ಮೆಟ್ರೋ ಟಿಕೆಟ್ ದರ ಏರಿಕೆ: ಸಿಎಂ ಗೆ ಪತ್ರ ಬರೆದು ಎಎಪಿ ರಾಜ್ಯಾಧ್ಯಕ್ಷ ಮನವಿ ಮಾಡಿದ್ದೇನು!?

ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರು ಮೆಟ್ರೋ ಟಿಕೆಟ್ ದರ ಏರಿಕೆ ಮಾಡುವ ಸಂಸ್ಥೆಯ ನಿರ್ಧಾರವನ್ನು ವಿರೋಧ ಮಾಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಚಂದ್ರು, ಈಗಾಗಲೇ ಮೆಟ್ರೋ ಪ್ರಯಾಣ ದರ ದುಬಾರಿಯಾಗಿದ್ದು, ಈಗ ಮತ್ತೆ ಪ್ರಯಾಣ ದರ ಏರಿಕೆ ಮಾಡುವುದರಿಂದ ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ ಎಂದು ಹೇಳಿದ್ದಾರೆ.
ಬಿಎಂಆರ್ಸಿಎಲ್ ಈಗಾಗಲೇ ಆರ್ಥಿಕ ಸಂಪನ್ಮೂಲ ವೃದ್ಧಿ ಹಾಗೂ ಲಾಭ ಗಳಿಕೆಯಲ್ಲಿ ಮುಂದಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರ ಬಗ್ಗೆ ಕಾಳಜಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮರೆತಿರುವುದು ದುರದೃಷ್ಟಕರ. 2023-2024ರ ಆರ್ಥಿಕ ವರ್ಷದಲ್ಲಿ ಬಿಎಂಆರ್ಸಿಎಲ್ 129.3 ಕೋಟಿ ರೂ. ಲಾಭ ಗಳಿಸಿದೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ. ಲಾಭದಾಯಕ ಹಾದಿಗೆ ಬಂದಿದ್ದರೂ ಪ್ರಯಾಣ ದರ ಹೆಚ್ಚಳಕ್ಕೆ ದರ ನಿಗದಿ ಮಾಡಲು ಸಮಿತಿ ರಚಿಸಿರುವುದು ಸರಿಯಲ್ಲ ಎಂದರು
ಬಿಎಂಆರ್ಸಿಎಲ್ ಕೂಡಲೇ ದರ ಏರಿಕೆ ಪ್ರಸ್ತಾಪವನ್ನು ಕೈಬಿಡಬೇಕು. ಸಿಎಂ ಕೂಡಲೇ ಈ ವಿಚಾರವನ್ನು ಗಮನಿಸಿ ದರ ಏರಿಕೆಗೆ ಕಡಿವಾಣ ಹಾಕಬೇಕು. ಬಿಎಂಆರ್ಸಿಎಲ್ನ ಈ ಜನ ವಿರೋಧಿ ನಡೆಯನ್ನು ಆಮ್ ಆದ್ಮಿ ಪಾರ್ಟಿ ಬಲವಾಗಿ ಖಂಡಿಸುತ್ತದೆ ಎಂದರು
ಈಗ ಇರುವ ಆರು ಬೋಗಿಗಳ ಮೆಟ್ರೋದಲ್ಲಿ ಒಮ್ಮೆ 1,626 ಪ್ರಯಾಣಿಕರು ಪ್ರಯಾಣಿಸಬಹುದು. ಆದರೆ ದಟ್ಟಣೆ ಸಮಯದಲ್ಲಿ ಒಮ್ಮೆಲೆ 2,500ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದಾರೆ. ಮಿತಿ ಮೀರಿದ ದಟ್ಟಣೆಯಿದ್ದರೂ, ಬೋಗಿ ಸಂಖ್ಯೆಯನ್ನು ಹೆಚ್ಚಿಸುವುದನ್ನು ಬಿಟ್ಟು, ಪ್ರಯಾಣದರ ಏರಿಕೆ ಬಗ್ಗೆ ಬಿಎಂಆರ್ಸಿಎಲ್ ಚಿಂತಿಸುತ್ತಿದೆ. ಇವರಿಗೆ ಪ್ರಯಾಣಿಕರ ಅನುಕೂಲಕ್ಕಿಂತ ಲಾಭ ಮಾಡಿಕೊಳ್ಳುವುದೇ ಮುಖ್ಯವಾಗಿದೆ ಎಂದರು.
ಪ್ರಯಾಣಿಕರಿಗೆ ಸುಖಕರ ಪ್ರಯಾಣ ಕೊಡುವಲ್ಲಿ ಬಿಎಂಆರ್ಸಿಎಲ್ ವಿಫಲವಾಗಿದೆ. ಮೂಲಸೌಕರ್ಯ, ಪ್ರಯಾಣಿಕ ಸ್ನೇಹಿ ವಾತಾವರಣದಲ್ಲಿ ಬೆಂಗಳೂರು ಮೆಟ್ರೋಗೆ ಹೋಲಿಸಿದರೆ ದಿಲ್ಲಿ ಹಾಗೂ ಮುಂಬೈನ ಮೆಟ್ರೋ ರೈಲು ಸೇವೆ ಮಾದರಿಯಾಗಿದೆ. ಈಗ ಪ್ರಯಾಣದರ ಹೆಚ್ಚಳ ಜನರಿಗೆ ಮತ್ತಷ್ಟು ಹೊರೆಯಾಗಲಿದೆ. ಮೊದಲು ಮೂಲಸೌಕರ್ಯಗಳನ್ನು ಒದಗಿಸುವತ್ತ ಗಮನ ಕೊಡಲಿ ಎಂದು ಹೇಳಿದರು.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






