ನಾಲ್ವರ ಜೀವ ಉಳಿಸಿದ ಸಾಕು ನಾಯಿ: ಕೊಪ್ಪಳದಲ್ಲಿ ಮನಮಿಡಿಯುವ ಸ್ಟೋರಿ!

ಜನವರಿ 9, 2025 - 12:02
 0  11
ನಾಲ್ವರ ಜೀವ ಉಳಿಸಿದ ಸಾಕು ನಾಯಿ: ಕೊಪ್ಪಳದಲ್ಲಿ ಮನಮಿಡಿಯುವ ಸ್ಟೋರಿ!

ಕೊಪ್ಪಳ:- ಬೆಂಕಿ ಅವಘಡದಲ್ಲಿ ಜೀವಂತ ದಹನವಾಗುತ್ತಿದ್ದ ನಾಲ್ವರು ಜೀವಗಳನ್ನು ಸಾಕುನಾಯಿ ಕಾಪಾಡಿರುವ ಮನಮಿಡಿಯುವ ಸ್ಟೋರಿ ಕೊಪ್ಪಳದಲ್ಲಿ ಜರುಗಿದೆ. 

ಹೌದು ನಗರದ ಮಹಾವೀರ ಸರ್ಕಲ್ ಬಳಿ ಮಂಗಳವಾರ ರಾತ್ರಿ ಎರಡು ಗಂಟೆ ಸಮಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹೋಟೆಲ್​​​ನಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಹೊತ್ತಿಕೊಂಡಿದ್ದ ಬೆಂಕಿ, ಸುತ್ತಮುತ್ತಲಿನ ಅಂಗಡಿ, ಮನೆಗಳಿಗೆ ವ್ಯಾಪಿಸಿಕೊಂಡಿತ್ತು. ಇದೇ ಸಮಯದಲ್ಲಿ ಹೋಟೆಲ್​ನಲ್ಲಿದ್ದ ಸಿಲಿಂಡರ್ ಕೂಡಾ ಸ್ಫೋಟಗೊಂಡಿತ್ತು. ಆದರೂ ಹೋಟೆಲ್ ಪಕ್ಕದಲ್ಲಿದ್ದ ಮನೆಯಲ್ಲಿ ಗಂಡ ಹೆಂಡತಿ ಮತ್ತು ಇಬ್ಬರ ಮಕ್ಕಳು ಮಲಗಿದ್ದರು. ಚಳಿಯಿದ್ದಿದ್ದರಿಂದ ಬೆಚ್ಚಗೆ ಹೊದ್ದುಕೊಂಡು ಮಲಗಿದ್ದ ನಾಲ್ವರಿಗೆ, ಹೊರಗೆ ಏನಾಗುತ್ತಿದೆ ಎಂಬುದೇ ಗೊತ್ತಿರಲಿಲ್ಲ. 

ಆದರೆ ಅವರ ಮನೆಯಲ್ಲಿದ್ದ ಡೇಜಿ ಎಂಬ ಸಾಕು ನಾಯಿ ಹೊರಗಡೆ ಬಂದು, ಜೋರಾಗಿ ಬೊಗಳಲು ಆರಂಭಿಸಿತ್ತು. ನಾಯಿ ಬೊಗಳುವುದನ್ನು ಕೇಳಿದ ಮನೆ ಯಜಮಾನಿ ಅಲಿವೇಲಿ, ಯಾರಾದರೂ ಕಳ್ಳರು ಬಂದಿದ್ದಾರಾ ಎಂದು ಹೊರಗಡೆ ಬಂದು ನೋಡಿದರೆ, ಸುತ್ತಮುತ್ತ ಬೆಂಕಿ ಆವರಿಸಿಕೊಂಡಿತ್ತು. ಕೂಡಲೇ ಮನೆಯಲ್ಲಿದ್ದವರನ್ನು ಎಬ್ಬಿಸಿದ ಅವರು ಮನೆಯಿಂದ ಹೊರಗಡೆ ಕರೆದುಕೊಂಡು ಬಂದಿದ್ದಾರೆ.

ಅಷ್ಟೇ ಅಲ್ಲದೆ, ಮನೆಯಲ್ಲಿದ್ದ ಸಿಲಿಂಡರ್​​ವೊಂದನ್ನು ಹೊರತಗೆದುಕೊಂಡು ಹೋಗಿದ್ದಾರೆ. ಮನೆಯಲ್ಲಿದ್ದ ದವಸಧಾನ್ಯಗಳು, ಬಟ್ಟೆ, ಹಣ ಎಲ್ಲವೂ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಮೈಮೇಲಿನ ಬಟ್ಟೆ ಬಿಟ್ಟರೆ, ಉಳಿದೆಲ್ಲ ವಸ್ತುಗಳನ್ನು ಕಳೆದುಕೊಂಡು ಕುಟುಂಬ ಬೀದಿಗೆ ಬಿದ್ದಿದೆ. ಆದರೆ, ಸಾಕು ನಾಯಿಯ ಸಮಯ ಪ್ರಜ್ಞೆಯಿಂದ ಜೀವ ಉಳಿದಿದೆ.

ಹೋಟೆಲ್​​​ನಲ್ಲಿ ಹೊತ್ತಿಕೊಂಡ ಬೆಂಕಿ, ಕೆಲವೇ ನಿಮಿಷಗಳಲ್ಲಿ ಸುತ್ತಮುತ್ತಲಿನ ಅಂಗಡಿಗಳಿಗೆ, ಮನೆಗೆ ವ್ಯಾಪಿಸಲು ಆರಂಭಿಸಿದೆ. ಈ ಸಮಯದಲ್ಲಿ ಮಾಹಿತಿ ತಿಳಿದ ಅಂಗಡಿ ಮುಂದಿನ ಮನೆಯ ಓರ್ವ ಮಹಿಳೆ, ಅಂಗಡಿಯ ಓರ್ವ ಮಾಲೀಕ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಪೈಪ್​ನಿಂದ ನೀರು ಬಿಟ್ಟು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ ಇದೇ ಸಮಯದಲ್ಲಿ ಹೋಟೆಲ್​ನಲ್ಲಿದ್ದ ಸಿಲಿಂಡರ್ ಸ್ಫೋಟವಾಗಿದ್ದರಿಂದ, ಅವರ ಮೈಗೂ  ಬೆಂಕಿ ತಗುಲಿ ಇಬ್ಬರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮೂರು ಅಂಗಡಿಗಳು, ಒಂದು ಮನೆ ಸುಟ್ಟು ಕರಕಲಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಯಲ್ಲಿ ನಾಶವಾಗಿವೆ ಎಂದು ತಿಳಿದು ಬಂದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow