ನಕ್ಸಲ್ ಕ್ಯಾಪ್ಟನ್ ವಿಕ್ರಂಗೌಡ ಯಾರು!? ಇವನ ಹಿನ್ನೆಲೆ ಏನು!?ನಕ್ಸಲ್ ಕರಾಳ ಇತಿಹಾಸ ಇಲ್ಲಿದೆ!

ಉಡುಪಿ:- ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಪೀತಬೈಲುವಿನಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದ್ದು, ಈ ವೇಳೆ ಮೋಸ್ಟ್ ವಾಂಟೆಡ್ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿಯಾಗಿದ್ದಾನೆಂದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೆಬ್ರಿಯ ಕಬ್ಬಿನಾಲೆ ಸಮೀಪದ ಕಾಡಂಚಿನ ನಿವಾಸಿಯಾಗಿದ್ದ ವಿಕ್ರಂ ಗೌಡ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಡೆಸುತ್ತಿದ್ದು, ಮೂರು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ. ನಕ್ಸಲ್ ಚಟುವಟಿಕೆಗಳ ಸಂಬಂಧ ವಿಕ್ರಂ ಗೌಡನ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದವು. ಸುಮಾರು 15 ವರ್ಷಗಳಿಂದ ಪೊಲೀಸರ ಕಣ್ಣುತಪ್ಪಿಸಿ ಓಡಾಡುತ್ತಿದ್ದ.
ವಿಕ್ರಂ ಗೌಡ ನಕ್ಸಲರ ನೇತ್ರಾವತಿ ದಳದ ನಾಯಕನಾಗಿದ್ದ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಆತ ಬಳಿಕ ನಕ್ಸಲ್ ಚಳವಳಿಗೆ ಧುಮುಕಿ ಸಕ್ರಿಯನಾಗಿದ್ದ. ನಕ್ಸಲ್ ಹೋರಾಟದ ವೇಳೆ ಕರಾವಳಿ ಭಾಗದಲ್ಲಿ ನೇತ್ರಾವತಿ ದಳವನ್ನು ಮುನ್ನೆಡೆಸಿದ್ದ. ಮತ್ತೊಂದೆಡೆ ಮಲೆನಾಡು ಭಾಗದಲ್ಲಿ ಮುಂಡಗಾರು ಲತಾ ತಂಡ ಸಕ್ರಿಯವಾಗಿತ್ತು.
ಕೇರಳದಲ್ಲಿ ಕೂಡ ಇತ್ತೀಚೆಗೆ ನಕ್ಸಲ್ ಚಟುವಟಿಕೆ ಹೆಚ್ಚಾಗಿತ್ತು. ಅದರ ಬೆನ್ನಲ್ಲೇ ಅಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯೂ ಚುರುಕಾಗಿತ್ತು. ನಂತರ ಅಲ್ಲಿಂದ ಕಾಲ್ಕಿತ್ತಿದ್ದ ನಕ್ಸಲರು, 2 ತಿಂಗಳುಗಳ ಹಿಂದೆ ಕರ್ನಾಟಕಕ್ಕೆ ಆಗಮಿಸಿದ್ದರು ಎನ್ನಲಾಗಿದೆ.
ಇನ್ನೂ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಯ ಹಿನ್ನೆಲೆ ಹಾಗೂ ಇತಿಹಾಸ, ಸರ್ಕಾರ ಜಾರಿಗೆ ತಂದಿದ್ದ ನಕ್ಸಲ್ ಶರಣಾಗತಿ ಯೋಜನೆ ಸೇರಿದಂತೆ ಮುಖ್ಯ ಘಟನಾವಳಿಗಳ ಸಮಗ್ರ ವಿವರ ಇಲ್ಲಿದೆ.
ನಕ್ಸಲರು ಶರಣಾಗಲು ಹಲವು ಬಾರಿ ರಾಜ್ಯ ಸರ್ಕಾರ ಅವಕಾಶ ನೀಡಿತ್ತು. ಶರಣಾಗುವ ನಕ್ಸಲರಿಗೆ ಪುನರ್ವಸತಿ ಪ್ಯಾಕೇಜ್ ಘೋಷಿಸಿತ್ತು. ಆ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ನಕ್ಸಲರಿಗೂ ಸರ್ಕಾರ ಅವಕಾಶ ನೀಡಿತ್ತು. ಅದಕ್ಕಾಗಿ ಗೌರಿ ಲಂಕೇಶ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಕರ್ನಾಟಕ ಸರ್ಕಾರದ ಪ್ಯಾಕೇಜ್ಗೆ ಒಪ್ಪಿ 7 ಮಂದಿ ನಕ್ಸಲರು ಶರಣಾಗಿದ್ದರು. 2013-14 ರಲ್ಲಿ ಕಾಂಗ್ರೆಸ್ ಸರ್ಕಾರ ಪ್ಯಾಕೇಜ್ ಘೋಷಿಸಿತ್ತು. ಅದೇ ವರ್ಷ ನಕ್ಸಲರಾದ ನೂರ್ ಶ್ರೀಧರ್, ಸಿರಿಮನೆ ನಾಗರಾಜು ಶರಣಾಗಿದ್ದರು. 2014-15ರಲ್ಲಿ ನೀಲಗುಳಿ ಪದ್ಮನಾಭ, ರೇಣುಕಾ ದಂಪತಿ ಶರಣಾಗಿದ್ದರು. 2017ರಲ್ಲಿ ಚೆನ್ನಮ್ಮ, ಕನ್ಯಾಕುಮಾರಿ, ಶಿವು ಶರಣಾಗಿದ್ದರು. ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದರು
ನಕ್ಸಲರ ಶರಣಾಗತಿ ವಿರೋಧಿಸಿದ್ದ ವಿಕ್ರಂ ಗೌಡ, ಮುಂಡಗಾರು ಲತಾ ಕೇರಳ, ತಮಿಳುನಾಡು ಅರಣ್ಯ ಪ್ರದೇಶದತ್ತ ತೆರಳಿದ್ದರು. ಸರ್ಕಾರ ಸಾಲು ಸಾಲು ಅವಕಾಶ ನೀಡಿದ್ದರೂ ಬಂದೂಕು ತ್ಯಜಿಸಿರಲಿಲ್ಲ. ಶರಣಾಗತಿ ಎಂಬುದು ನಕ್ಸಲ್ ಸಿದ್ಧಾಂತಕ್ಕೆ ವಿರುದ್ಧವಾದದ್ದು ಎಂದು ವಿಕ್ರಂ ಗೌಡ ನಂಬಿದ್ದ.
ಕರ್ನಾಟಕದಲ್ಲಿ ನಕ್ಸಲ್ ಕರಾಳ ಇತಿಹಾಸ
2006 ಆಗಸ್ಟ್ 23: ಶೃಂಗೇರಿಯ ಕೆರೆಕಟ್ಟೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಕಚೇರಿ ಮೇಲೆ ನಕ್ಸಲ್ ದಾಳಿ. ಕೆಲದಿನದ ಬಳಿಕ ಕಾರ್ಕಳ ಮುನಿಯಾಲು ಮುಟ್ಲುಪಾಡಿಯಲ್ಲಿ ಸದಾನಂದ ಶೆಟ್ಟಿ ಅವರ ಬೈಕ್ಗೆ ಬೆಂಕಿ ಹಚ್ಚಿ ನಕ್ಸಲರಿಂದ ಬೆದರಿಕೆ.
2006 ಡಿಸೆಂಬರ್ 25: ಶೃಂಗೇರಿ ಬಳಿಯ ಕಿಗ್ಗದಲ್ಲಿ ನಕ್ಸಲ್ ದಿನಕರ ಎನ್ಕೌಂಟರ್ಗೆ ಬಲಿ.
2007 ಮಾರ್ಚ್ 13: ಶಂಕಿತ ನಕ್ಸಲ ಯುವತಿ ಚೆನ್ನಮ್ಮ ಅಮಾಸೆಬೈಲಿನಲ್ಲಿ ಸೆರೆ.
2007 ಜೂನ್ 3: ಶೃಂಗೇರಿ ಕಿಗ್ಗ ಸಮೀಪ ಗುಂಡಘಟ್ಟದಲ್ಲಿ ನಕ್ಸಲರಿಂದ ಅಂಗಡಿ ಮಾಲೀಕ ವೆಂಕಟೇಶ ಹತ್ಯೆ. ಜೂನ್ 7: ಆಗುಂಬೆ ತಲ್ಲೂರಂಗಡಿ ಬಳಿ ಕೆಎಸ್ಆರ್ಟಿಸಿ ಬಸ್ಗೆ ಬೆಂಕಿ.
2007 ಜುಲೈ 10: ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಪಂ ವ್ಯಾಪ್ತಿಯ ಒಡೆಯರಮಠದಲ್ಲಿ ಪೊಲೀಸ್ ಎನ್ಕೌಂಟರ್ ಗೆ ನಕ್ಸಲ್ ಯುವಕ ಸಿಂಧನೂರಿನ ಗೌತಮ್, ರಾ.ಉದ್ಯಾನ ವಿರೋಧಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪರಮೇಶ್ವರ, ಕಾರ್ಮಿಕ ಸುಂದರೇಶ್, ಮನೆಯ ಯಜಮಾನರಾದ ರಾಮೇಗೌಡ್ಲು, ಕಾವೇರಿ ಬಲಿ.
2007 ಜುಲೈ 17: ಆಗುಂಬೆ ಸಮೀಪದ ಹುಲ್ಲಾರಬೈಲಿನಲ್ಲಿ ಗುಂಡಿನ ಚಕಮಕಿ, ಎಸ್ಐ ವೆಂಕಟೇಶ ಹತ್ಯೆ.
2008 ಮೇ 15: ಹೆಬ್ರಿ ಸಮೀಪದ ಸೀತಾನದಿ ಬಳಿ ನಕ್ಸಲರ ಗುಂಡಿಗೆ ಶಿಕ್ಷಕ ಭೋಜ ಶೆಟ್ಟಿ ಹಾಗೂ ಅವರ ಗೆಳೆಯ ಕೃಷಿಕ ಸುರೇಶ್ ಶೆಟ್ಟಿ ಬಲಿ.
2008 ಜುಲೈ 7: ಬೆಳ್ತಂಗಡಿ ತಾಲೂಕಿನ ಕುತ್ಲೂರು ಹಾಗೂ ಕಾರ್ಕಳದ ತಿಂಗಳಮಕ್ಕಿಯಲ್ಲಿ ನಕ್ಸಲರ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ.
2008 ನವೆಂಬರ್ 13: ಶಿವಮೊಗ್ಗದಲ್ಲಿ ಶಂಕಿತ ನಕ್ಸಲ್ ಜನಾರ್ದನ ಬಂಧನ, ನಕ್ಸಲರು ಬಚ್ಚಿಟ್ಟ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸ್ಪೋಟಕ ವಶ.
2008 ನವೆಂಬರ್ 20: ಹೊರನಾಡು ಸಮೀಪ ಮಾವಿನಹೊಲ ಬಳಿ ಎನ್ಕೌಂಟರ್. ನಕ್ಸಲರಾದ ಸೊರಬದ ಮನೋಹರ್, ಸಹಚರರಾದ ನವೀನ್, ಅಭಿಲಾಷ್ ಹತ್ಯೆ, ಪೇದೆ ಗುರುಪ್ರಸಾದ್ ಸಾವು.
2008 ಡಿಸೆಂಬರ್ 7: ಹಳ್ಳಿಹೊಳೆ ಸಮೀಪದ ಕೃಷಿಕ ಜಮೀನ್ದಾರ ಕೇಶವ ಯಡಿಯಾಳರನ್ನು ಪೊಲೀಸರ ಮಾಹಿತಿದಾರನೆಂಬ ಆರೋಪದಲ್ಲಿ ಮನೆಗೆ ನುಗ್ಗಿ ನಕ್ಸಲರು ಹತ್ಯೆಗೈದರು.
2009 ಆಗಸ್ಟ್ 22: ಕಿಗ್ಗ ಎನ್ಕೌಂಟರ್, ಎರಡು ದಿನಗಳ ಬಳಿಕ ಶೃಂಗೇರಿಯ ನೆಮ್ಮಾರಿನ ದಿಂಡೋಡಿಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪೊಲೀಸರ ವಶ.
2010 ಮಾರ್ಚ್ 1: ಕಾರ್ಕಳ ತಾಲೂಕಿನ ಮುನಿಯಾಲು ಮುಟ್ಲುಪಾಡಿಯ ಮೈರೋಳಿ ಎಂಬಲ್ಲಿ ಪೊಲೀಸರ ಎನ್ಕೌಂಟರ್ ಗೆ ಬೆಳ್ತಂಗಡಿ ತಾಲೂಕು ಕುತ್ಲೂರಿನ ವಸಂತ ಗೌಡ್ಲು ಯಾನೆ ಆನಂದ ಹತ್ಯೆ.
2011 ಅಗಸ್ಟ್ 9: ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಪಂ ವ್ಯಾಪ್ತಿಯ ನಾವೂರ ಗ್ರಾಮದ ಮಂಜಲದಲ್ಲಿ ಬೆಳಗಿನ ಜಾವ ನಕ್ಸಲ್ ನಿಗ್ರಹದಳದ ಪೊಲೀಸರ ಗನ್ ಮಿಸ್ ಫೈರ್ ಆಗಿ ಎಎನ್ಎಫ್ ಸಿಬ್ಬಂದಿ ಮಹಾದೇವ ಮಾನೆ ಬಲಿ.
2011 ಡಿಸೆಂಬರ್ 19: ಹೆಬ್ರಿ ಕಬ್ಬಿನಾಲೆ ಸಮೀಪದ ತಿಂಗಳ ಮಕ್ಕಿಯ ಸದಾಶಿವ ಗೌಡ (49) ತೆಂಗಿನಮಾರು ಮನೆಯಿಂದ ನಾಪತ್ತೆ, 22ರಂದು ವಿಷಯ ಬಹಿರಂಗ. ಶಂಕಿತ ನಕ್ಸಲ್ ವಿಶ್ವನಿಂದ ಪತ್ರಕರ್ತರಿಗೆ ಮಾಹಿತಿ.
2011 ಡಿಸೆಂಬರ್ 28: ತೆಂಗಿನಮಾರುವಿನಿಂದ ಎರಡು ಕಿ.ಮೀ. ದೂರ ದಟ್ಟಾರಣ್ಯದಲ್ಲಿ ಸದಾಶಿವ ಗೌಡ ಎಂಬವರ ಶವ ಕೈಕಾಲು ಕಟ್ಟಿ ಸ್ಥಿತಿಯಲ್ಲಿ ಗೋಳಿಮರದಡಿ ಪತ್ತೆ. ನಕ್ಸಲರ ಬರಹವೂ ಸಮೀಪದಲ್ಲಿ ದೊರಕಿತ್ತು.
2024 ನವೆಂಬರ್ 18: ಕಾರ್ಕಳ ತಾಲೂಕಿನ ಹೆಬ್ರಿಯ ಪೀತಬೈಲುವಿನಲ್ಲಿ ಎಎನ್ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಪ್ರಕರಣ ಸಂಬಂಧ ನಕ್ಸಲ್ ಮುಖಂಡಾರ ಮುಂಡಗಾರು ಲತಾ, ಜಯಣ್ಣ ಸೇರಿ ಮೂವರ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. UAPA 1967 ಕಾಯ್ದೆ ಸೇರಿದಂತೆ, 329(4), 351(2), 61(2), 147, BNS 3&25, ಶಸ್ತ್ರಾಸ್ತ್ರ ಕಾಯ್ದೆ 110(B) 13, 16, 18, 20, 38ರ ಅಡಿ ಪ್ರಕರಣ ದಾಖಲಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






