ್ಮ ಕ್ರಿಯೆಯ ಮೂಲಕವೇ ಸಾಬೀತು ಮಾಡಿದ್ದಾರೆ.
ಟಾಟಾ ಗ್ರೂಪ್ ಸಂಸ್ಥಾಪಕ ಜೆಮ್ಶೆಟ್ಜಿ ಅವರ ಮೊಮ್ಮಗನಾದ ರತನ್, 1937ರ ಡಿ.28ರಂದು ಸೂರತ್ನಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ತಂದೆ-ತಾಯಿ ಬೇರೆಯಾದರು. ಅಜ್ಜಿಯ ಬಳಿಯೇ ಅವರು ಬೆಳೆಯಬೇಕಾಯಿತು. ''ನನ್ನ ಬಾಲ್ಯ ತುಂಬಾ ಚೆನ್ನಾಗಿತ್ತು. ಆದರೆ, ನಾನು ಮತ್ತು ನನ್ನ ಸಹೋದರ ಬೆಳೆದು ದೊಡ್ಡವರಾಗುತ್ತಿದ್ದಂತೆಯೇ ಕೆಲವೊಂದು ಕಷ್ಟದ ಸನ್ನಿವೇಶಗಳನ್ನು ಎದುರಿಸಬೇಕಾಯಿತು. ಏಕೆಂದರೆ, ಆಗ ನಮ್ಮ ಹೆತ್ತವರು ವಿಚ್ಛೇದನ ಪಡೆದಿದ್ದರು. ಆಗಿನ ದಿನಗಳು ಇಂದಿನಂತೆ ಸಾಮಾನ್ಯವಾಗಿರಲಿಲ್ಲ. ಆದರೆ, ನಮ್ಮನ್ನು ನಮ್ಮ ಅಜ್ಜಿ ಎಲ್ಲಾ ರೀತಿಯಲ್ಲೂ ಪ್ರೀತಿಯಿಂದ ಸಲಹಿದರು.
ನನ್ನ ತಾಯಿ ಮರು ಮದುವೆಯಾದ ಬಳಿಕವಂತೂ ಶಾಲೆಯ ಇತರ ಹುಡುಗರು ತುಂಬಾ ಹಗರವಾದ ಮಾತನಾಡಲು ಆರಂಭಿಸಿದ್ದರು. ಆದರೆ, ಇಂತಹ ಸಂದರ್ಭದಲ್ಲಿ ಘನತೆ, ಗೌರವವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ನಮ್ಮ ಅಜ್ಜಿ ನಮಗೆ ಕಲಿಸಿದರು. ಅಜ್ಜಿ ಕಲಿಸಿಕೊಟ್ಟಿದ್ದ ಪಾಠ ಮತ್ತು ಮೌಲ್ಯವನ್ನು ಇಂದಿಗೂ ನಾನು ಪಾಲಿಸುತ್ತಿದ್ದೇನೆ,'' ಎಂದು ಸಾಮಾಜಿಕ ಜಾಲತಾಣದಲ್ಲಿ ಒಮ್ಮೆ ರತನ್ ಹೇಳಿಕೊಂಡಿದ್ದಾರೆ. ಮುಂಬಯಿನಲ್ಲಿ ಆರಂಭಿಕ ವಿದ್ಯಾಭ್ಯಾಸವಾಯಿತು. 1962ರಲ್ಲಿ ಕಾರ್ನೆಲ್ ವಿವಿಯಲ್ಲಿ ಆರ್ಕಿಟೆಕ್ಚರ್ನಲ್ಲಿ ಪದವಿ ಪಡೆದರು. ವಿದ್ಯಾಭ್ಯಾಸ ಪೂರ್ಣಗೊಳಿಸಿದ ಮೇಲೆ, ಟಾಟಾ ಗ್ರೂಪ್ ಪ್ರವೇಶಿಸಿದರು.
ಅಂದ ಹಾಗೇ, ಉದ್ಯಮಿಗಳಲ್ಲಿ ಮೇಲೆ ಮೇಲೆ ಏರುವ ತವಕ ಸಹಜ. ಆದರೆ, ಆಕಾಶಕ್ಕೇರುವ ನೈಪುಣ್ಯತೆಯನ್ನು ರತನ್ ಹೊಂದಿದ್ದಾರೆ. ಅವರ ಬಳಿ ಲೈಸೆನ್ಸ್ ಸಹ ಇದೆ. ಇಷ್ಟಕ್ಕೂ 2007ರಲ್ಲೇ ಅವರು ಬೆಂಗಳೂರಿನ ಏರ್ ಇಂಡಿಯಾ ಶೋನಲ್ಲಿ 'ಎಫ್-16' ನಡೆಸಿದ್ದರು. ಅಲ್ಲದೇ ಸಹ-ಪೈಲಟ್ ಆಗಿ ಯುದ್ಧ ವಿಮಾನವನ್ನು 40 ನಿಮಿಷ ಹಾರಿಸಿದ್ದೂ ಉಂಟು. 69ನೇ ವಯಸ್ಸಿನಲ್ಲೂ ವಿಮಾನವನ್ನು ಓಡಿಸಿದವರು.
ಭಾರತದ ಅಗ್ರ ಕುಬೇರರ ಪಟ್ಟಿಯಲ್ಲಿ ರತನ್ ಇಲ್ಲ. ಅವರ ಒಟ್ಟು ಸಂಪತ್ತು 100 ಕೋಟಿ ಡಾಲರ್(ಸುಮಾರು 7,400 ಕೋಟಿ ರೂ.). ಆದರೆ, ಉದಾರತೆಯಲ್ಲಿ ಇವರಿಗೆ ಇವರೇ ಸಾಟಿ. ತಮ್ಮ ಶೇ.60ರಷ್ಟು ಷೇರುಗಳನ್ನು ಚಾರಿಟಬಲ್ ಟ್ರಸ್ಟ್ಗೆ ಹಾಕಿದ ಏಕೈಕ ಭಾರತೀಯ ಉದ್ಯಮಿ ಎನ್ನುವ ಹೆಗ್ಗಳಿಕೆ ರತನ್ ಅವರದು. ''ಈ ದೇಶವು ಎಲ್ಲರಿಗೂ ಸಮಾನ ಅವಕಾಶಗಳ ನೆಲೆಯಾಗಬೇಕು ಎನ್ನುವುದು ನನ್ನ ಕನಸು. ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಅಳಿಸಿಹೋಗಬೇಕು,'' ಎನ್ನುವ ರತನ್ ಟಾಟಾ ಮಾತುಗಳೇ, ಅವರ ವ್ಯಕ್ತಿತ್ವವನ್ನೂ ಬಿಚ್ಚಿಟ್ಟಿವೆ.
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






