ಮುನಿರತ್ನ ವಿರುದ್ದ ಡಿ.ಕೆ. ಶಿವಕುಮಾರ್ ಕಿಡಿ: ಆರ್.ಆರ್. ನಗರ ಜನರ ಬಗ್ಗೆ ಅನುಕಂಪ ವ್ಯಕ್ತಪಡಿಸಿದ ಡಿಸಿಎಂ
ಬೆಂಗಳೂರು: "ನೀವು ಎಂತಹ ನರಕದಲ್ಲಿ ಬದುಕುತ್ತಿದ್ದೀರಿ ಎನ್ನುವುದು ನನಗೆ ಅರ್ಥವಾಗುತ್ತದೆ. ಇಂತಹ ಶಾಸಕರನ್ನು ಆಯ್ಕೆ ಮಾಡಿಕೊಂಡಿರುವುದು ನಿಮ್ಮ ಪರಿಸ್ಥಿತಿಯ ದುರ್ಭಾಗ್ಯ," ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಟೀಕಿಸಿದರು.
ಮತ್ತಿಕೆರೆಯ ಜೆ.ಪಿ. ಪಾರ್ಕ್ನಲ್ಲಿ ನಡೆದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರ ಜೊತೆ ಮಾತನಾಡಿದ ಅವರು, ಆರ್.ಆರ್. ನಗರ ಶಾಸಕ ಮುನಿರತ್ನ ನಾಯ್ಡು ಅವರ ನಡೆಗೆ ಕಿಡಿ ಕಾರಿದರು.
"ನಮ್ಮ ಸಾರ್ವಜನಿಕರ ಸಂವಾದ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಮುನಿರತ್ನ ಮತ್ತು ಅವರ ಬೆಂಬಲಿಗರು ಅಡ್ಡಿಪಡಿಸಿದ್ದು ಬೇಸರದ ವಿಚಾರ. ಅವರಿಗೆ ತಾಳ್ಮೆಯೇ ಇಲ್ಲ. ಕಾರ್ಯಕ್ರಮ ಹಾಳುಮಾಡಲು ಬಂದಂತಿದೆ," ಎಂದು ಡಿಸಿಎಂ ಹೇಳಿದರು.
"ಆದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನೀವು ಕೂಡ ಬೇಸರಪಡುವ ಅಗತ್ಯವಿಲ್ಲ. ಇಂತಹವರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಜನರ ಮನಸ್ಸಿಗೆ ನೋವಾಗುತ್ತಿದೆ ಎಂಬುದು ನನಗೆ ತಿಳಿದಿದೆ. ಸೂಕ್ತ ಸಮಯದಲ್ಲಿ ನೀವು ಉತ್ತರ ನೀಡಬೇಕು," ಎಂದು ಶಿವಕುಮಾರ್ ಅವರು ಜನರಿಗೆ ಕರೆ ನೀಡಿದರು.
"ಇಂತಹ ಪ್ರತಿನಿಧಿಯನ್ನು ಮುಂದುವರಿಸಬೇಕೋ ಬೇಡವೋ ಎಂಬುದನ್ನು ಜನ ತೀರ್ಮಾನಿಸಬೇಕು. ರಾಜಕಾರಣದಲ್ಲಿ ಗೆಲುವು, ಸೋಲು ಸಹಜ. ಯಾವುದು ಶಾಶ್ವತವೂ ಅಲ್ಲ," ಎಂದು ಅವರು ಸ್ಪಷ್ಟಪಡಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?