ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ BBMP ಲಾರಿ ಚಾಲಕ ಸಾವು! ಕೊಲೆ ಪ್ರಕರಣ ದಾಖಲು, ನಾಲ್ವರು ಅರೆಸ್ಟ್

ಬೆಂಗಳೂರು: ಇತ್ತೀಚೆಗೆ ನಡೆದ ಅಪಘಾತದ ಬಳಿಕ ಸ್ಥಳೀಯರಿಂದ ಹಲ್ಲೆಗೊಳಗಾಗಿದ್ದ ಬಿಬಿಎಂಪಿ ಕಸದ ಲಾರಿಯ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೊಂಡಯ್ಯ ಮೃತ ದುರ್ಧೈವಿಯಾಗಿದ್ದು, ಮಾರ್ಚ್ 29ರಂದು ಥಣಿಸಂದ್ರದ ರೈಲ್ವೇ ಟ್ರ್ಯಾಕ್ ಬಳಿ ಕಸದ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿ, ಬಾಲಕ ಐಮಾನ್ (10) ಮೃತಪಟ್ಟಿದ್ದನು.
ಅಪಘಾತವನ್ನು ಕಂಡು ರೊಚ್ಚಿಗೆದ್ದ ಸ್ಥಳೀಯರು, ಲಾರಿಗೆ ಬೆಂಕಿ ಹಚ್ಚಿ, ಚಾಲಕ ಕೊಂಡಯ್ಯ ಅವರ ಮೇಲೆ ಹಲ್ಲೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಮಾರಣಾಂತಿಕ ಹಲ್ಲೆಗೀಡಾದ ಕೊಂಡಯ್ಯರನ್ನು ಸಮೀಪದ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಅಬ್ದುಲ್ ಖಾದರ್ ಎಂಬವರು ಮಗ ಐಮಾನ್ನೊಂದಿಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ ಕಸದ ಲಾರಿ ಡಿಕ್ಕಿ ಹೊಡೆದಿತ್ತು. ಪರಿಣಾಮ ರಸ್ತೆಯ ಮೇಲೆ ಬಿದ್ದ ಐಮಾನ್ನ ತಲೆ ಮೇಲೆ ಲಾರಿ ಹರಿದಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಅಬ್ದುಲ್ ಖಾದರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಹೆಣ್ಣೂರು ಸಂಚಾರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಅಲ್ಲದೆ, ಲಾರಿ ಚಾಲಕನನ್ನು ಥಳಿಸಿದ್ದ ಆರೋಪದಡಿ ನಾಲ್ವರು ಆರೋಪಿಗಳನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಕೊಂಡಯ್ಯ ಮೃತಪಟ್ಟ ಹಿನ್ನೆಲೆಯಲ್ಲಿ ಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುವುದು ಎಂದು ಸಂಪಿಗೆಹಳ್ಳಿ ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






