ನಿಮಗೆ ಗೊತ್ತಾ: ಭಾನುವಾರ ನೀವು ಮಾಡುವ ಈ ಎಲ್ಲಾ ಧಾರ್ಮಿಕ ಕಾರ್ಯಗಳಿಂದ ಒಳ್ಳೆಯದಾಗತಂತೆ!

ಫೆಬ್ರವರಿ 2, 2025 - 07:01
 0  11
ನಿಮಗೆ ಗೊತ್ತಾ: ಭಾನುವಾರ ನೀವು ಮಾಡುವ ಈ ಎಲ್ಲಾ ಧಾರ್ಮಿಕ ಕಾರ್ಯಗಳಿಂದ ಒಳ್ಳೆಯದಾಗತಂತೆ!

ಭಾನುವಾರ ಎಲ್ಲರಿಗೂ ಬಹಳ ವಿಶೇಷವಾದ ದಿನ. ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಈ ಕಾರಣಕ್ಕಾಗಿ ಯಾವ ವ್ಯಕ್ತಿ ಸೂರ್ಯನ ಆಶೀರ್ವಾದವನ್ನು ಪಡೆದುಕೊಂಡಿರುತ್ತಾನೆಯೋ ಅವನು ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಮತ್ತು ಆರೋಗ್ಯವನ್ನು ಪಡೆದುಕೊಳ್ಳುತ್ತಾನೆ. ಜಾತಕದಲ್ಲಿ ಸೂರ್ಯನ ಸ್ಥಾನವೂ ದೃಢವಾಗುವುದು. ಜಾತಕದಲ್ಲಿ ದುರ್ಬಲ ಸೂರ್ಯನ ಸ್ಥಾನವನ್ನು ಹೊಂದಿರುವ ಜನರು ಈ ದಿನ ಸೂರ್ಯ ದೇವನನ್ನು ಪೂಜಿಸಬೇಕು. ಪದೇ ಪದೇ ದೈಹಿಕ ಸಮಸ್ಯೆಗಳಿಗೆ ಒಳಗಾಗುತ್ತಿರುವವರು, ಹಣಕಾಸಿನ ಸಮಸ್ಯೆಗಳಿಗೆ ಗುರಿಯಾಗುತ್ತಿರುವವರು ಭಾನುವಾರ ಸೂರ್ಯ ದೇವನ ಆರಾಧನೆಯನ್ನು ಮಾಡಬೇಕು.

ಇನ್ನೂ ಭಾನುವಾರ ಭಕ್ತರು ಬಗೆಬಗೆಯಾಗಿ ಸೂರ್ಯನನ್ನು ಅರ್ಚಿಸಿ ದೇವರ ಆಶೀರ್ವಾದವನ್ನು ಪಡೆಯುತ್ತಾರೆ. ಜತೆಗೆ, ಈ ದಿನ ಲಕ್ಷ್ಮಿಯ ಪೂಜೆಗೂ ಮಹತ್ವವಿದೆ. ಶ್ರದ್ಧಾ, ಭಕ್ತಿಯಿಂದ ದೇವರನ್ನು ಆರಾಧಿಸಿದರೆ, ನಿರ್ಮಲ ಮನಸ್ಸಿನಿಂದ ಪೂಜಾ ಕೈಂಕರ್ಯಗಳನ್ನು ಕೈಗೊಂಡರೆ ಸಕಲ ಇಷ್ಟಾರ್ಥಗಳೂ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ನಮ್ಮದು. ಅಂತೆಯೇ, ಭಾನುವಾರ ಯಾವೆಲ್ಲಾ ಕೈಂಕರ್ಯಗಳಿಂದ ಸೂರ್ಯ ಮತ್ತು ಲಕ್ಷ್ಮೀ ದೇವರ ಒಲುಮೆಗೆ ಪಾತ್ರರಾಗಬಹುದು ಎಂಬುದನ್ನು ಇಲ್ಲಿ ನೋಡೋಣ.

ಸೂರ್ಯ ಜಗತ್ತಿಗೆ ಆಧಾರ. ನಮ್ಮೆಲ್ಲರ ಜೀವನ ಸೂರ್ಯನ ಪ್ರಭೆಯ ಮೇಲೆ ನಿಂತಿದೆ. ಜಗತ್ತಿನ ಸಕಲ ಜೀವರಾಶಿಗಳಿಗೂ ಸೂರ್ಯನೇ ಶಕ್ತಿ. ಇದೇ ಕಾರಣದಿಂದ ಸೂರ್ಯ ದೇವರನ್ನೂ ನಮ್ಮಲ್ಲಿ ಭಕ್ತಿ ಭಾವದಿಂದ ಪೂಜಿಸಲಾಗುತ್ತದೆ. ಸೂರ್ಯ ಎಂದರೆ ಗ್ರಹಗಳ ರಾಜ. ಜಾತಕದಲ್ಲಿ ಸೂರ್ಯನ ಸ್ಥಾನ ಬಲವಾಗಿದ್ದರೆ ಯಾವುದೇ ಕೆಲಸಗಳಲ್ಲಿ ತೊಂದರೆಗಳು ಎದುರಾಗುವುದಿಲ್ಲ ಮತ್ತು ಸೂರ್ಯ ದುರ್ಬಲನಾಗಿದ್ದರೆ ಸಾಕಷ್ಟು ಕಷ್ಟಗಳು ಎದುರಾಗುತ್ತವೆ ಎಂಬುದು ನಮ್ಮ ನಂಬಿಕೆ. 

ಸೂರ್ಯ ದೇವರ ಅನುಗ್ರಹದಿಂದ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದಲು ಸಾಧ್ಯ. ಜತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ನಂಬಲಾಗಿದೆ. ಹೀಗಾಗಿ, ನಾನಾ ಕೈಂಕರ್ಯಗಳಿಂದ ಸೂರ್ಯದೇವನ ಅನುಗ್ರಹವನ್ನು ಪಡೆಯಬಹುದು. ಅಂತೆಯೇ, ಭಾನುವಾರ ಸೂರ್ಯ ದೇವನಿಗೆ ನಮಿಸಿದರೆ ಒಳಿತಾಗುತ್ತದೆ ಎಂಬುದು ನಂಬಿಕೆ.

ಸೂರ್ಯ ದೇವರ ಪೂಜೆಯಲ್ಲಿ ಅರ್ಘ್ಯ ಪ್ರದಾನಕ್ಕೂ ಸಾಕಷ್ಟು ಮಹತ್ವವಿದೆ. ಅಂತೆಯೇ, ಭಾನುವಾರ ಸೂರ್ಯನಿಗೆ ಅರ್ಘ್ಯ ಅರ್ಪಿಸಿದರೆ ಒಳಿತಾಗುತ್ತದೆ ಎಂಬುದು ನಂಬಿಕೆ. ಬೆಳಗ್ಗೆ ಬೇಗ ಎದ್ದು ಸ್ನಾನವನ್ನು ಮಾಡಿ. ಬಳಿಕ ಶುಭ್ರವಾದ ಬಟ್ಟೆಯನ್ನು ಧರಿಸಿ ಸೂರ್ಯ ದೇವರಿಗೆ ನಮಿಸಿ, ಅರ್ಘ್ಯವನ್ನು ಅರ್ಪಿಸಿ. ಅರ್ಘ್ಯವನ್ನು ಅರ್ಪಿಸುವಾಗ `ಓಂ ಸೂರ್ಯಾಯ ನಮಃ ಓಂ ವಾಸುದೇವಾಯ ನಮಃ ಓಂ ಆದಿತ್ಯ ನಮಃ' ಎಂಬ ಮಂತ್ರವನ್ನು ಪಠಿಸಿ. ಹೀಗೆ ಏಕಭಕ್ತಿದಿಂದ ಸೂರ್ಯ ದೇವರ ಆರಾಧನೆ ಮಾಡಿದರೆ, ದೇವರು ಪ್ರಸನ್ನರಾಗುತ್ತಾರೆ ಮತ್ತು ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬುದು ನಂಬಿಕೆ.

ದಾನಕ್ಕೆ ನಮ್ಮಲ್ಲಿ ವಿಶೇಷ ಸ್ಥಾನವಿದೆ. ಪ್ರತಿಯೊಬ್ಬರು ಅವರವರ ಶಕ್ತಿಯಾನುಸಾರ ದಾನ ಮಾಡುವುದು ಮಂಗಳಕರ ಎಂಬ ನಂಬಿಕೆ ನಮ್ಮದು. ಹಾಗೆಯೇ, ಭಾನುವಾರದ ದಾನಕ್ಕೂ ಸಾಕಷ್ಟು ಮಹತ್ವವಿದೆ. ಭಾನುವಾರ ಸೂರ್ಯ ದೇವರ ಅನುಗ್ರಹ ಪಡೆಯಲು ಬೆಲ್ಲ, ಹಾಲು, ಅಕ್ಕಿ ಮತ್ತು ಬಟ್ಟೆಗಳನ್ನು ದಾನ ಮಾಡುವುದು ಒಳ್ಳೆಯದಂತೆ. ಹೀಗೆ ನಿರ್ಮಲ ಮನಸ್ಸಿನಿಂದ, ಯಥಾಶಕ್ತಿ ಮಾಡುವ ದಾನದಿಂದ ನಿಮ್ಮ ಕೆಲಸಗಳಲ್ಲಿ ಯಾವುದೇ ಅಡೆತಡೆಗಳು ಎದುರಾಗುವುದಿಲ್ಲ, ಯಶಸ್ಸು ನಿಮ್ಮದಾಗುತ್ತದೆ ಎಂಬುದು ನಂಬಿಕೆ

ಹಿಂದೂ ಧರ್ಮದಲ್ಲಿ ತಿಲಕಕ್ಕೆ ಪವಿತ್ರ ಸ್ಥಾನವಿದೆ. ಅಂತೆಯೇ, ಭಾನುವಾರ ದೇವರ ಪೂಜೆಯ ಬಳಿಕ ಹಣೆಗೆ ಶ್ರೀಗಂಧದ ತಿಲಕವನ್ನಿಡುವುದು ಬಹಳ ಮಂಗಳಕರ ಎಂದು ಪರಿಗಣಿಸಲಾಗಿದೆ. ಮನೆಯಿಂದ ಹೊರಡುವಾಗ ಶ್ರೀಗಂಧದ ತಿಲಕವನ್ನು ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಪ್ರಾಮಾಣಿಕ ಕಾರ್ಯಗಳೆಲ್ಲಾ ಯಶಸ್ವಿಯಾಗುತ್ತವೆ ಎಂಬ ನಂಬಿಕೆ ನಮ್ಮಲ್ಲಿದೆ. ಇದರ ಜತೆಗೆ, ಭಾನುವಾರ ಕೆಂಪು ಬಟ್ಟೆಯನ್ನು ಧರಿಸುವುದು ಕೂಡಾ ಒಳ್ಳೆಯದು ಎಂದು ನಂಬಲಾಗಿದೆ.

ಹಿಂದೂ ಧರ್ಮದಲ್ಲಿ ದೇಸಿ ತುಪ್ಪವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ತುಪ್ಪದಿಂದ ದೀಪ ಇಡುವುದು ಕೂಡಾ ನಮ್ಮಲ್ಲಿ ಮಂಗಳಕರ. ಭಾನುವಾರ ಸೂರ್ಯ ದೇವರೊಂದಿಗೆ ದೇವಿ ಲಕ್ಷ್ಮಿಯ ಪೂಜೆಯನ್ನು ಮಾಡುವುದೂ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹೀಗಾಗಿ, ಭಾನುವಾರ ಮನೆಯ ಬಾಗಿಲಿನ ಎರಡೂ ಬದಿಯಲ್ಲಿ ದೇಸಿ ತುಪ್ಪದ ದೀಪವನ್ನು ಹಚ್ಚುವುದು ಉತ್ತಮವಂತೆ. ಹೀಗೆ ಮಾಡುವುದರಿಂದ ದೇವಿ ಲಕ್ಷ್ಮಿಯು ಸಂತುಷ್ಟಳಾಗುತ್ತಾಳೆ ಮತ್ತು ಸಂಪತ್ತು, ಸಮೃದ್ಧಿಯನ್ನು ಕರುಣಿಸುತ್ತಾಳೆ ಎಂಬುದು ಆಸ್ತಿಕರ ನಂಬಿಕೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow