ಪತ್ನಿ ಕಿರುಕುಳಕ್ಕೆ ಮತ್ತೊಂದು ಬಲಿ! ಶವವಾಗಿ ಪತ್ತೆಯಾದ ದೆಹಲಿ ಉದ್ಯಮಿ!
ನವದೆಹಲಿ: ಇತ್ತೀಚಿಗೆ ಬೆಂಗಳೂರಿನಲ್ಲಿ ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಬೆಂಗಳೂರಿನಲ್ಲಿ ತನ್ನ ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಇಡೀ ದೇಶದಲ್ಲಿ ಸದ್ದು ಮಾಡಿತ್ತು. ಇದೀಗ ಅಂತಹದ್ದೇ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಹೌದು ಉದ್ಯಮಿಯೊಬ್ಬರು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ್ದಾರೆ.
ದೆಹಲಿಯ ವುಡ್ ಬಾಕ್ಸ್ ಕೆಫೆಯ ಸಹ-ಸಂಸ್ಥಾಪಕ ಪುನೀತ್ ಖುರಾನಾ ಅವರು ಇಲ್ಲಿನ ಮಾಡೆಲ್ ಟೌನ್ನ ಕಲ್ಯಾಣ್ ವಿಹಾರ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಖುರಾನಾ ಮತ್ತು ಅವರ ಪತ್ನಿ ಮಾಣಿಕಾ ಜಗದೀಶ್ ಪಹ್ವಾ ಜೊತೆಗಿನ ವಿಚ್ಛೇದನ ಹಾಗೂ ಕೆಫೆ ವ್ಯವಹಾರಕ್ಕೆ ಸಂಬಂಧಿಸಿದ ಗಲಾಟೆ ನಡುವೆಯೇ ಈ ಘಟನೆ ನಡೆದಿದೆ. ರಾಷ್ಟ್ರ ರಾಜಧಾನಿಯಲ್ಲಿ ವುಡ್ಬಾಕ್ಸ್ ಕೆಫೆ ಹೊಂದಿದ್ದ ದಂಪತಿ ಜಂಟಿಯಾಗಿ ವ್ಯವಹಾರ ನಡೆಸುತ್ತಿದ್ದರು.
ಇಬ್ಬರ ನಡುವೆ ವ್ಯವಹಾರದ ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ತಾಪ ಏರ್ಪಟ್ಟಿತ್ತು. ಅಲ್ಲದೇ ಇಬ್ಬರ ನಡುವೆ ಮೊದಲಿನಿಂದಲೂ ದಾಂಪತ್ಯ ಕಲಹವಿತ್ತು. ಇದೇ ಕಾರಣಕ್ಕೆ ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇವರಿಬ್ಬರು 2016ರಲ್ಲಿ ಮದುವೆಯಾಗಿದ್ದರು, ಪತ್ನಿ ಮೇಲೆ ಖುರಾನಾಗೆ ಅಸಮಾಧಾನ ಇತ್ತು ಎಂದು ಕುಟುಂಬಸ್ಥರು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಇಬ್ಬರ ನಡುವಿನ 16 ನಿಮಿಷಗಳ ಸಂಭಾಷಣೆಯ ಆಡಿಯೋವೊಂದು ಲಭ್ಯವಾಗಿದೆ.
ಅದರಲ್ಲಿ ಇಬ್ಬರು ಕೆಫೆ ವ್ಯವಹಾರದ ವಿಚಾರವಾಗಿ ಜಗಳವಾಡುತ್ತಿರುವುದು ಕಂಡುಬಂದಿದೆ. ಆಡಿಯೋದಲ್ಲಿ ನಾವಿಬ್ಬರೂ ಡಿವೋರ್ಸ್ ಪಡೆದುಕೊಳ್ಳೋಣ. ಆದ್ರೆ ವಿಚ್ಛೇದನದ ನಂತರವೂ ವ್ಯವಹಾರದಲ್ಲಿ ಪಾಲುದಾರಳಾಗಿರುತ್ತೇನೆ. ನೀವು ನನ್ನ ಬಾಕಿ ಸಾಲವನ್ನ ತೀರಿಸಬೇಕು ಎಂದು ಖುರಾನಾ ಪತ್ನಿ ಮನಿಕಾ ಹೇಳಿದ್ದಾರೆ. ಘಟನೆಯ ಬಳಿಕ ಪೊಲೀಸರು ಖುರಾನಾ ಪತ್ನಿಯ ಫೋನನ್ನು ವಶಕ್ಕೆ ಪಡೆದಿದ್ದು, ಆಕೆಯನ್ನು ವಿಚಾರಣೆಗೆ ಕರೆದಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?